ಬಿಜೆಪಿ ಸರಕಾರ 9 ತಿಂಗಳು ಆಯಸ್ಸು, ಕುಮಾರಣ್ಣ ಸಿಎಂ ಆಗುತ್ತಾರೆ: ಸಿಎಂ ಇಬ್ರಾಹಿಂ ಭವಿಷ್ಯ
ಮೈಸೂರು, ಮೇ 26 : ಇನ್ನು ಕೇವಲ 9 ತಿಂಗಳಲ್ಲಿ ಆಡಳಿರೂಢ ಬಿಜೆಪಿ ಸರಕಾರ ಬೀಳಲಿದ್ದು, ಮತ್ತೆ ಜೆಡಿಎಸ್ ಅಧಿಕಾರ ಬರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಇಬ್ರಾಹಿಂ, ಬಿಜೆಪಿ ಸರಕಾರಕ್ಕೆ ಇನ್ನು ಕೇವಲ 9 ತಿಂಗಳಷ್ಟೇ ಆಯಸ್ಸು. ನಂತರ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.
ಪರಿಷತ್ ಟಿಕೆಟ್ ಬಗ್ಗೆ ಮಾತನಾಡಿ, ''ಟಿಕೆಟ್ ನೀಡಿರುವುದರಲ್ಲಿ ಯಾವುದೇ ಗೊಂದಲ ಇಲ್ಲ. ದೇವೇಗೌಡರು, ನಾನು ಮತ್ತು ಕುಮಾರಸ್ವಾಮಿ ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದೇವೆ. ನಾನೇನು ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ,'' ಎಂದರು.

ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ
ಮಳಲಿ ಮಸೀದಿಯ ತಾಂಬೂಲ ಪ್ರಶ್ನೆ ವಿಚಾರವಾಗಿ ಪ್ರತಿಕ್ರಿಯಿಸಿದ ಇಬ್ರಾಹಿಂ, ದೇವಾಲಯ ಇತ್ತ ಎಂದು ತಾಂಬೂಲ ಪ್ರಶ್ನೆ ಮಾಡುವುದನ್ನು ಬಿಟ್ಟು, ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಾ? ಮೋದಿ ಏನಾಗುತ್ತಾರೆ ಎಂದು ಪ್ರಶ್ನೆ ಹಾಕಿ. ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಬಿಜೆಪಿ ಹಿಜಾಬ್, ಹಲಾಲ್ ಸುದ್ದಿಯನ್ನು ದೊಡ್ಡದು ಮಾಡುತ್ತಿದೆ. ಬಸವಣ್ಣನವರ ನಾಡಿನಲ್ಲಿ ಇದೆಲ್ಲದಕ್ಕೂ ಆಸ್ಪದ ಇಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರು ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರದೆಯ ಜಟಕಾಗಾಡಿ ನೀಡಿದ್ದರು. ಆಗಲೇ ಶಾಲೆಗೆ ಹೋಗಲು ಪರದೆಯ ಗಾಡಿಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಿದರು.

ಪ್ರತಾಪ್ ಸಿಂಹಗೆ ಪ್ರಜ್ಞೆ ಇಲ್ಲ
ಟಿಪ್ಪು ಸುಲ್ತಾನ್ ಅವರನ್ನು ಹುಲಿಯ ಜೊತೆ ತೋರಿಸಿದ್ದಾರೆ. ಹಾಗಾದ್ರೆ ಹಿಂದಿನ ಕಾಲದಲ್ಲಿ ಫೋಟೊಗ್ರಫಿ ಇತ್ತಾ? ಹುಲಿನ ಹೊಡೆಯೊಕೆ ಹೋಗಿರುವುದನ್ನ ಯಾರಾದ್ರು ಫೋಟೋ ತೆಗೆದಿದ್ದಾರಾ? ಎಂದು ಕೆಲವರು ಪ್ರಶ್ನಿಸುತ್ತಾರೆ. ಹಾಗಾದ್ರೆ ಯಡಿಯೂರಪ್ಪರನ್ನು ರಾಜಾಹುಲಿ ಅಂತೀವಿ. ಹಾಗಾದ್ರೆ ಅವರು ಕಾಡಿನಲ್ಲಿದ್ರ. ಒಬ್ಬ ಸಂಸದರಾಗಿ ಏನು ಮಾತನಾಡಬೇಕೆಂಬ ಪ್ರಜ್ಞೆ ಪ್ರತಾಪಸಿಂಹ ಅವರಿಗೆ ಇಲ್ಲ. ಮೈಸೂರು ಕುವೆಂಪು ನಾಡು. ಪುಟ್ಟಪ್ಪನವರ ಬಳಿ ನಾವೆಲ್ಲಾ ಪಾಠ ಕೇಳಿದ್ದೇವೆ. ಪುಟ್ಟಪ್ಪನವರ ಪುಸ್ತಕಗಳನ್ನು ತೆಗೆಯಲು ಹೊರಟಿದ್ದಾರೆ. ನಮ್ಮವ್ವ ಕರ್ನಾಟಕ ಮಾತೆ, ನಮ್ಮ ಅಜ್ಜಿ ಭಾರತ ಮಾತೆ. ಮೊದಲು ಅವ್ವನನ್ನ ನೋಡಿ ಅಂದರೆ ಅಜ್ಜಿ ನೋಡಕೆ ಹೊಂಟವರೆ ಎಂದು ವ್ಯಂಗ್ಯವಾಡಿದರು.

ಮರಿತಿಬ್ಬೇಗೌಡ, ಜಿಟಿಡಿ ಜೊತೆ ಮಾತುಕತೆ
ಜೆಡಿಎಸ್ ನಿಂದ ಮರಿತಿಬ್ಬೇಗೌಡ ಅಂತರ ಕಾಯ್ದುಕೊಂಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ, ಮರಿತಿಬ್ಬೇಗೌಡರ ಜೊತೆ ನಾನು ಮಾತನಾಡುತ್ತೇನೆ. ಮನೆಯಲ್ಲಿದ್ದಾಗ ಜಗಳ ನಡೆಯುವುದು ಸಹಜ. ಮುಂದೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಜಿ.ಟಿ.ದೇವೇಗೌಡರ ಜೊತೆಯೂ ನಾನು ಮಾತನಾಡುತ್ತೇನೆ. ಮೈಸೂರಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಶಕ್ತಿ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ
ಬಿಜೆಪಿ ಸೋಲಿಸುವುದಕ್ಕೆ ಆಗದ ಜೆಡಿಎಸ್ ಬಗ್ಗೆ ನಾನು ಮಾತನಾಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ರಾಜ್ಯಕ್ಕೆ ಬಿಜೆಪಿ ತಂದವರು ಯಾರು? ಯಡಿಯೂರಪ್ಪನ ತಂದವರು ಯಾರು? ಈಗ ನಮ್ಮ ಶಕ್ತಿಯೇನು ಎಂಬುದು ಸಿದ್ದರಾಮಯ್ಯಗೆ ಗೊತ್ತಾಗಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನ ಸೇರಿ ಜಲಧಾರೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ನಮ್ಮ ಬಲವನ್ನು ತೋರಿಸಿದ್ದೇವೆ. ಹಾಗಾಗಿ ನಾವು ಕೂಡ ಕಾಂಗ್ರೆಸ್ ಬಗ್ಗೆ ಮಾತನಾಡಲ್ಲ ಎಂದರು.












Click it and Unblock the Notifications