ಪ್ರತಾಪ್ ಸಿಂಹ ನೇತೃತ್ವದಲ್ಲಿ ಮತ್ತೊಮ್ಮೆ ಹನುಮಜಯಂತಿ ಆಚರಣೆ
ಮೈಸೂರು, ಜನವರಿ 27 : ಕಳೆದ ತಿಂಗಳ ಹಿಂದಷ್ಟೇ ವಿವಾದಕ್ಕೆ ಕಾರಣವಾಗಿದ್ದ ಹುಣಸೂರು ಹನುಮ ಜಯಂತಿ ಮೆರವಣಿಗೆ ಮತ್ತೊಮ್ಮೆ ಆರಂಭಗೊಂಡಿದೆ. ಈ ಹಿನ್ನೆಲೆ ಹಿಂದೂಪರ ಸಂಘಟನೆಗಳ ಬೇಡಿಕೆಯಂತೆಯೇ ಜಿಲ್ಲಾಡಳಿತ ಮಾರ್ಗ ನಿಗದಿ ಮಾಡಿದೆ. ದೇವಸ್ಥಾನದ ಕಲ್ಕುಣಿಕೆ ವೃತ್ತ, ಹಳೇ ಬಸ್ ನಿಲ್ದಾಣದಲ್ಲಿ ಮೆರವಣಿಗೆ ಸಂಚರಿಸಲಿದ್ದು ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸಿ ಮಂಜುನಾಥ ದೇವಾಲಯ ಆವರಣದಲ್ಲಿ ಮುಕ್ತಾಯವಾಗಲಿದೆ.
ಮೆರವಣಿಗೆಯ ಪ್ರತಿಯೊಂದು ಚಲನವಲನಗಳನ್ನು ಜಿಲ್ಲಾಧಿಕಾರಿ, ರಂದೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ. ಡಿ ಚನ್ನಣ್ಣನವರ್ ಗೆ ಸೂಚನೆ ನೀಡಿದ್ದಾರೆ. ಮಂಜುನಾಥ ದೇವಸ್ಥಾನದಿಂದ ಹನುಮ ಮೂರ್ತಿ ಉತ್ಸವ ಹೊರಟ್ಟಿದ್ದು ರಂಗನಾಥ ಬಡಾವಣೆ ಕಡೆ ತೆರಳುತ್ತಿದೆ. ಹುಣಸೂರಿನ ರಂಗನಾಥ ಬಡಾವಣೆಯಲ್ಲಿ ಹನುಮ ಭಕ್ತರು ಜಮಾಯಿಸಿದ್ದು, ಮಧ್ಯಾಹ್ನ 3.30ಕ್ಕೆ ಬಹಿರಂಗ ಮೆರವಣಿಗೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ.
ಸಂಸದ ಪ್ರತಾಪ ಸಿಂಹ ವಿರುದ್ಧ ಕ್ರಿಮಿನಲ್ ಕೇಸ್, ಡಿ.4 ಹುಣಸೂರು ಬಂದ್
ಹುಣಸೂರಿನ ರಂಗನಾಥ ಬಡಾವಣೆಗೆ 11 ಅಡಿ ಹನುಮನ ಮೂರ್ತಿ ಆಗಮಿಸಿದೆ. ರಂಗನಾಥ ಬಡಾವಣೆಯಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್, ಅಡಿಷನಲ್ ಎಸ್ಪಿ ರುದ್ರಮುನಿ ಸ್ಥಳಕ್ಕೆ ತೆರಳಿ ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಕಳೆದ ತಿಂಗಳು ಗಲಾಟೆ ನಡೆದಿದ್ದರಿಂದ ಹನುಮ ಜಯಂತಿ ಮೆರವಣಿಗೆ ನಡೆದಿರಲಿಲ್ಲ. ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಹನುಮ ಜಯಂತಿಗೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಕಳೆದ ಬಾರಿ ಮಂಜುನಾಥ
ದೇವಸ್ಥಾನಕ್ಕೆ 1 ಕಿ. ಮೀ. ದೂರ ಮೆರವಣಿಗೆ ನಿಗದಿಯಾಗಿತ್ತು. ಆದರೆ ಈ ಬಾರಿ ಹನುಮ ಜಯಂತಿ ಮೆರವಣಿಗೆ 5 ಕಿಲೋ ಮೀಟರ್ ಸಾಗಲಿದೆ. ಈಗಾಗಲೇ ಪ್ರತಾಪ್ ಸಿಂಹ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳಿಂದ ಮೆರವಣಿಗೆಗೆ ಚಾಲನೆ ಸಿಕ್ಕಿದೆ.
ರಾತ್ರೋರಾತ್ರಿ ಹುಣಸೂರಿನ ಹನುಮಮೂರ್ತಿ ಸ್ಥಳಾಂತರವಾಗಿದ್ದೇಕೆ ?
ಮೊದಲ ಬಾರಿ ಹನುಮ ಜಯಂತಿ ಗದ್ದಲ ಹಿನ್ನಲೆಯಲ್ಲಿ ಎರಡನೇ ಬಾರಿ ಹನುಮ ಜಯಂತಿಗೆ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್ಪಿ, ನಾಲ್ವರು ಡಿವೈಎಸ್ಪಿ, 10 ಸಿಪಿಐ, 25 ಪಿಎಸ್ ಐ, ಎಪ್ಪತೈದು ಎಎಸ್ , 500 ಹೆಚ್'ಸಿಪಿಸಿ, 200 ಹೋಂ ಗಾರ್ಡ್ಸ್ ನಿಯೋಜಿಸಲಾಗಿದೆ. 8 ಕೆಎಸ್'ಆರ್'ಪಿ ತುಕಡಿ, 15. ಡಿಎಆರ್,31 ಪೆಟ್ರೋಲಿಯಂ ವಾಹನ ಬಳಕೆ ಮಾಡಲಾಗಿದೆ. ಮೆರವಣಿಗೆ ಸುತ್ತಲೂ ಕ್ಯಾಮರಾ ಹದ್ದಿನ ಕಣ್ಣಿಡಲಾಗಿದೆ. 51 ವಿಡಿಯೋ ಗ್ರಾಫರ್'ಗಳ ಬಳಕೆ, 80 ಸಿಸಿ ಕ್ಯಾಮರ ಅಳವಡಿಕೆ ಮಾಡಲಾಗಿದೆ.
ಈ ಹಿಂದೆ ಸಣ್ಣಪುಟ್ಟ ವಿಚಾರಗಳಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಹನುಮ ಜಯಂತಿ ಮೆರವಣಿಗೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಆ ದಿನ ನಡೆಯಬೇಕಿದ್ದ ಮೆರವಣಿಗೆ ಅಪೂರ್ಣಗೊಂಡ ಕಾರಣ ಹಿಂದೆ ನಡೆಯುತ್ತಿದೆ. ಮೈಸೂರು ಜಿಲ್ಲಾಡಳಿತದಿಂದ ಹಲವು ನಿಬಂಧನೆಗಳೊಂದಿಗೆ ಇಂದು ಮತ್ತೆ ಮೆರವಣಿಗೆ ನಡೆಯುತ್ತಿದ್ದು, ಜಿಲ್ಲಾಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದಲೇ ಹನುಮ ಜಯಂತಿ ಆಚರಣೆ ಮಾಡಲಾಗುತ್ತಿದೆ. ಹೊಸ ಐದು ನಿಬಂಧನೆಗಳನ್ನು ವಿಧಿಸಿ ಮೆರವಣಿಗೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ .