ಸರ್ಕಾರ ರಚನೆ ಕುರಿತು ಮೈಸೂರಿನ ಶಾಸಕರು ಏನಂತಾರೆ?
ಮೈಸೂರು, ಜುಲೈ 24: ರಾಜ್ಯದಲ್ಲಿ ಮೈತ್ರಿ ಸರ್ಕಾರ ವಿಶ್ವಾಸಮತವಿಲ್ಲದೆ ಪತನಗೊಂಡ ಪರಿಣಾಮ ಕಮಲಪಾಳಯ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಇದರಿಂದ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಬೇಸರವಾದರೆ, ಬಿಜೆಪಿ ನಾಯಕರ ಮೊಗದಲ್ಲಿ ಮಂದಹಾಸ ಮೂಡಿದೆ. ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತವೂ ನಿಗದಿಯಾಗುತ್ತಿದೆ.
Live Updates ಅಧಿಕಾರ ತ್ಯಜಿಸುವ ಮುನ್ನ ಋಣಮುಕ್ತ ಕಾಯ್ದೆ ಜಾರಿ ಮಾಡಿದ ಎಚ್ಡಿಕೆ
ಈ ಸಂದರ್ಭದಲ್ಲಿ, ಸೋಲು ಗೆಲುವಿನ ಕುರಿತು ಚರ್ಚೆಗಳೂ ನಡೆಯುತ್ತಿವೆ. ಮೈತ್ರಿ ಸೋಲಲು ಕಾರಣವೇನು? ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಅತೃಪ್ತರ ಮನವೊಲಿಸುವಲ್ಲಿ ಏಕೆ ವಿಫಲರಾದರು? ಎಂಬಿತ್ಯಾದಿ ಪ್ರಶ್ನೆ, ಚರ್ಚೆಗಳೂ ಹುಟ್ಟಿಕೊಳ್ಳುತ್ತಿವೆ. ಈ ಸಮಯದಲ್ಲಿ ಪಕ್ಷಗಳ ಸೋಲು ಗೆಲುವಿನ ಕುರಿತು ಮೈಸೂರಿನ ಶಾಸಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಿಜೆಪಿಯಿಂದ ರಾಜಭವನದ ದುರುಪಯೋಗ: ಶಾಸಕ ಡಾ. ಯತೀಂದ್ರ
ಸಂವಿಧಾನ ಬಾಹಿರವಾಗಿ ಬಿಜೆಪಿ ನಾಯಕರು, ಕಾಂಗ್ರೆಸ್ ಹಾಗೂ ದಳದ ಪಕ್ಷದ ಶಾಸಕರನ್ನು ಸೆಳೆದು ಸರ್ಕಾರವನ್ನು ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಬಳಿ 105 ಶಾಸಕರಿರಬಹುದು. ಆದರೆ ದುರುದ್ದೇಶದಿಂದ ರಾಜಭವನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಖಂಡನೀಯ ಎಂದಿದ್ದಾರೆ ಶಾಸಕ ಡಾ. ಯತೀಂದ್ರ
ಆಮಿಷವೊಡ್ಡಿ ಅಧಿಕಾರ ಪಡೆದುಕೊಂಡಿದ್ದಾರೆ: ಮಾಜಿ ಸಂಸದ ಧ್ರುವನಾರಾಯಣ್
ಬಿಜೆಪಿಯವರು ವಾಮ ಮಾರ್ಗದಲ್ಲಿ ಬೇರೆ ಪಕ್ಷಗಳೊಂದಿಗೆ ಸೇರಿ ಜನಪ್ರತಿನಿಧಿಗಳಿಗೆ ಆಸೆ ಆಮಿಷ ಒಡ್ಡಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಒಂದು ಸಣ್ಣ ಅವಕಾಶವನ್ನೂ ನೀಡಲಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಇದರಿಂದ ಮುಂಬರುವ ದಿನದಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು ಮಾಜಿ ಸಂಸದ ಧ್ರುವ ನಾರಾಯಣ್.
ವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನ
ಕುಟುಂಬ ರಾಜಕಾರಣ ಕೊನೆಗೊಂಡಿದೆ: ಸಂಸದ ಶ್ರೀನಿವಾಸ್ ಪ್ರಸಾದ್
ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿದ್ದ ಸರ್ಕಾರ ಕೊನೆಗೂ ಅಂತ್ಯಗೊಂಡಿದೆ. ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಜನರು ನಮ್ಮ ಬಗ್ಗೆ ಬಹಳ ನಿರೀಕ್ಷೆ ಇಟ್ಟಿದ್ದಾರೆ. ಅವರ ನಿರೀಕ್ಷೆಗೆ ಚ್ಯುತಿ ಬರದಂತೆ ಕೇಂದ್ರ ಸರ್ಕಾರದ ನೆರವನ್ನು ಬಳಸಿಕೊಂಡು ಉತ್ತಮ ಆಡಳಿತ ನೀಡಬೇಕಿದೆ ಎಂದು ಭರವಸೆ ನೀಡಿದರು ಸಂಸದ ಶ್ರೀನಿವಾಸ್ ಪ್ರಸಾದ್.
ಸಾರಾ ಮಹೇಶ್ ಕಾರಣ – ಶಾಸಕ ವಿಶ್ವನಾಥ್
ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿಯೇ ನಡೆಯುತ್ತಿದೆ. ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಗೆ ಸಾ ರಾ ಮಹೇಶ್ ಅವರೇ ನೇರ ಕಾರಣ. ಅನಾಯಾಸವಾಗಿ ಬಂದ ಅಧಿಕಾರ ನಾಲ್ಕೈದು ಜನರ ಕೈಯಲ್ಲಿತ್ತು. ಇದರಿಂದ ಸಾಕಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು ಶಾಸಕ ವಿಶ್ವನಾಥ್.
ಯಡಿಯೂರಪ್ಪ ಗದ್ದುಗೆಗೆ ಏರಲು ನಾಲ್ಕು ಮುಹೂರ್ತ ಫಿಕ್ಸ್!
ಅಭಿವೃದ್ಧಿಯೇ ನಮ್ಮ ಆದ್ಯತೆ – ಶಾಸಕ ರಾಮ್ ದಾಸ್
ಎಚ್ ಡಿ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದ ಅಧಿಕಾರ ಅವಧಿಯಲ್ಲಿ ಮೈಸೂರಿನ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದವು. ಈಗ ಬಿಜೆಪಿ ಸರ್ಕಾರ ಬಂದಿದೆ. ಇನ್ನೇನಿದ್ದರೂ ಮೈಸೂರು ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು ಶಾಸಕ ರಾಮದಾಸ್.
ಕೆಲಸಗಳಿಗೆ ಶೀಘ್ರ ಚಾಲನೆ- ಶಾಸಕ ನಾಗೇಂದ್ರ
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಮೈಸೂರು ಸೇರಿದಂತೆ ರಾಜ್ಯದ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಬಿಜೆಪಿಯಿಂದಾಗಿ ನಾವಂದುಕೊಂಡ ಕೆಲಸವೆಲ್ಲವೂ ಶೀಘ್ರದಲ್ಲಿಯೇ ಚಾಲನೆ ನೀಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ಶಾಸಕ ನಾಗೇಂದ್ರ.
ಹೈಡ್ರಾಮಾದ ಬಳಿಕ ಬಿಜೆಪಿ ಶಾಸಕರ ರೆಸಾರ್ಟ್ ರಾಜಕೀಯಕ್ಕೆ ತೆರೆ
ಆಪರೇಷನ್ ಕಮಲವೆಂಬುದು ಪ್ರಜಾಪ್ರಭುತ್ವಕ್ಕೆ ಶಾಪ - ಶಾಸಕ ತನ್ವೀರ್ ಸೇಠ್
ಕುಮಾರಸ್ವಾಮಿ ಸರ್ಕಾರದ ಪತನ ಮಾಡುವುದರೊಂದಿಗೆ ಪ್ರಜಾಪ್ರಭುತ್ವದ ಕತ್ತಲೆ ಮಾಡಿದ್ದಾರೆ. ಸ್ಥಿರವಾಗಿದ್ದ ಸರಕಾರವನ್ನು ಬಿಜೆಪಿ ತನ್ನ ಅಧಿಕಾರದ ದಾಹದಿಂದ ಪತನಗೊಳಿಸಿದೆ. ಆಪರೇಷನ್ ಕಮಲವೆಂಬುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಾಪ. ಪ್ರಾಮಾಣಿಕ ರಾಜಕಾರಣಕ್ಕಿಂತ ಸಂಖ್ಯಾಬಲದ ರಾಜಕಾರಣವೇ ಮುಖ್ಯವಾಗಿದೆ. ಪಕ್ಷಾಂತರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಶಾಸಕ ತನ್ವೀರ್ ಸೇಠ್.
ಎಚ್ಡಿಕೆಗೆ ನನ್ನ ಕೃತಜ್ಞತೆಗಳು: ಶಾಸಕ ಜಿ ಟಿ ದೇವೇಗೌಡ
ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ, ಎಚ್ ಡಿ ಕುಮಾರಸ್ವಾಮಿಯವರು ನನ್ನ ಮೇಲೆ ನಂಬಿಕೆ ಇಟ್ಟು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದರು. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಹಾಗೆಯೇ ಉನ್ನತ ಶಿಕ್ಷಣ ಇಲಾಖೆಯ ನನ್ನ ಅಧೀನದಲ್ಲಿ ಅಚ್ಚುಕಟ್ಟಾಗಿ ಕೆಲಸ ಕಾರ್ಯ ನಿರ್ವಹಿಸಿದ ನನ್ನ ಎಲ್ಲಾ ಅಧಿಕಾರಿ ವರ್ಗಕ್ಕೆ ಅಭಿನಂದನೆಗಳು. ನನಗೆ ಮತ ನೀಡಿ, ಶಾಸಕನನ್ನಾಗಿ ಆರಿಸಿ ಕಳಿಸಿಕೊಟ್ಟ ಚಾಮುಂಡೇಶ್ವರಿ ಕ್ಷೇತ್ರದ ಎಲ್ಲಾ ಮತದಾರರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು ಎಂದರು ಶಾಸಕ ಜಿ ಟಿ ದೇವೇಗೌಡ.