ಸಾರ್ವಜನಿಕ ಜೀವನದಿಂದ ಎಚ್ಡಿಕೆ ಪರಮಾಪ್ತ ಶಾಸಕ ದೂರ!
ಮೈಸೂರು, ಫೆ 14: ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೆ, ಜೆಡಿಎಸ್ಸಿನಿಂದ ದೂರವಾಗುತ್ತಿರುವವರ ಪಟ್ಟಿಯೂ ಬೆಳೆಯುತ್ತಿದೆ. ಆದರೆ, ಹೋಗುವವರು ಹೋಗಲಿ ಎನ್ನುವ ನಿಲುವಿಗೆ ದಳಪತಿಗಳು ಅಂಟಿಕೊಂಡಿದ್ದಾರೆ.
ಮೈಸೂರು ಸೇರಿದಂತೆ ಕಾವೇರಿ ಜಲಾಯನ ಪ್ರದೇಶದಲ್ಲಿ ಪಕ್ಷದ ನೆಲೆಯನ್ನು ಗಟ್ಟಿಗೊಳಿಸಲು ಜೆಡಿಎಸ್ ಹಲವು ಹೊಸಹೊಸ ನಾಯಕರನ್ನು ಹುಟ್ಟಿಹಾಕುತ್ತಿದೆ. ಮೈಸೂರು ಭಾಗದಲ್ಲಿ ಪಕ್ಷಕ್ಕೆ ಪ್ರಮುಖ ನಾಯಕರಂತಿದ್ದ ಜಿ.ಟಿ.ದೇವೇಗೌಡ ಅವರು ಪಕ್ಷದಿಂದ ಹೊರ ಹೋಗಲು ನಿರ್ಧರಿಸಿರುವುದರಿಂದ, ಆ ಭಾಗದ ಹೆಚ್ಚಿನ ಜವಾಬ್ದಾರಿ ಯಾರ ಹೆಗಲಿಗೆ ಹೋಗಲಿದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.
ದೀನ ದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವತೆ, ಅಂತ್ಯೋದಯದ ಕನಸು
ಮೈಸೂರು ಹಾಲು ಒಕ್ಕೂಟದ ಚುನಾವಣೆಯಲ್ಲಿ ಜಿಟಿಡಿ ಬೆಂಬಲಿತರನ್ನು ಸೋಲಿಸಲು ಕುಮಾರಸ್ವಾಮಿ ಮತ್ತವರ ಪರಮಾಪ್ತ ಶಾಸಕ ಸಾ.ರಾ.ಮಹೇಶ್ ಇನ್ನಿಲ್ಲದ ಪ್ರಯತ್ನವನ್ನು ಮಾಡಿದ್ದರು. ಆದರೆ, ಜಿಟಿಡಿ ಕ್ಯಾಂಪಿಗೆ ಸೋಲುಣಿಸಲು ಎಚ್ಡಿಕೆಗೆ ಸಾಧ್ಯವಾಗಿಲ್ಲ.
ಈಗ, ಕುಮಾರಸ್ವಾಮಿಯವರ ಜೊತೆಗೆ ಉತ್ತಮ ನಂಟನ್ನು ಹೊಂದಿರುವ ಕೃಷ್ಣರಾಜನಗರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಜಿಲ್ಲೆಯ ಹಲವು ನಾಯಕರು ಮಹೇಶ್ ಬಗ್ಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಯಾವ ಕಾರಣಕ್ಕಾಗಿ ಮಹೇಶ್ ನಿವೃತ್ತಿ ಬಯಸುತ್ತಿದ್ದಾರೆ?
