ಮೈಸೂರು: ಹೃದಯಾಘಾತದಿಂದ ಪುನೀತ್ ರಾಜಕುಮಾರ್ ಅಭಿಮಾನಿ ಸಾವು
ಮೈಸೂರು, ಮಾರ್ಚ್ 18: ಸಾವು ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಸಾಕ್ಷಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದ ಈ ಘಟನೆ. ಪವರ್ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದ ವೇಳೆ ಅಭಿಮಾನಿಯೊಬ್ಬ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಹೆಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಹಾಗೂ ಮಲ್ಲಿಕಾರ್ಜುನ ದಂಪತಿ ಪುತ್ರ ಆಕಾಶ್(22) ಮೃತ ಯುವಕ. ಗುರುವಾರ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಹಾಗೂ ಜೇಮ್ಸ್ ಚಿತ್ರದ ಬಿಡುಗಡೆಯ ಸಂಭ್ರಮವನ್ನು ಸಂಜೆ ಗ್ರಾಮದಲ್ಲಿ ಸಡಗರ ಸಂಭ್ರಮದೊಂದಿಗೆ ಆಚರಿಸಲಾಗುತ್ತಿತ್ತು. ಈ ವೇಳೆ ಕೆಲ ಯುವಕರ ಜೊತೆಗೂಡಿ ಡಿಜೆ ಸೌಂಡ್ಗೆ ನೃತ್ಯ ಮಾಡುತ್ತಿದ್ದ ಆಕಾಶ್ ಏಕಾಏಕಿ ಕುಸಿದು ಬಿದ್ದಿದ್ದಾನೆ.
ತಕ್ಷಣ ಸ್ಥಳೀಯರು ಆತನನ್ನು ಸಮೀಪದ ಸರಗೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಷ್ಟರಲ್ಲಾಗಲೇ ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬ ಮಾಹಿತಿಯನ್ನು ವೈದ್ಯರು ದೃಢೀಕರಿಸಿದರು.

ಯುವಕ ಆಕಾಶ್ ಹಠಾತ್ ನಿಧನ ಸುದ್ದಿ ತಿಳಿದು ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಶುಕ್ರವಾರ ಮಧ್ಯಾಹ್ನ ಸ್ವಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ಕುರಿತು ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
ಹುಬ್ಬಳ್ಳಿಯಲ್ಲೂ ಅಭಿಮಾನಿ ಭಾವುಕ
ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ದೇಶಾದ್ಯಂತ ಭರ್ಜರಿ ಎಂಟ್ರಿ ಕೊಟ್ಟಿದೆ. ಪುನೀರ್ ಹುಟ್ಟುಹಬ್ಬ, ಜೇಮ್ಸ್ ಚಿತ್ರ ಬಿಡುಗಡೆ ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ದುಪ್ಪಟ್ಟುಗೊಳ್ಳುವಂತೆ ಮಾಡಿತು. ಆದರೆ ಅಪ್ಪು ಅಗಲಿಕೆ ಅವರ ಅಭಿಮಾನಿಗಳನ್ನು ಪದೇ ಪದೇ ಕಾಡಿತು.
ಹುಬ್ಬಳ್ಳಿಯಲ್ಲಿ ಅಭಿಮಾನಿಯೋರ್ವ ಜೇಮ್ಸ್ ನಲ್ಲಿ ಪುನೀತ್ ಎಂಟ್ರಿ ಕೊಟ್ಟ ಕೂಡಲೇ, ಭಾವುಕನಾಗಿ ಗೋಡೆಗೆ ಗುದ್ದಿ, ಕಣ್ಣೀರು ಹಾಕಿ ಚಿತ್ರ ನೋಡಲಾಗದೆ ಹೊರ ಬಂದಿದ್ದಾನೆ. ಜೇಮ್ಸ್ ಚಿತ್ರ ಪ್ರದರ್ಶನದ ವೇಳೆ ಅಪ್ಪು ನೆನೆಸಿಕೊಂಡು ಅಭಿಮಾನಿ ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಪ್ಪು ಅಭಿಮಾನಿ ರಾಘು ಗದ್ಗದಿತರಾಗಿದ್ದಾರೆ.












Click it and Unblock the Notifications