ಮೈಸೂರಿನಲ್ಲಿ ಮುಖ್ಯಮಂತ್ರಿ: ಉಪಚುನಾವಣಾ ಕಣಕ್ಕೆ ಬಂತು ಕಳೆ
ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಈ ಚುನಾವಣೆಯನ್ನು ಸ್ವಾಭಿಮಾನ, ಪ್ರತಿಷ್ಠೆಯ ಚುನಾವಣೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಅದು ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು, ಮಾರ್ಚ್ 31: ನಾಲ್ಕು ವರ್ಷಗಳ ನಮ್ಮ ಸರ್ಕಾರದ ಅಭಿವೃದ್ಧಿಯನ್ನು ಜನ ಒಪ್ಪಿಕೊಂಡಿದ್ದಾರೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಚುನಾವಣೆಗಳು ನಮಗೊಂದು ಸುವರ್ಣಾವಕಾಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಪಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮಾರ್ಚ್ 30 ರಿಂದ ಮೈಸೂರಿನಲ್ಲೇ ಠಿಕಾಣಿ ಹೂಡಿರುವ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದರು.[ರಂಗೇರಿದ ಉಪಚುನಾವಣೆ: ಇಂದು ಸಿಎಂ, ಯಡಿಯೂರಪ್ಪ ಪ್ರಚಾರ]
ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಈ ಚುನಾವಣೆಯನ್ನು ಸ್ವಾಭಿಮಾನ, ಪ್ರತಿಷ್ಠೆಯ ಚುನಾವಣೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಅದು ಸುಳ್ಳು. ನಾವು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಅದಕ್ಕಾಗಿ ಜನರ ಬಳಿ ಕೂಲಿ ಕೇಳುತ್ತಿದ್ದೇವೆ, ದಲಿತರ ಮೀಸಲಾತಿಯನ್ನು ಶೇ.72 ಕ್ಕೆ ಹೆಚ್ಚಳ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದವರು ಹೇಳಿದರು.[ಗುಂಡ್ಲುಪೇಟೆ ಉಪಚುನಾವಣೆ: ಗೆಲುವು ಸುಲಭವಲ್ಲ!]
ಬಿಜೆಪಿ ಸದಾ ಮೀಸಲಾತಿ ವಿರೋಧಿಯೇ. ಈಗಿನ ಯುಪಿ ಸಿಎಂ ಆದಿತ್ಯನಾಥ್ ಮಹಿಳಾ ಮೀಸಲಾತಿಗಯನ್ನು ವಿರೋಧಿಸಿದ್ದು ನೆನಪಿಲ್ಲವೇ? ಕಾಂಗ್ರೆಸ್ಸಿಗರು ದಲಿತರನ್ನ ಮುಗಿಸುತ್ತಿದ್ದಾರೆ ಎಂಬ ಶ್ರೀನಿವಾಸ ಪ್ರಸಾದ್ ಹೇಳಿಕೆಗೆ ಅರ್ಥವಿಲ್ಲದ್ದು. ಮಹದೇವಪ್ಪ, ಆಂಜನೇಯ, ಪರಮೇಶ್ವರ್ ಸೇರಿ ಹಲವರು ದಲಿತರಲ್ಲವೇ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.[ವಕ್ಫ್ ಆಸ್ತಿಯಲ್ಲಿ 54 ಸಾವಿರ ಕೋಟಿ ಅಕ್ರಮ: ಈಶ್ವರಪ್ಪ ಆರೋಪ]
ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಇದೀಗ ರಾಜ್ಯದ ಮುಖ್ಯಮಂತ್ರಿಗಳೂ ಅಲ್ಲಿಗೆ ಖುದ್ದು ಹಾಜರಾಗಿರುವುದು ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ. ಏಪ್ರಿಲ್ 13 ಗುರುವಾರದಂದು ಹೊರಬೀಳಲಿರುವ ಫಲಿತಾಂಶ ಮತ್ತಷ್ಟು ಉತ್ಸಾಹ ಕೆರಳಿಸಿದೆ.