ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಸೋಲಲು ಕಾರಣ ತೆರೆದಿಟ್ಟ ಸಿದ್ದರಾಮಯ್ಯ
Recommended Video

ಬೆಂಗಳೂರು, ಅಕ್ಟೋಬರ್ 8: ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ವ ಕ್ಷೇತ್ರದಲ್ಲಿಯೇ ಸೋಲು ಅನುಭವಿಸಿದ್ದ ಸಿದ್ದರಾಮಯ್ಯ, ತಮ್ಮ ಸೋಲಿಗೆ ಅನೇಕ ಶಕ್ತಿಗಳು ಕೆಲಸ ಮಾಡಿವೆ ಎಂದು ಆರೋಪಿಸಿದ್ದರು.
ತಮ್ಮ ಸೋಲಿಗೆ ಅಪಪ್ರಚಾರವೇ ಕಾರಣ ಎಂದು ಈ ಹಿಂದೆ ಆರೋಪಿಸಿದ್ದರು. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ಕೆಲಸ ಮಾಡಿದ್ದೇನೆ. ಆದರೂ ಅವರು ನಮ್ಮ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಲಿಲ್ಲ. ನಾನು ಜಾತಿಗಳನ್ನು ಒಡೆಯುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಈ ಹಿಂದೆ ಅವರು ಆರೋಪಿಸಿದ್ದರು.
ಹಿಂದುಳಿದ ಹಾಗೂ ಶೋಷಿತ ಸಮುದಾಯಕ್ಕೆ ತಲೆ ಎತ್ತಿ ನಡೆಯುವಂತಹ ವಾತಾವರಣ ಸೃಷ್ಟಿಸಿಕೊಡಲು ಬದ್ಧನಾಗಿದ್ದೆ. ಅದಕ್ಕೆ ಅಗತ್ಯವಾದ ಯೋಜನೆಗಳನ್ನು ಕೂಡ ಸರ್ಕಾರ ಅನುಷ್ಠಾನಗೊಳಿಸಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಇದಾವುದನ್ನೂ ಪರಿಗಣಿಸಿರಲಿಲ್ಲ.
ನಾನು ಸರಿಯಾಗಿ ಮಾತನಾಡಿಸದೆಯೇ ಇದ್ದದ್ದು, ಮುಖ್ಯಮಂತ್ರಿ ನಿವಾಸಕ್ಕೆ ಬಂದಾಗ ಒಳಬಿಡಲು ನಿರಾಕರಿಸಿ ಪೊಲೀಸರು ತಡೆದಿದ್ದು ಮುಂತಾದ ಕ್ಷುಲ್ಲಕ ಕಾರಣಗಳನ್ನು ನೀಡಿ ಮತ ಹಾಕದೆ ನನ್ನನ್ನು ಸೋಲಿಸಿರುವುದನ್ನು ಕ್ಷೇತ್ರದ ಅನೇಕರು ಸಮರ್ಥಿಸಿಕೊಂಡಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಬದಿಗಿರಿಸಿ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕಿತ್ತು ಎಂದು ಸಿದ್ದರಾಮಯ್ಯ ವರುಣಾಕ್ಷೇತ್ರದಲ್ಲಿ ತಮ್ಮ ಮಗ ಯತೀಂದ್ರ ಅವರನ್ನು ಗೆಲ್ಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ಏರ್ಪಡಿಸಿದ್ದ ಸಮಾರಂಭದಲ್ಲಿ ಹೇಳಿದ್ದರು.
ಆದರೆ, ತಮ್ಮ ಸೋಲಿಗೆ ಕಾರಣ ಯಾರು ಎಂಬುದರ ಬಗ್ಗೆ ಅವರು ಈಗ ಬೇರೆಯದೇ ಹೇಳಿಕೆ ನೀಡಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಿದ್ದರಾಮಯ್ಯ, ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
|
ಹಿಂದೂ ವಿರೋಧಿ ಎಂದರು
ನಾನು ಎಲ್ಲ ಧರ್ಮದವರನ್ನು ಪ್ರೀತಿಸುತ್ತೇನೆ. ಜೀವರಕ್ಷಣೆಗಾಗಿ ವ್ಯಕ್ತಿಗೆ ನೀಡುವ ರಕ್ತದ ಮೇಲೆ ಜಾತಿ ಹೆಸರು ಬರೆದಿರುವುದಿಲ್ಲ. ಆಗ ರೋಗಿಯ ಜೀವ ಅಮೂಲ್ಯ, ಜಾತಿ ಮುಖ್ಯವಾಗುವುದಿಲ್ಲ. ಇದನ್ನು ಹೇಳಿದ ನನ್ನನ್ನು ಹಿಂದೂ ವಿರೋಧಿ ಎಂದರು. ಇಂತಹ ಅಪಪ್ರಚಾರಗಳಿಂದಲೇ ಚುನಾವಣೆಯಲ್ಲಿ ನಮಗೆ ಸೋಲಾಯಿತು ಎಂದು ಒಂದು ಟ್ವೀಟ್ನಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
|
ನನ್ನ ಹೆಂಡತಿ ಪೂಜೆ ಮಾಡ್ತಾರೆ
ನಿಮ್ಮ ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಬೇಕಾ? ನಿಮ್ಮ ದನಕರುಗಳು ಸುರಕ್ಷಿತವಾಗಿ ಕೊಟ್ಟಿಗೆಗೆ ಬರಬೇಕಾ? ಸುರಕ್ಷಿತವಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಬೇಕಾ? ಎಂದೆಲ್ಲ ಹೇಳಿ ಬಿಜೆಪಿಯವರು ಮತ ಕೇಳಿದ್ದರು. ನಾನೇನು ಪೂಜೆಯ ವಿರೋಧಿಯಲ್ಲ. ನನ್ನ ಹೆಂಡತಿ ಪ್ರತಿ ದಿನವೂ ಪೂಜೆ ಮಾಡ್ತಾರೆ.ನಾನು ಹೇಗೆ ಹಿಂದು ವಿರೋಧಿ? ಎಂದು ತಾವು ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರಲು ಮುಂದಾದಾಗ ಎದುರಾದ ವಿರೋಧಿಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದರು.
|
ಮಹನೀಯರ ಜಯಂತಿ ಆಚರಣೆ
ನನ್ನ ದೇವರ ವಿರೋಧಿ ಅಂತಾರೆ. ಶ್ರೀಕೃಷ್ಣ ,ಕಿತ್ತೂರು ಚೆನ್ನಮ್ಮ ,ಭಗೀರಥ, ನಾರಾಯಣಗುರು,ಟಿಪ್ಪು, ವಿಶ್ವಕರ್ಮ, ದೇವರದಾಸಿಮಯ್ಯ ಸೇರಿ ಹಲ ಮಹನೀಯರ ಜಯಂತಿ ಆಚರಣೆ ಆರಂಭಿಸಿದ್ದು ನಾನು. ಇದರ ನಂತರವೂ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ವಿಧಾನಸಭೆ ಚುನಾವಣೆಗೆ ಮುನ್ನ ಅಪಪ್ರಚಾರ ಮಾಡಿದರು ಎಂದು ಸಿದ್ದರಾಮಯ್ಯ ತಾವು ಹಿಂದೂ ವಿರೋಧಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಹು-ಕೇತುಗಳು ಸೇರಿ ಸೋಲಿಸಿದರು
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನ ಜಿ.ಟಿ. ದೇವೇಗೌಡ ಎದುರು ಸ್ಪರ್ಧಿಸಿ ಸೋಲು ಅನುಭವಿಸಿದ್ದ ಸಿದ್ದರಾಮಯ್ಯ, ಚಾಮುಂಡೇಶ್ವರಿಯ ಮತದಾರರಿಗೆ ಮೊದಲೇ ಮಾತು ನೀಡಿದ್ದರಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ರಾಹು-ಕೇತು, ಶನಿ ಎಲ್ಲಾ ಸೇರಿಕೊಂಡು ನನ್ನನ್ನು ಸೋಲಿಸಿಬಿಟ್ಟರು ಎಂದು ಕಳೆದ ವಾರವಷ್ಟೇ ಹೇಳಿಕೆ ನೀಡಿದ್ದರು. ನಾನು ಮತ್ತೆ ಮುಖ್ಯಮಂತ್ರಿಯಾಗಬಾರದು ಎಂದು ವಿರೋಧಿಗಳೆಲ್ಲ ಒಟ್ಟಾಗಿ ಕಾಲೆಳೆದರು. ಹೊಟ್ಟೆಯ ಕಿಚ್ಚಿಗೆ ಔಷಧಿ ಇದೆಯೇ? ಎಂದು ಹೇಳಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ರಾಹು, ಕೇತು, ಶನಿ ಎಂಬ ಹೇಳಿಕೆ ಯಾರನ್ನು ಉದ್ದೇಶಿಸಿದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಅವರನ್ನು ಸೋಲಿಸಿದ ರಾಹು-ಕೇತು ಜೆಡಿಎಸ್ನವರೇ ಎಂದು ಯಡಿಯೂರಪ್ಪ ಲೇವಡಿ ಮಾಡಿದ್ದರು.











Click it and Unblock the Notifications