ಚಾಮುಂಡೇಶ್ವರಿಯಲ್ಲಿ ಕುಮಾರಸ್ವಾಮಿ ಅಭ್ಯರ್ಥಿ ಆಗಲ್ಲ: ಸಾ. ರಾ. ಮಹೇಶ್
ರಾಮದಾಸ್ ಆಯೋಜಿಸಿದ್ದ ಪ್ರಧಾನಮಂತ್ರಿ ಮೋದಿ ಸಂಬಂಧಿತ ಕಾರ್ಯಕ್ರಮ
ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರು ಆಯೋಜಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಬಂಧಿತ ಕಾರ್ಯಕ್ರಮದಲ್ಲಿ ಸಾ.ರಾ.ಮಹೇಶ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಕೂಡಾ ಭಾಗವಹಿಸಿದ್ದರು. ಸಭೆಯಲ್ಲಿ ಸಂಘಟಕರು ಮಹೇಶ್ ಅವರಿಗೆ ಕೇಸರಿ ಶಲ್ಯವನ್ನು ಹಾಕಿದ್ದರು. ಆ ವೇಳೆಯೇ, ಮಹೇಶ್ ಅವರು ಜೆಡಿಎಸ್ ನಿಂದ ದೂರವಾಗಿ, ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತು ಜೋರಾಗಿ ನಡೆಯುತ್ತಿತ್ತು. ಈಗ, ಖುದ್ದು ಮಹೇಶ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
ಸಾರ್ವಜನಿಕ ಜೀವನದಿಂದ ದೂರವಿರುವ ನಿರ್ಧಾರಕ್ಕೆ ಬರುವ ಬಗ್ಗೆ ಯೋಚನೆ
"ನಾನು ಈಗಾಗಲೇ ಸಾರ್ವಜನಿಕ ಜೀವನದಿಂದ ದೂರವಿರುವ ನಿರ್ಧಾರಕ್ಕೆ ಬರುವ ಬಗ್ಗೆ ಯೋಚನೆಯನ್ನು ಮಾಡುತ್ತಿದ್ದೇನೆ. ಆ ಕಾರಣಕ್ಕಾಗಿ, ಯಾವುದೇ ಸ್ಥಾನಮಾನ ಬೇಡ ಎಂದು ನಾನೇ ಖುದ್ದಾಗಿ ತಿಳಿಸಿದ್ದೆ. ಇಪ್ಪತ್ತು ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ದಿನಂಪ್ರತಿ ಹನ್ನೆರಡು ಗಂಟೆ ಕೆಲಸವನ್ನು ಮಾಡಿದ್ದೇನೆ. ಕುಟುಂಬದ ಜೊತೆ ಸಮಯ ಕಳೆಯಬೇಕು ಎನ್ನುವ ಕಾರಣಕ್ಕಾಗಿ, ನನ್ನ ಕುಟುಂಬದ ಜೊತೆ ಹಲವು ಬಾರಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲು ಯೋಚಿಸುತ್ತಿದ್ದೇನೆ"ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.
ಕುಮಾರಸ್ವಾಮಿಯವರ ಜೊತೆ ಇರುವಂತದ್ದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ
"ನನ್ನ ಮನವಿಯ ಮೇರೆಗೆ ಜೆಡಿಎಸ್ ಕೋರ್ ಕಮಿಟಿ ಪಟ್ಟಿಯಲ್ಲಿ ನನ್ನ ಹೆಸರಿನ್ನು ಸೇರಿಸಿಲ್ಲ. ಇದರಲ್ಲಿ ಯಾವುದೇ ಗೊಂದಲ ಅಥವಾ ಹಿನ್ನಡೆ ಅನ್ನುವುದು ಇಲ್ಲ. ನನ್ನನು ಕಮಿಟಿಗೆ ಸೇರಿಸಿಕೊಂಡರೆ ಮತ್ತೆ ನಮ್ಮ ನಾಯಕರಲ್ಲಿ ಕೆಲವರಿಗೆ ಬೇಸರ ಆಗಬಾರದು. ನನ್ನ ಕೊನೆಯ ಉಸಿರಿನ ವರೆಗೆ ಕುಮಾರಸ್ವಾಮಿಯವರ ಜೊತೆ ಇರುವಂತದ್ದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಮರಿತಿಬ್ಬೇಗೌಡ್ರು ನಮ್ಮ ಪಕ್ಷದಿಂದಲೇ ಸ್ಪರ್ಧೆಯನ್ನು ಮಾಡುತ್ತಾರೆ, ಇದರಲ್ಲಿ ಅನುಮಾನ ಬೇಡ"ಎಂದು ಸಾ.ರಾ.ಮಹೇಶ್ ಸ್ಪಷ್ಟ ಪಡಿಸಿದ್ದಾರೆ.
Recommended Video
ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಹಳೇ ಮೈಸೂರು ಭಾಗದಲ್ಲಿ ಸಂಘಟನೆ
"ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಹಳೇ ಮೈಸೂರು ಭಾಗದಲ್ಲಿ ಸಂಘಟನೆಯನ್ನು ಮಾಡುತ್ತೇವೆ. ಕೀಲಾರ ಜಯರಾಂ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಅವರ ಜೊತೆ ಮಾತನಾಡಿದ್ದೇನೆ. ಇನ್ನಿರುವ ಕೆಲವು ಗೊಂದಲಗಳನ್ನು ಯಾವ ರೀತಿ ಸರಿಮಾಡಬೇಕು ಎನ್ನುವುದನ್ನು ನಮ್ಮ ನಾಯಕರು ನಿರ್ಧರಿಸುತ್ತಾರೆ"ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ. ಆದರೆ, ಮಹೇಶ್ ಅವರು ಪಕ್ಷ ಸಂಘಟನೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರಾ ಅಥವಾ ಪಕ್ಷ ನಿಷ್ಠೆ ಬದಲಿಸಲಿದ್ದಾರಾ ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ.