ನಂಜನಗೂಡಿನಲ್ಲಿ ಮೆಕಾನಿಕಲ್ ಎಂಜಿನಿಯರ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಮೈಸೂರು, ಜೂನ್ 30: ದೇಶ ಎಷ್ಟೇ ಆರ್ಥಿಕ, ವೈಜ್ಞಾನಿಕ, ಸಾಮಾಜಿಕವಾಗಿ ಮುಂದುವರೆದರೂ ಸಾಮಾಜಿಕ ಪಿಡುಗುಗಳು ಅಲ್ಲಲ್ಲಿ ಇನ್ನೂ ಜೀವಂತವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ನಂಜನಗೂಡಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ಕ್ಷುಲ್ಲಕ ಕಾರಣಕ್ಕೆ ಮೆಕಾನಿಕಲ್ ಎಂಜಿನಿಯರ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಡೆದಿದೆ. ತಾಲ್ಲೂಕಿನ ಶಿರಮಳ್ಳಿ ಗ್ರಾಮದ ಮೆಕಾನಿಕಲ್ ಎಂಜಿನಿಯರ್ ನವೀನ್ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. ಬಹಿಷ್ಕಾರದಿಂದ ಬೇಸತ್ತು ಇಡೀ ಕುಟುಂಬ ದಯಾಮರಣ ಕೋರಿ ಮನವಿ ಮಾಡಿದೆ. ನ್ಯಾಯ ಸಿಗದೇ ಇದ್ದಲ್ಲಿ ಸಾಮೂಹಿಕ ಆತ್ಮಹತ್ಯೆಗೂ ನಿರ್ಧರಿಸಿದೆ.
ಶಿರಮಳ್ಳಿ ಗ್ರಾಮದ ಮಹದೇವಪ್ಪನವರ ಮಗನಾದ ನವೀನ್ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಕೈತುಂಬಾ ಸಂಬಳ ಪಡೆದುಕೊಳ್ಳುತ್ತಿದ್ದರು. ಆದರೆ ಇದೀಗ ಅವರು ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿ ಮಾಡಲು ನಿಂತಿದ್ದಾರೆ. ಕೃಷಿಯನ್ನು ಅಪ್ಪಿಕೊಳ್ಳಲು ಸ್ವಗ್ರಾಮಕ್ಕೆ ಬಂದ ಎಂಜಿನಿಯರ್ ಗೆ ಇದೀಗ ಕಿರುಕುಳ ಆರಂಭವಾಗಿದೆ. ಇವರ ಮನೆಯ ಮುಂಭಾಗದಲ್ಲಿ ನಡೆದ ಚರಂಡಿ ಕಾಮಗಾರಿಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಚರಂಡಿ ಕಾಮಗಾರಿಗೂ ಕುಟುಂಬಕ್ಕೂ ಸಂಬಂಧವಿಲ್ಲದಿದ್ದರೂ ಸ್ವಪ್ರತಿಷ್ಠೆಗಾಗಿ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.

ನಾಲ್ಕು ವರ್ಷಗಳ ಹಿಂದೆ ಸ್ವಚ್ಛ ಭಾರತ ಅಭಿಯಾನದ ಯೋಜನೆ ಅಡಿಯಲ್ಲಿ ಮನೆ ಮುಂದೆ ಮಹದೇವಪ್ಪ ಅವರು ಶೌಚಾಲಯ ನಿರ್ಮಿಸಿದ್ದರು. ಆದರೆ ಮನೆ ಮುಂದೆ ನಡೆದ ಚರಂಡಿ ಕಾಮಗಾರಿಯನ್ನು ಗುತ್ತಿಗೆದಾರ ಸ್ಥಗಿತಗೊಳಿಸಿದ್ದರು. ಕಾಮಗಾರಿಗೂ ಶೌಚಾಲಯಕ್ಕೂ ಸಂಬಂಧವಿಲ್ಲದಿದ್ದರೂ ಶೌಚಾಲಯ ತೆರವುಗೊಳಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದಿದ್ದರು. ಇದನ್ನು ಒಪ್ಪದ್ದಕ್ಕೆ ಮಹದೇವಪ್ಪ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಇದೀಗ ಇಂಜಿನಿಯರಿಂಗ್ ವೃತ್ತಿ ತೊರೆದು ನಾಲ್ಕು ಎಕರೆ ಜಮೀನಿನಲ್ಲಿ ಚೆಂಡು ಹೂವು, ರೇಷ್ಮೆ ಹಾಗೂ ಇನ್ನಿತರ ಬೆಳೆ ಬೆಳೆದಿದ್ದಾರೆ ನವೀನ್. ಆದರೆ ಕೈಗೆ ಬಂದಿರುವ ಬೆಳೆ ಬಾಯಿಗೆ ಬರದ ಹಾಗೆ ಆಗಿದೆ. ಗ್ರಾಮದ ಯಾವೊಬ್ಬ ಕೂಲಿ ಕಾರ್ಮಿಕರೂ ಈ ಕುಟುಂಬದ ಜಮೀನಿಗೆ ಕೆಲಸಕ್ಕೆ ಬರುವಂತಿಲ್ಲ, ಕೆಲಸಕ್ಕೆ ಬಂದರೆ ದಂಡ ವಿಧಿಸುವ ಎಚ್ಚರಿಕೆಯನ್ನೂ ಗ್ರಾಮದ ಮುಖಂಡರು ನೀಡಿದ್ದಾರೆ.

ಕೂಲಿ ಕಾರ್ಮಿಕರು ಜಮೀನಿನ ಕೆಲಸಕ್ಕೆ ಬಾರದ ಕಾರಣ ರೇಷ್ಮೆ ಬೆಳೆ ಮತ್ತು ಚೆಂಡು ಮಲ್ಲಿಗೆ ನೆಲಕಚ್ಚಿವೆ. ಹೀಗಾಗಿ ನ್ಯಾಯಕ್ಕಾಗಿ ನಂಜನಗೂಡಿನ ತಹಶೀಲ್ದಾರ್ ಕಚೇರಿಯ ಕದ ತಟ್ಟಿದೆ ಈ ಕುಟುಂಬ.












Click it and Unblock the Notifications