ಮುಂದುವರೆದ ಪೌರಕಾರ್ಮಿಕರ ಪ್ರತಿಭಟನೆ: ಗಬ್ಬೆದ್ದು ನಾರುತ್ತಿದೆ ಸ್ವಚ್ಛ ನಗರಿ
ಮೈಸೂರು, ಅಕ್ಟೋಬರ್. 8: "ನಮ್ಮ ಸಮಸ್ಯೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಪರಿಹಾರ ದೊರಕುವವರೆಗೂ ಮುಷ್ಕರ ನಡೆಸುತ್ತೇವೆ" ಎಂದು ಪೌರಕಾರ್ಮಿಕರು ತಿಳಿಸಿದ್ದಾರೆ. ಪ್ರತಿಭಟನೆ ಸತತ 6 ನೇ ದಿನಕ್ಕೆ ಕಾಲಿಟ್ಟಿದ್ದು, ಮೈಸೂರು ನಗರದ ರಸ್ತೆಗಳೆಲ್ಲವೂ ಗಬ್ಬೆದ್ದು ನಾರುತ್ತಿದೆ.
ಇನ್ನು ಶನಿವಾರ ರಾತ್ರಿ ದೂರವಾಣಿ ಕರೆ ಮಾಡಿದ್ದ ಮುಖ್ಯಮಂತ್ರಿಗಳು ಮಂಗಳವಾರ ಸಭೆ ನಡೆಸಿ, ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಹ ಪೌರ ಕಾರ್ಮಿಕರು ಪ್ರತಿಭಟನೆ ಮುಂದುವರಿಸಿದರು.
ಇನ್ನು ಆರನೇ ದಿನವೂ ಮುಂದುವರಿದಿರುವ ಪೌರಕಾರ್ಮಿಕರ ಮುಷ್ಕರಕ್ಕೆ ಸ್ವರಾಜ್ ಇಂಡಿಯಾ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಭಾರತೀಯ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸ್ ವಾದಿ), ಕರ್ನಾಟಕ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ.

ಮುಷ್ಕರ ನಿಲ್ಲಿಸದೆ ಹೋರಾಟ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಅ.9ರಂದು ಬೆಂಗಳೂರಿನಲ್ಲಿ ಪೌರ ಕಾರ್ಮಿಕ ಮುಖಂಡರ ಸಭೆ ಕರೆದಿದ್ದಾರೆ.
ನಗರದಲ್ಲೀಗ 2,426 ಪೌರಕಾರ್ಮಿಕರು ಇದ್ದಾರೆ. ಇವರ ಪೈಕಿ ಕಾಯಂ ನೇಮಕಾತಿ ಹೊಂದಿರುವವರು ಕೇವಲ 580 ಮಾತ್ರ. 1,846 ಮಂದಿ ಗುತ್ತಿಗೆ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ಪೌರಕಾರ್ಮಿಕರು ಇಂದಿನಿಂದ ಸ್ವಚ್ಛತಾ ಕಾರ್ಯಕ್ಕೆ ಮರಳಿದರು.

ಅಲ್ಲದೇ, ದಸರೆಯ ಅಂಗವಾಗಿ ರಾತ್ರಿ ವೇಳೆಯಲ್ಲಿ ಸ್ವಚ್ಛತಾಕಾರ್ಯ ನಡೆಸಲು 280 ಮಂದಿಯನ್ನು ಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಈ ಪೌರಕಾರ್ಮಿಕರು ಭಾನುವಾರ ರಾತ್ರಿಯಿಂದಲೇ ಸ್ವಚ್ಛತಾ ಕಾರ್ಯಕ್ಕೆ ಮರಳಿದ್ದಾರೆ.












Click it and Unblock the Notifications