ವಿದೇಶಿಗರ ಪಾಲಿನ ಅನ್ನಪೂರ್ಣೆ ಮೈಸೂರಿನ ಶಶಿಕಲಾ..! ಇದು ಹೇಗೆ ಸಾಧ್ಯ?
ಮೈಸೂರು, ಜನವರಿ 17: ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸಿಗರಿಗೊಂದು ಸ್ವರ್ಗವೇ ಸರಿ. ಹಾಗಾಗಿ ಇಲ್ಲಿಗೆ ದಿನನಿತ್ಯ ಸಾವಿರಾರು ದೇಶ-ವಿದೇಶಗಳ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದು, ಹೀಗೆ ಆಗಮಿಸುವ ಪ್ರವಾಸಿಗರು ಮೈಸೂರು ಶೈಲಿಯ ಊಟ, ತಿಂಡಿಯನ್ನು ಇಷ್ಟಪಡುತ್ತಾರೆ. ಇಂತಹವರಿಗಾಗಿಯೇ ಮೈಸೂರಿನಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿಯೇ ಮೃಷ್ಟಾನ್ನ ಭೋಜನವನ್ನು ಬಡಿಸುತ್ತಾ ಬಂದಿದ್ದಾರೆ.
ಸದ್ಯಕ್ಕೆ ಇವರ ಬೋಜನವನ್ನು ಇಷ್ಟಪಟ್ಟು ಖಾಯಂ ಅತಿಥಿಗಳಾಗಿರುವವರು ವಿದೇಶಿಗರು ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಮೈಸೂರಿನ ಗೋಕುಲಂನ ನಿವಾಸಿ ಶಶಿಕಲಾ ಎಂಬುವರೇ ವಿದೇಶಿಗರ ಪಾಲಿನ ಅನ್ನಪೂರ್ಣೆಯಾಗಿದ್ದಾರೆ. ಇವರ ಮನೆಗೆ ಮೈಸೂರು ಶೈಲಿಯ ಊಟ ಸವಿಯಲೆಂದೇ ವಿದೇಶಿ ಪ್ರವಾಸಿಗರು ಬರುತ್ತಿರುವುದು ಇವರ ಕೈರುಚಿಗೆ ಹಿಡಿದ ಕೈಗನ್ನಡಿಯಾಗಿದೆ.

ಮೈಸೂರಿಗೆ ಆಗಮಿಸುವ ಪ್ರವಾಸಿಗರ ಪೈಕಿ ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗೆ ಬರುವ ವಿದೇಶಿ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಿದ ಬಳಿಕ ಇಲ್ಲಿನ ತಿನಿಸುಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಹೋಟೆಲ್ ಗಳಿಗಿಂತ ಮನೆ ಅಡುಗೆಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಅವರಿಗಾಗಿಯೇ ಶಶಿಕಲಾ ಅವರು ತಮ್ಮ ಮನೆಯಲ್ಲಿಯೇ ಅಡುಗೆಯನ್ನು ಮಾಡಿ ಬಡಿಸಿ ತೃಪ್ತಿಪಡಿಸಿ ಕಳುಹಿಸುವುದು ಇವರ ವಿಶೇಷತೆಯಾಗಿದೆ.
ವಿದೇಶಿಗರಿಗೆ ಮೈಸೂರು ಶೈಲಿ ಊಟ
ಶಶಿಕಲಾ ಅವರ ಮನೆಗೆ ತೆರಳಿದ ಪ್ರವಾಸಿಗರಿಗೆ ಮೈಸೂರು ಪಾಕದಿಂದ ಆರಂಭವಾಗಿ (ಮೈಸೂರು ವೀಳ್ಯದೆಲೆ) ತಾಂಬೂಲದವರೆಗೆ ವಿವಿಧ ಬಗೆಯ ತಿನಿಸುಗಳನ್ನು ಸವಿಯುವ ಅವಕಾಶದೊಂದಿಗೆ ಅಕ್ಕರೆಯ ಅತಿಥ್ಯ, ಕಿವಿಗೆ ಇಂಪಾದ ಸಂಗೀತಯೂ ಲಭ್ಯವಾಗುತ್ತದೆ. ಹೀಗಾಗಿ ಒಮ್ಮೆ ಬಂದವರು ಮತ್ತೊಮ್ಮೆ ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಶಶಿಕಲಾ ಅವರು ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಮೈಸೂರಿನ ಸಂಪ್ರದಾಯ ಮತ್ತು ಇಲ್ಲಿನ ಸಾಂಪ್ರದಾಯಿಕ ಭೋಜನವನ್ನು ಬಡಿಸಿ ದೇಶ ವಿದೇಶದಲ್ಲಿ ಮೈಸೂರಿನ ಹಿರಿಮೆಯನ್ನು ಸಾರುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.

ಶಶಿಕಲಾರವರ ಅತಿಥ್ಯದ ಮನೆಗೆ ಆಗಮಿಸುವ ವಿದೇಶಿ ಪ್ರವಾಸಿಗರನ್ನು ಆರತಿ ಮಾಡಿ ಸಂಪ್ರದಾಯ ಬದ್ಧವಾಗಿ ಸ್ವಾಗತಿಸಲಾಗುತ್ತದೆ. ಆ ಬಳಿಕ ಬಾಳಲೆಯಲ್ಲಿ ಸಾಂಪ್ರದಾಯಿಕ ಮೈಸೂರು ಶೈಲಿಯ ಊಟ.. ಊಟದ ಬಳಿಕ ಪುರುಷರಿಗೆ ಗಂಧದ ತಿಲಕವಾದರೆ ಮಹಿಳೆಯರಿಗೆ ಕುಂಕುಮ ಅರಿಶಿಣ, ಮೈಸೂರು ಮಲ್ಲಿಗೆ ಹೂವು ನೀಡಲಾಗುತ್ತದೆ. ಇಂತಹವೊಂದು ಆತಿಥ್ಯವನ್ನು ಸ್ವೀಕರಿಸಿದ ತೃಪ್ತಿ ಪ್ರವಾಸಿಗರಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಈಗಾಗಲೇ ಫ್ರಾನ್ಸ್, ಲಂಡನ್, ಇಟಲಿ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರವಾಸಿಗರು ಶಶಿಕಲಾರವರ ಆತಿಥ್ಯವನ್ನು ಸ್ವೀಕರಿಸಿ ಹೋಗಿದ್ದಾರೆ.
ವಿದೇಶಿಗರ ಬಯಕೆಯಂತೆ ಅತಿಥ್ಯದ ಮನೆ ಆರಂಭ
ಶಶಿಕಲಾ ಅವರು ಮೈಸೂರು ಶೈಲಿಯ ಉಪ್ಪಿನಕಾಯಿ, ಚಟ್ನಿ, ಪುಳಿಯೋಗರೆ, ಪಲ್ಯ, ಚಪಾತಿ. ಮಜ್ಜಿಗೆ ಹುಳಿ, ಬೇಳೆ ತೊವ್ವೆ, ಅನ್ನ ಸಾಂಬಾರ್, ಮೈಸೂರು ಪಾಕ್, ಮೈಸೂರು ವೀಳ್ಯದೆಲೆ ಹೀಗೆ ವಿವಿಧ ತಿನಿಸುಗಳನ್ನು ಬಾಳೆಲೆಯಲ್ಲಿ ಬಡಿಸುವುದರಿಂದ ಆ ರುಚಿಯನ್ನು ಸವಿದ ವಿದೇಶಿಗರು ಖುಷಿಪಡುತ್ತಾರೆ. ಶಶಿಕಲಾ ಅವರ ಮನೆ ವಿದೇಶಿಗರ ಅತಿಥಿ ಮನೆಯಾಗಿ ಪರಿವರ್ತನೆಯಾಗಿದ್ದು ಆಕಸ್ಮಿಕ ಸಂದರ್ಭದಲ್ಲಿ ಶಶಿಕಲಾರವರ ಪತಿ ಅಶೋಕ್ರವರು ಟ್ರಾವೆಲ್ಸ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ವಿದೇಶಿ ಪ್ರವಾಸಿಗರ ಸಂಪರ್ಕ ಇದ್ದೇ ಇತ್ತು.

ಒಮ್ಮೆ ಮೈಸೂರಿಗೆ ಬಂದ ವಿದೇಶಿ ಪ್ರವಾಸಿ ದಂಪತಿಗಳು ನಗರವನ್ನೆಲ್ಲಾ ಸುತ್ತಾಡಿ ಇಲ್ಲಿನ ಪಾರಂಪರಿಕ ಕಟ್ಟಡ, ಪ್ರವಾಸಿ ತಾಣಗಳನ್ನೆಲ್ಲಾ ನೋಡಿದ ಬಳಿಕ ಅವರಿಗೆ ಇಲ್ಲಿನ ಸಾಂಪ್ರದಾಯಿಕ ತಿನಿಸುಗಳನ್ನು ಸವಿಯುವ ಮನಸ್ಸಾಯಿತು. ಆದರೆ ಹೋಟೆಲ್ಗೆ ಹೋದವರಿಗೆ ಅಲ್ಲಿ ಕೂಡ ಮೈಸೂರಿನ ಸಾಂಪ್ರದಾಯಿಕ ತಿನಿಸುಗಳು ಕಾಣದಿದ್ದಾಗ ಬೇಸರವಾಯಿತು.
ಮುಂದುವರೆಯುತ್ತಿರುವ ಆತಿಥ್ಯ
ಇಲ್ಲಿಯ ತಿನಿಸುಗಳ ಬಗ್ಗೆ ಓದಿ ತಿಳಿದಿದ್ದ ಅವರಿಗೆ ಅದನ್ನೊಮ್ಮೆ ಸವಿಯಲೇ ಬೇಕೆಂಬ ಹಂಬಲ ಮಾತ್ರ ಕಡಿಮೆಯಾಗಿರಲಿಲ್ಲ. ಆಗ ಅವರಿಗೆ ನೆನಪಾಗಿದ್ದು ಅಶೋಕ್. ನೇರವಾಗಿ ಅಶೋಕ್ ಬಳಿ ಬಂದ ಅವರು ನಮಗೆ ಮೈಸೂರಿನ ತಿನಿಸುಗಳನ್ನು ಸವಿಯುವ ಬಯಕೆಯಾಗಿದ್ದು ಅದಕ್ಕೆ ವ್ಯವಸ್ಥೆ ಮಾಡುವಂತೆ ದುಂಬಾಲು ಬಿದ್ದರು. ಆಗ ಅನ್ಯ ಮಾರ್ಗವಿಲ್ಲದೆ ಅಶೋಕ್ ರವರು ತಮ್ಮ ಮನೆಗೆ ಕರೆದೊಯ್ದು ಪತ್ನಿ ಶಶಿಕಲಾರವರ ಮುಖಾಂತರ ಅಡುಗೆ ಮಾಡಿ ಬಡಿಸಿದರು. ಹೀಗೆ ಆರಂಭವಾದ ಅತಿಥ್ಯ ಮನೆ ಇವತ್ತಿಗೂ ಮುಂದುವರೆಯುತ್ತಾ ಸಾಗುತ್ತಿದೆ.












Click it and Unblock the Notifications