ಉಪಚುನಾವಣೆ: ತಪಾಸಣೆಗೆ ಜಿಲ್ಲಾಧಿಕಾರಿ ವಾಹನವೂ ಹೊರತಾಗಿಲ್ಲ
ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ರಂದೀಪ್ ಅವರ ಕಾರನ್ನು ಸಹ ತಪಾಸಣೆ ಮಾಡಿರುವುದು ಪೊಲೀಸರು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ
ಮೈಸೂರು, ಮಾರ್ಚ್ 28: ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ದಿನೇ ದಿನೇ ಏರುತ್ತಲೇ ಇದ್ದು, ಚುನಾವಣಾ ಆಯೋಗ ಮತ್ತಷ್ಟು ಚುರುಕಾಗುತ್ತಿದೆ.
ಪ್ರತಿಯೊಂದು ವಾಹನಗಳ ಮೇಲೂ ಹದ್ದಿನ ಕಣ್ಣಿಡುವಂತೆ ಚುನಾವಣಾ ಆಯೋಗ ಪೊಲೀಸರಿಗೆ ಹೇಳಿದ್ದು, ಚುನಾವಣಾ ಅಕ್ರಮ ನಿಯಂತ್ರಿಸುವಲ್ಲಿ ಎಲ್ಲಿಲ್ಲದ ನಿಗಾ ವಹಿಸಿದೆ.[ಉಪಚುನಾವಣೆ ಬಂದಾಯ್ತು, ಎಲ್ಲಿದ್ದಾರೆ ಅಂಬರೀಶ್, ರಮ್ಯಾ?]
ಅಕ್ರಮ ಮದ್ಯ,ದಾಖಲೆಯಿಲ್ಲದ ಹಣ ಸಾಗಾಟವಾಗುವ ಶಂಕೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ವಾಹನದ ತಪಾಸಣೆಯೂ ನಡೆಯುತ್ತಿದೆ. ಇಂದು ಮೈಸೂರು ಜಿಲ್ಲಾಧಿಕಾರಿ ರಂದೀಪ್ ಅವರ ಕಾರನ್ನು ಸಹ ತಪಾಸಣೆ ಮಾಡಿರುವುದು ಪೊಲೀಸರು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ.[ಸೋಲು-ಗೆಲುವಿನ ಜಿದ್ದಾಜಿದ್ದಿ ಉಪಚುನಾವಣಾ ಕಣ!]
ನಂಜನಗೂಡು ವ್ಯಾಪ್ತಿಗೆ ತೆರಳುವ ಪ್ರತಿವಾಹನಗಳ ಮೇಲೂ ಕಣ್ಣಿರಿಸಿರುವ ಪೊಲೀಸರು ನಂಜನಗೂಡು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ. ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಏಪ್ರಿಲ್ 13 ರ ಗುರುವಾರ ಫಲಿತಾಂಶ ಹೊರಬೀಳುವವರೆಗೂ ಬಿಗಿಬಂದೋಬಸ್ತ್ ಮುಂದುವರಿಯುತ್ತದೆ.[ಚುನಾವಣೆ ಹೊಸ್ತಿಲಲ್ಲಿರುವಾಗ ಶ್ರೀನಿವಾಸ್ ಪ್ರಸಾದ್ ಮೌನವಾಗಿದ್ದೇಕೆ?]
ಕಾಂಗ್ರೆಸ್ ಮುಖಂಡರಾಗಿದ್ದ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್ ನಿಂದ ಕಳಲೆ ಕೇಶವ ಮೂರ್ತಿ ಸ್ಪರ್ಧಿಸುತ್ತಿದ್ದಾರೆ.