ಮೈಸೂರಿನಲ್ಲಿ ಶ್ರೀಗಂಧ ಮರ ಕಳ್ಳರನ್ನು ಬಂಧಿಸಿದ ಪೊಲೀಸರು
ಮೈಸೂರು, ಜನವರಿ 08: ಅಕ್ರಮವಾಗಿ ಶ್ರೀಗಂಧ ಮರ ತುಂಡುಗಳನ್ನು ಹಿಡಿದುಕೊಂಡು ನಿಂತಿದ್ದ ಮೂವರು ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಮೈಸೂರು ನಗರದ ಕೃಷ್ಣರಾಜ ಪೊಲೀಸ್ ಠಾಣಾ ಸರಹದ್ದಿನ ಗೌರಿಶಂಕರ ನಗರದ ಬಸ್ ಸ್ಟ್ಯಾಂಡ್ ಮುಂಭಾಗ ಕಾರ್ಯಾಚರಣೆ ನಡೆಸಿ, ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಇಟ್ಟುಕೊಂಡಿದ್ದ ಮೂವರು ಕಳ್ಳರು ಪೊಲೀಸ್ ವಶದಲ್ಲಿದ್ದಾರೆ.
ಬಂಧಿತರನ್ನು ಸಂಪತ್ ಕುಮಾರ್ ಬಿನ್ ಲೇಟ್ ಸುಬ್ರಮಣ್ಯ(32), ವಿದ್ಯಾರಣ್ಯಪುರಂ ಮೈಸೂರು, ಪರಶುರಾಂ ಬಿನ್ ವರದರಾಜ್( 38) ಬೊಂಬು ಬಜಾರ್, ಮೈಸೂರು, ಸೈಯದ್ ಬಾಬು( 26), ಶಾಂತಿ ನಗರ ಮೈಸೂರು ನಿವಾಸಿಗಳೆಂದು ಗುರುತಿಸಲಾಗಿದೆ.

ಈ ಮೂವರು ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಇವರು ಮೈಸೂರಿನ ಜೆ.ಎಸ್.ಎಸ್ ಮಠದ ಅವರಣದಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಇವರಿಂದ 4,00,000 ರೂ. ಮೌಲ್ಯದ 40 ಕೆ.ಜಿ. ತೂಕದ 07 ಶ್ರೀಗಂಧದ ಮರದ ತುಂಡುಗಳು ಹಾಗೂ ತೊಗಟೆ ತೆಗೆದಿದ್ದ ಶ್ರೀಗಂಧದ ಸಣ್ಣ ಸಣ್ಣ ಪೀಸುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳ ವಿರುದ್ಧ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಕೊಡಗು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಕಾರ್ಯಚರಣೆಯಿಂದ ಮೈಸೂರು ನಗರ ಕೃಷ್ಣರಾಜ ಪೊಲೀಸ್ ಠಾಣೆಯ 1 ಶ್ರೀಗಂಧ ಮರ ಕಳ್ಳತನ ಪ್ರಕರಣ ಪತ್ತೆಯಾಗಿದೆ.












Click it and Unblock the Notifications