ಕೊರೊನಾ ಸಂಕಷ್ಟದಲ್ಲಿ ವೃದ್ಧೆಯನ್ನು ಬೀದಿಪಾಲು ಮಾಡಿದ ಕುಟುಂಬ
ಮೈಸೂರು, ಮೇ 25: ರಾಜ್ಯ ಮತ್ತು ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತಾಂಡವವಾಡುತ್ತಿದೆ. ಇಂತಹ ಸಮಯದಲ್ಲಿ ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರು ಮನೆಯಿಂದ ಹೊರಗೆ ಬರಬಾರದು ಎಂದು ಸರ್ಕಾರ ಸಲಹೆ ನೀಡಿದೆ.
Recommended Video
ಕೊರೊನಾ ಲಾಕ್ಡೌನ್ನಿಂದ ಜನರ ಬದುಕು ಕೂಡಾ ದುಸ್ಥಿತಿಗೆ ತಲುಪಿದೆ. ಒಂದು ಹೊತ್ತಿನ ಆಹಾರಕ್ಕಾಗಿ ಬಡವರು ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ತನ್ನ ಮನೆಯವರೇ ವೃದ್ಧ ಮಹಿಳೆಯನ್ನು ಬೀದಿಪಾಲು ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಕಟ್ಟೆಮಳವಾಡಿಯಲ್ಲಿ ನಡೆದಿದೆ.
ವೃದ್ಧೆಯ ಮಕ್ಕಳು ಸ್ಕೂಟರ್ನಲ್ಲಿ ಬಂದು ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ ಅಜ್ಜಿಯನ್ನು ಹುಣಸೂರಿನ ಸ್ನೇಹಜೀವಿ ಬಳಗದ ಸದಸ್ಯರು ವಾಪಸ್ಸು ಮನೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಹುಣಸೂರಿನ ಅಗ್ರಹಾರದ ನಿವಾಸಿಯಾಗಿರುವ ಅಜ್ಜಿ, ತಮ್ಮ ಮಕ್ಕಳೇ ತನಗೆ ಕಿರುಕುಳ ನೀಡುತ್ತಾರೆ. ನಾನು ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ನಂತರ ಪೊಲೀಸರ ಸಹಾಯದಿಂದ ಅಜ್ಜಿಯ ಮನವೊಲಿಸಿದರು.
ವೃದ್ಧ ಅಜ್ಜಿಯನ್ನು ಅವರ ಮನೆಗೆ ತಲುಪಿಸಿ, ಚೆನ್ನಾಗಿ ನೋಡಿಕೊಳ್ಳುವಂತೆ ಮಕ್ಕಳಿಗೆ ಪೊಲೀಸರು ಬುದ್ಧಿ ಹೇಳಿ ಬಂದಿದ್ದಾರೆ. ಪೊಲೀಸರು ಹಾಗೂ ಸ್ನೇಹ ಬಳಗ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.