ಪ್ರತಾಪ್ ಸಿಂಹ- ರಾಮದಾಸ್ ಕಿತ್ತಾಟ ಅಂತ್ಯವಾಗೋದು ಯಾವಾಗ?
ಮೈಸೂರು, ಮೇ 18: ಕಳೆದ ಕೆಲವು ಸಮಯದಿಂದ ಮೈಸೂರಿನಲ್ಲಿ ಬಿಜೆಪಿ ನಾಯಕರ ನಡುವೆ ಮಾತಿನ ವಾಗ್ಬಾಣಗಳು ತೇಲಿ ಬರುತ್ತಿವೆ. ಮಾಜಿ ಸಚಿವ ಎಸ್.ಎ.ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ಅವರ ಮಾತಿನ ಏಟು-ತಿರುಗೇಟುಗಳು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.
ಹಾಗೆನೋಡಿದರೆ ಜೆಡಿಎಸ್ ಮತ್ತು ಕಾಂಗ್ರೆಸ್ನ ಹಿಡಿತದಲ್ಲಿದ್ದ ಹಳೆ ಮೈಸೂರಿನಲ್ಲಿ ಕಮಲ ನಿಧಾನವಾಗಿ ಖಾತೆ ತೆರೆಯುತ್ತಾ ಸಾಗಿದ್ದರೆ ಅದರಲ್ಲಿ ಬಿಜೆಪಿಯ ಹಲವು ನಾಯಕರ ಶ್ರಮವಿದೆ. ಅದರಲ್ಲೂ ಮೈಸೂರಿನ ಮಟ್ಟಿಗೆ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ರಾಮದಾಸ್ ಅವರ ವೈಯಕ್ತಿಕ ವಿಚಾರಗಳು ಮತ್ತು ಅದರಿಂದಾದ ಕಿರಿಕಿರಿಗಳಿಂದ ಅವರು ಕ್ಷೇತ್ರದಲ್ಲಿ ಮಾಡಿದ ಒಳ್ಳೆ ಕೆಲಸಗಳಿಗೆ ಕಪ್ಪು ಚುಕ್ಕಿಯಾದರೂ ತಮ್ಮ ಕ್ಷೇತ್ರದ ಜನರ ನಾಡಿ ಮಿಡಿತವನ್ನು ಅರಿತ ಅವರು ಹಲವು ಕೆಲಸಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.
ಕ್ಷೇತ್ರದಲ್ಲಿ ಯಾರದ್ದೇ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವವಾಗಲಿ ಅವರಿಗೊಂದು ಶುಭಾಶಯ ಪತ್ರವನ್ನು ಕಳುಹಿಸಿಕೊಡುವ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಜತೆಗೆ ಒಂದಷ್ಟು ಯೋಜನೆಯನ್ನು ಕ್ಷೇತ್ರದ ಜನತೆಗೆ ತಲುಪಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.

ಸುಯೇಜ್ ಫಾರಂ ಸಂಬಂಧ ಪ್ರತಾಪ ಸಿಂಹ ಜೊತೆ ಭಿನ್ನಾಭಿಪ್ರಾಯ
ಕ್ಷೇತ್ರದಲ್ಲಿ ಆಗಾಗ್ಗೆ ಯಾವುದಾದರೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಮನದಲ್ಲಿ ಗಟ್ಟಿಯಾಗಿ ಉಳಿಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದು ಅವರಿಗೆ ರಾಜಕೀಯವಾಗಿ ಸಹಾಯ ಮಾಡಿಕೊಟ್ಟಿದೆ. ಅವರು ಹಿಂದೆ ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದರೆ ಅದು ಬಿಜೆಪಿ ನಾಯಕರಿಂದಲೇ ಎಂದರೆ ತಪ್ಪಾಗಲಾರದು.
ಈ ಬಾರಿಯ ಲಾಕ್ ಡೌನ್ ವೇಳೆ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸಗಳು ಒಂದಷ್ಟು ಗಮನ ಸೆಳೆದಿವೆ. ಇದೇ ವೇಳೆಯಲ್ಲಿ ಮೈಸೂರು ಸುಯೇಜ್ ಫಾರಂ ಬಳಿಯ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರೂ ಆಗಿರುವ ಎಸ್.ಎ.ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ಅವರ ನಡುವೆ ಭಿನ್ನಾಭಿಪ್ರಾಯಗಳು ಬಹಿರಂಗವಾಗಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡ ರಾಮದಾಸ್
ದೋಸ್ತಿ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಎಸ್.ಎ.ರಾಮದಾಸ್ ಅವರಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದು ಅಷ್ಟು ಸುಲಭವಲ್ಲ ಎಂಬುದು ಸ್ವತಃ ರಾಮದಾಸ್ ಅವರಿಗೂ ತಿಳಿಯದ ವಿಷಯವಲ್ಲ. ಕಾರಣ ಹಿಂದೆ ಯಡಿಯೂರಪ್ಪ ಪಕ್ಷವನ್ನು ಬಿಟ್ಟು ಹೋದಾಗ ಅವರಿಂದ ದೂರವಿದ್ದು ಸಚಿವರಾದವರು ರಾಮದಾಸ್. ಅವತ್ತು ಬಿಎಸ್ ವೈ ಜತೆ ಸೇರಿ ರಾಮದಾಸ್ ವಿರುದ್ಧವೇ ಚುನಾವಣೆಗೆ ನಿಂತು ಸೋಲಿಗೆ ಕಾರಣರಾದವರು ಅದೇ ಕ್ಷೇತ್ರದ ಬಿಜೆಪಿ ನಾಯಕ ಎಚ್.ವಿ.ರಾಜೀವ್ ಅವರು. ಇವತ್ತಿಗೂ ಒಂದೇ ಕ್ಷೇತ್ರದಲ್ಲಿರುವ ರಾಜೀವ್ ಮತ್ತು ರಾಮದಾಸ್ ಅವರದು ಎಣ್ಣೆ ಸೀಗೇಕಾಯಿ ಸಂಬಂಧ.
