ಮೈಮುಲ್ ನೌಕರರ ಹುದ್ದೆ ನೇಮಕಾತಿಯಲ್ಲಿ ಅವ್ಯವಹಾರ; ಆಡಿಯೋ ಬಿಡುಗಡೆ ಮಾಡಿದ ಸಾರಾ ಮಹೇಶ್
ಮೈಸೂರು, ಮೇ 15: ಮೈಮುಲ್ ನೌಕರರ ಹುದ್ದೆಗಳ ನೇಮಕಾತಿಯಲ್ಲಿ ಹಣ ಪಡೆದು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗಾಂಕ್ಷಿಗಳು ಹಣ ಕೊಟ್ಟ ಬಗ್ಗೆ ಆಡಿಯೊ ಇದೆ ಎಂದು ಗಂಭೀರ ಆರೋಪ ಮಾಡಿರುವ ಶಾಸಕ ಸಾ.ರಾ.ಮಹೇಶ್ ಅವರು ಈ ಕುರಿತ ಆಡಿಯೊವೊಂದನ್ನು ಬಿಡುಗಡೆ ಮಾಡಿದರು.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮೂರು ಆಡಿಯೊ ಬಿಡುಗಡೆ ಮಾಡಿ ಮಾತನಾಡಿದ ಅವರು, "ಇದು ಜಸ್ಟ್ ಪ್ರೋಮೊ, ಮುಂದೆ ದೊಡ್ಡ ದೊಡ್ಡ ಪ್ರೋಮೊ ಇದೆ. ಮುಂದೆ ದೊಡ್ಡವರ ಆಡಿಯೋ ಬಿಡುಗಡೆ ಮಾಡ್ತೀನಿ" ಎಂದರು.
ಮೈಮುಲ್ ನಲ್ಲಿ ಅವ್ಯವಹಾರ ಆರೋಪ; ಸಾರಾ ಮಹೇಶ್ ಬೆಂಬಲಿಸಿದ ವಿಶ್ವನಾಥ್
ಆಪ್ತರಿಗೆ ಹುದ್ದೆ ಕೊಟ್ಟರು ಎಂಬ ಆರೋಪ
ಎಲ್ಲ ಸಂಬಂಧಿಕರು ಹಾಗೂ ಆಪ್ತರಿಗೆ ಹುದ್ದೆ ಕೊಟ್ಟಿದ್ದಾರೆ. ಅಕ್ಕ, ತಂಗಿಯರ ಮಗ, ಡ್ರೈವರ್ ಹೆಂಡತಿಗೆ ಹುದ್ದೆ ನೀಡಿದ್ದಾರೆ. ಒಬ್ಬರಿಗೆ ಹುದ್ದೆ ನೀಡಲು 40 ಲಕ್ಷ ಪಡೆದಿದ್ದಾರೆ. ಇದೆಲ್ಲವು ಆಧಾರ ಸಮೇತ ಇದೆ. 18 ಸಾವಿರ ಜನ ಪರೀಕ್ಷೆ ಬರೆದರೆ 200 ಮಂದಿ ಮಾತ್ರ ಬುದ್ಧಿವಂತರೇ. ಅಧ್ಯಕ್ಷರ ಅಕ್ಕನ ಮಗ, ತಂಗಿಯ ಮಗನೇ ಬುದ್ಧಿವಂತನೇ? ಪರೀಕ್ಷೆ ಮುಗಿದು ಇಷ್ಟು ದಿನವಾದ್ರು ಕೀ ಉತ್ತರಗಳನ್ನು ಯಾಕೆ ಬಿಡುಗಡೆ ಮಾಡಿಲ್ಲ. ಅವರು ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಿ. ನಾನು ಆಯ್ಕೆಯಾದವರು ಯಾರ ಕುಟುಂಬದವರು ಅಂತ ವಂಶವೃಕ್ಷ ಬಿಡುಗಡೆ ಮಾಡ್ತಿನಿ ಎಂದು ಕಿಡಿ ಕಾರಿದರು.
ಆಡಿಯೋ ಸಂಭಾಷಣೆ ಬಿಡುಗಡೆ ಮಾಡಿದ ಮಹೇಶ್
ನಾಮ-ನಿರ್ದೇಶಕರ ಜೊತೆ ಆಯ್ಕೆ ಆದ ವ್ಯಕ್ತಿಯ ಜೊತೆಗಿನ ಸಂಭಾಷಣೆ, ಆಯ್ಕೆ ಆಗದ, ಆಯ್ಕೆ ಆದ ವ್ಯಕ್ತಿಗಳ ಸಂಭಾಷಣೆ, ಅಭ್ಯರ್ಥಿಗಳ ನಡುವೆ ನಡೆದ ಆಡಿಯೋ ಸಂಭಾಷಣೆ ರಿಲೀಸ್ ಬಿಡುಗಡೆ ಮಾಡಿದರು. ಯಾರು ಅತಿ ಹೆಚ್ಚು ಹಣ ಕೊಡುತ್ತಾರೊ ಅವರಿಗೆ ಮೈಮುಲ್ ಹುದ್ದೆ ನೀಡಲಾಗುತ್ತಿದೆ ಎಂದು ಸಾ.ರಾ.ಮಹೇಶ್ ಆರೋಪಿಸಿದರು. ಡೈರಿ ಅಧ್ಯಕ್ಷರ ಅಕ್ಕನ ಮಗ ಹಾಗೂ ತಂಗಿಯ ಮಗನಿಗೆ ಸಂದರ್ಶನ ಮಾಡುತ್ತಿದ್ದಾರೆ. ಇವರು ಅವ್ಯವಹಾರ ಮಾಡಿಲ್ಲ ಎನ್ನುವುದಾದರೆ ಇದನ್ನು ಏನಂತಾರೆ. ಲಾಭದಾಯಕ ಹುದ್ದೆಯನ್ನು ತನ್ನ ಕುಟುಂಬಸ್ಥರಿಗೆ ಕೊಡಬಹುದಾ ಎಂದು ಪ್ರಶ್ನಿಸಿದರು.
ಅಶೋಕ್ಗೆ ಹಣ ಕೊಟ್ಟಿರುವ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪ
ಮೈಮುಲ್ ನಾಮನಿರ್ದೇಶಿತ ನಿರ್ದೇಶಕ ಅಶೋಕ್ ಹೆಸರು ಕೂಡ ಆಡಿಯೋದಲ್ಲಿದೆ. ಅಶೋಕ್ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ. ಅಶೋಕ್ಗೆ ಹಣ ಕೊಟ್ಟಿರುವ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಆಡಿಯೊದಲ್ಲಿ ಸಾಕ್ಷಿ ಇದೆ. ಆಡಿಯೊ ಆಧಾರದ ಮೇಲೆ ಸೂಕ್ತ ತನಿಖೆ ಆಗಬೇಕು. ಇಡೀ ಪ್ರಕ್ರಿಯೆಯನ್ನು ರದ್ದು ಮಾಡಬೇಕು. ಹೊಸದಾಗಿ ಪ್ರಕ್ರಿಯೆ ಆರಂಭಿಸಿ ಅರ್ಹರಿಗೆ ಹುದ್ದೆ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಮೈಮುಲ್ ಎದುರು ಪ್ರತಿಭಟನೆಯ ಎಚ್ಚರಿಕೆ
ಅಭ್ಯರ್ಥಿಗಳು ಈಗಾಗಲೇ ಹುದ್ದೆಗಳಿಗೆ ಅಡ್ವಾನ್ಸ್ ಹಣ ನೀಡಿದ್ದು ಮುಂದೆ ಹಣ ನೀಡಿ ಮೋಸ ಹೋಗಬೇಡಿ ಎಂದ ಅವರು ಮುಂದಿನ 19 ರಂದು ಮೈಮುಲ್ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.