ಹೀಗಿರುವಾಗ ರಾಮದಾಸ್ ಅವರು ಸಚಿವರಾಗುತ್ತಾರೆ ಎಂದರೆ ಅದು ಬರೀ ಕನಸು ಎಂಬುದನ್ನು ಯಾರು ಬೇಕಾದರೂ ಹೇಳಿ ಬಿಡುತ್ತಾರೆ. ಒಂದಷ್ಟು ಮುನಿಸು ಹೊಂದಿದ್ದ ರಾಮದಾಸ್ ದಸರಾ ವೇಳೆ ಎಲ್ಲದರಿಂದಲೂ ದೂರ ಉಳಿದಿದ್ದರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಮಾಡಿದ್ದರು.
ರಾಮದಾಸ್ ಹೊಗಳಿದ ಸಚಿವ ಸೋಮಶೇಖರ್
ಈಗ ಎಸ್.ಟಿ.ಸೋಮಶೇಖರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇದೇ ವೇಳೆಗೆ ಸಂಸದ ಮತ್ತು ಶಾಸಕ ರಾಮದಾಸ್ ನಡುವೆ ಬಹಿರಂಗ ವಾಗ್ವಾದಗಳು ನಡೆಯುತ್ತಿವೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದನ್ನರಿತ ಸಚಿವ ಸೋಮಶೇಖರ್ ಶಾಸಕ ಎಸ್.ಎ.ರಾಮದಾಸ್ ಅವರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆಸಿದ ಪೂರ್ವಭಾವಿ ಸಭೆಗೆ ಖುದ್ದು ಸಚಿವ ಎಸ್.ಟಿ.ಸೋಮಶೇಖರ್ ತೆರಳಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲಿ ಅವರು ಮಾತನಾಡುತ್ತಾ ಇಡೀ ರಾಜ್ಯದಲ್ಲಿ ಕೃಷ್ಣರಾಜ ಕ್ಷೇತ್ರ ಪಕ್ಷದ ಸಂಘಟನಾತ್ಮಕವಾಗಿ ಬಲಾಢ್ಯವಾಗಿದ್ದು ಶಾಸಕರಾದ ರಾಮದಾಸ್ ರವರು ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಿ ಬೆಳೆಸಿದ್ದಾರೆ. ಕ್ಷೇತ್ರದ ಪದಾಧಿಕಾರಿಗಳು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಪಕ್ಷದ ವ್ಯವಸ್ಥೆಯೊಳಗೆ ದೇಶದ ಕಾರ್ಯವನ್ನು ಮಾಡುವಂತಹ ದೃಷ್ಟಿಯಿಂದ ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಮತ್ತು ಕೊರೊನಾ ಸಂದರ್ಭದಲ್ಲಿ ವಿಶೇಷವಾಗಿ ಕೈಗಾರಿಕಾ ವೃತ್ತಿಯಲ್ಲಿ ಇರುವ ಎಲ್ಲರಿಗೂ ಬಿಸಿ ಊಟವನ್ನು ತಲುಪಿಸುವ ಒಂದು ದೊಡ್ಡ ಕಾರ್ಯವು ಸಂತೃಪ್ತಿಯನ್ನು ನೀಡಿದೆ ಎಂದು ರಾಮದಾಸ್ ಅವರನ್ನು ಹೊಗಳಿದ್ದಾರೆ.

ಕಿತ್ತಾಟ ನಿಲ್ಲದಿದ್ದರೆ ಪಕ್ಷದ ಮೇಲೆ ಪರಿಣಾಮ
ಇದೆಲ್ಲವನ್ನು ಗಮನಿಸಿದರೆ ಇದುವರೆಗಿನ ಪ್ರತಾಪ್ ಸಿಂಹ ಮತ್ತು ರಾಮದಾಸ್ ಅವರ ಕಿತ್ತಾಟಕ್ಕೆ ಅಂತ್ಯ ಹಾಡಿಸಿ ಒಂದಾಗಿಸುವ ಪ್ರಯತ್ನನಾ? ಎಂಬ ಪ್ರಶ್ನೆಗಳು ಕಾಡುವುದಂತು ಸತ್ಯ. ಈಗಾಗಲೇ ನಾಯಕರು ಭಿನ್ನಾಭಿಪ್ರಾಯಗಳನ್ನು ತಮ್ಮೊಳಗೆ ಬಗೆಹರಿಸಿಕೊಳ್ಳದೆ ಕಿತ್ತಾಡುತ್ತಿರುವುದು ಕಾರ್ಯಕರ್ತರಿಗೆ ಮುಜುಗರ ತಂದಿದೆ. ಇಲ್ಲಿಗೆ ಕಿತ್ತಾಟ ನಿಲ್ಲದೆ ಪ್ರತಿಷ್ಠೆಯಾಗಿಸಿಕೊಂಡು ಮುಂದುವರೆಸಿಕೊಂಡು ಹೋದರೆ ಅದು ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಾಗಿಲ್ಲ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications