ಲಿಮ್ಕಾ ದಾಖಲೆ ಸೃಷ್ಟಿಸಿದ ಮೈಸೂರಿನ ‘ಕಥೆ ಕೇಳೋಣ ಬನ್ನಿ’: ಏನಿದರ ವಿಶೇಷ?
ಮೈಸೂರು, ಅಕ್ಟೋಬರ್ 16: ಮಕ್ಕಳು ಕಥೆ ಕೇಳುತ್ತಾ ಬೆಳೆಯುತ್ತಿದ್ದ ಕಾಲ ನಿಧಾನವಾಗಿ ಮಾಯವಾಗಿ ಮೊಬೈಲ್ ಮತ್ತು ಟಿವಿಯೊಂದಿಗೆ ಬೆಳೆಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಈಗ ಅಜ್ಜ ಅಜ್ಜಿಯರ ಸ್ಥಾನವನ್ನು ಮೊಬೈಲ್ ಮತ್ತು ಅದರಲ್ಲಿರುವ ಗೇಮ್ ಅದರಾಚೆಗೆ ಟಿವಿಯಲ್ಲಿ ಬರುತ್ತಿರುವ ಕಾರ್ಟೂನ್ ಗಳು ಕಿತ್ತುಕೊಂಡಿವೆ.
ಜೊತೆಗೆ ಹೆತ್ತವರು ಕೂಡ ಮಕ್ಕಳನ್ನು ಸುಮ್ಮನಾಗಿಸುವ ಸಲುವಾಗಿ ಕೈಗೆ ಮೊಬೈಲ್ ಕೊಟ್ಟು ತಾವು ತಮ್ಮ ಪಾಡಿಗೆ ಇರುವಂತಾಗಿದೆ. ಇದೆಲ್ಲದರ ಪರಿಣಾಮ ಮಕ್ಕಳು ತಮ್ಮ ಬಾಲ್ಯ ಜೀವನದಲ್ಲಿ ಸಿಗಬೇಕಾದ ತಿಳುವಳಿಕೆ, ದೈಹಿಕ ಕಸರತ್ತು ಹೀಗೆ ಹತ್ತು ಹಲವು ಸಂತಸದ ಕ್ಷಣಗಳನ್ನು ಕಳೆದು ಕೊಳ್ಳುತ್ತಿದ್ದಾರೆ.

ಮಕ್ಕಳು ಕಥೆ ಹೇಳುವಂತೆ ತಮ್ಮ ಹಿರಿಯರನ್ನು ಪೀಡಿಸುತ್ತಿದ್ದ ಕಾಲವೊಂದಿತ್ತು. ಮಕ್ಕಳಿಗಾಗಿಯೇ ಚಂದಮಾಮ, ಬೊಂಬೆಮನೆ, ಬಾಲಮಿತ್ರ ಹೀಗೆ ವಿವಿಧ ಪತ್ರಿಕೆಗಳು ಬರುತ್ತಿದ್ದವು, ಅವುಗಳಲ್ಲಿನ ಕಥೆಗಳು ಮಕ್ಕಳ ಮನಸ್ಸಿಗೆ ಖುಷಿಕೊಡುವುದರ ಜತೆಗೆ ಜ್ಞಾನವನ್ನು ಹೆಚ್ಚಿಸುತ್ತಿದ್ದವು, ವಾಚಾನಾಭಿರುಚಿಯನ್ನು ಬೆಳೆಸುತ್ತಿದ್ದವು. ಆದರೆ ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ಬದಲಾಗಿದೆ. ಹೀಗಾಗಿ ಮಕ್ಕಳ ಬಾಲ್ಯದ ಚಟುವಟಿಕೆಯೂ ಬದಲಾಗಿದೆ. ಹೆತ್ತವರು ಕೂಡ ಮಕ್ಕಳನ್ನು ಮಕ್ಕಳ ಪಾಡಿಗೆ ಬಿಡದೆ ಅವರಿಗೆ ಹೆಚ್ಚಿನ ಹೊರೆಗಳನ್ನು ಹಾಕುತ್ತಿದ್ದಾರೆ.
ಇತ್ತೀಚೆಗೆ ರಿಯಾಲಿಟಿ ಶೋಗಳು ಹೆಚ್ಚಾಗುತ್ತಿರುವುದರಿಂದ ನಮ್ಮ ಮಕ್ಕಳು ಅಲ್ಲಿ ಕಾಣಿಸಿಕೊಳ್ಳಬೇಕೆಂಬ ಹಠದಿಂದ ವಿವಿಧ ಚಟುವಟಿಕೆಗಳಿಗೆ ದೂಡಿ ಅವರ ಬಾಲ್ಯದ ಸಂತಸವನ್ನೇ ಕಿತ್ತುಕೊಳ್ಳುತ್ತಿರುವುದು ಎಲ್ಲೆಡೆ ಕಾಣಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳಿಗೂ ತನ್ನದೇ ಆದ ಸಮಯವಿದ್ದು ಅದರಲ್ಲಿ ಅವರು ಖುಷಿಪಡಬೇಕು ಮತ್ತು ನಮ್ಮ ಕಾಲದಂತೆ ಮಕ್ಕಳು ಕಥೆ ಕೇಳುತ್ತಾ ಬೆಳೆಯಬೇಕೆಂಬ ಆಶಯದೊಂದಿಗೆ ಕಳೆದ 17ವರ್ಷಗಳ ಹಿಂದೆ ಮೈಸೂರಿನ ಕುವೆಂಪುನಗರದ ಚಿತ್ರಭಾನು ರಸ್ತೆಯಲ್ಲಿರುವ ಸುರುಚಿ ರಂಗಮನೆಯಲ್ಲಿ ಹುಟ್ಟಿಕೊಂಡ 'ಕಥೆ ಕೇಳೋಣ ಬನ್ನಿ' ಕಾರ್ಯಕ್ರಮ ಇವತ್ತು ಮಕ್ಕಳ ಆಕರ್ಷಕ ಕೇಂದ್ರವಾಗಿದೆ.
ಪ್ರತಿ ಶನಿವಾರ ಮಕ್ಕಳಿಗಾಗಿ ಕಥೆ
ಮೊದಲೆಲ್ಲ ಶನಿವಾರದಂದು ತಮ್ಮ ಅರ್ಧ ದಿನದ ಶಾಲಾ ತರಗತಿಯನ್ನು ಮುಗಿಸಿಕೊಂಡು ಬರುತ್ತಿದ್ದ ಮಕ್ಕಳು ಮನೆಗೆ ಬಂಣದ ಕೂಡಲೇ ಬೆನ್ನಿನ ಭಾರವನ್ನು ಒಗೆದು, ಸಮವಸ್ತ್ರ ಕಳಚಿ ಪೋಗೋ, ನಿಕ್, ಕಾರ್ಟೂನ್ ನೆಟ್ವರ್ಕ್ ನೋಡಲು ಟಿ.ವಿ. ಮುಂದೆ ಕಣ್ಣು ಮಿಟುಕಿಸದೆ ಸೋಫಾ ಮೇಲೆ ಕೂರುತ್ತಿದ್ದರು. ಆದರೆ ಈಗ ಹಾಗಿಲ್ಲ ಮಕ್ಕಳು ಬಿಡುವು ಮಾಡಿಕೊಂಡು ಮೈಸೂರಿನ ಕುವೆಂಪುನಗರದ ಚಿತ್ರಭಾನು ರಸ್ತೆಯಲ್ಲಿರುವ ಸುರುಚಿ ರಂಗಮನೆಯ ಕಡೆಗೆ ಬರುತ್ತಿದ್ದಾರೆ. ಇದೊಂದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
ಇದೆಲ್ಲವೂ ಸಾಧ್ಯವಾಗಿದ್ದು ಸುರುಚಿ ರಂಗಮನೆಯಿಂದ. ಇಲ್ಲಿನ ಶಶಿಧರ ಡೋಂಗ್ರೆ, ಸುಮನಾ ಡೋಂಗ್ರೆ, ವಿಜಯಾಸಿಂಧುವಳ್ಳಿ, ಡಾ.ಹೆಚ್.ಕೆ.ರಾಮನಾಥ್, ಕೆ.ನಾಗರಾಜ್ ಮೊದಲಾದವರೆಲ್ಲರೂ ಇದರ ಸಾರಥಿಗಳಾಗಿದ್ದಾರೆ. ಜೊತೆಗೆ ಹಲವು ಮಂದಿ ಇಲ್ಲಿಗೆ ಆಗಮಿಸಿ ಮಕ್ಕಳಿಗೆ ಕಥೆ ಹೇಳಿದ್ದಾರೆ. ಪ್ರತಿ ಶನಿವಾರ ಸಂಜೆ 4.30ಕ್ಕೆ ಗಣ್ಯರೊಬ್ಬರು ಕಟ್ಟೆಯ ಮೇಲೆ ಕಥೆ ಹೇಳುತ್ತಾರೆ. ಒಂದು ಗಂಟೆ ಕಾಲ ಮಕ್ಕಳು ಕಥೆ ಕೇಳಿ ಖುಷಿಪಡುತ್ತಾರೆ.
ಲಿಮ್ಕಾ ದಾಖಲೆ ಮಾಡಿದ ಕಾರ್ಯಕ್ರಮ
17 ವರ್ಷಗಳ ಹಿಂದೆ ಶ್ರೀಮತಿ ಭಾರ್ಗವಿ ನಾರಾಯಣ್ ಅವರಿಂದ ಉದ್ಘಾಟನೆ ಗೊಂಡು ಇದುವರೆಗೆ ಸತತವಾಗಿ 'ಕಥೆ ಕೇಳೋಣ ಬನ್ನಿ' ಸಾಪ್ತಾಹಿಕ ನಡೆದುಕೊಂಡು ಬಂದಿದೆ. ಇದೀಗ 849 ಸಂಚಿಕೆಗಳನ್ನು ಮುಗಿಸಿ 850 ಕ್ಕೆ ಕಾಲಿಡುವ ಸಂಭ್ರಮದಲ್ಲಿದೆ. ಈ ಹಿಂದೆಯೇ ಲಿಮ್ಕಾ ದಾಖಲೆಯನ್ನು ತನ್ನ ಮಡಿಲಿಗೆ ಈ ಕಾರ್ಯಕ್ರಮ ಸೇರಿಸಿಕೊಂಡಿದೆ. 'ಕಥೆ ಕೇಳೋಣ ಬನ್ನಿ' ಕಾರ್ಯಕ್ರಮದಲ್ಲಿ ನಮ್ಮ ಪರಂಪರೆ, ಸಂಸ್ಕೃತಿ ಮಕ್ಕಳ ಮನದಾಳದಲ್ಲಿ ಮೂಡಬೇಕು ಹಾಗೂ ಆಲಿಸುವ ಮತ್ತು ಮಾತನಾಡುವ ಕೌಶಲಗಳು ಮಕ್ಕಳಲ್ಲಿ ಬೆಳೆಯಬೇಕು ಎಂದು ಆಲೋಚಿಸಲಾಗುತ್ತದೆ.
ಇಲ್ಲಿ ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ, ಸಾಮಾಜಿಕ, ಶೌರ್ಯ-ಸಾಹಸ, ಹಾಸ್ಯ ಪ್ರಧಾನ, ಕಥೆಗಳನ್ನು ಶಿಕ್ಷಕರು, ಸಾಹಿತಿಗಳು, ವಿಜ್ಞಾನಿಗಳು, ಸಮಾಜ ಸೇವಾಕರ್ತರು, ಪೋಲಿಸ್ ಅಧಿಕಾರಿಗಳು, ಗೃಹಿಣಿಯರು, ಕಲಾವಿದರು, ಅಭಿಯಂತರರು, ಶಿಕ್ಷಕರು, ವೈದ್ಯರು, ವಕೀಲರು - ಹೀಗೆ ಸಮಾಜದ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಅನುಭವಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಕಥೆಗಳ ಮೂಲಕ ಮಕ್ಕಳ ಜ್ಞಾನವನ್ನು ವೃದ್ಧಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ.
ಮಕ್ಕಳ ಜ್ಞಾನ ಹೆಚ್ಚಿಸಲು ಆದ್ಯತೆ
ಆ ಮೂಲಕ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬೆಳೆಸಲಾಗುತ್ತಿದೆ. ಕಥೆ ಕೇಳುವುದರಲ್ಲಿ ಕೌಶಲ ಹೊಂದಿರುವ ವಿವಿಧ ಕ್ಷೇತ್ರದ 600 ಕ್ಕೂ ಹೆಚ್ಚು ಗಣ್ಯರು ಕಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಸಾಪ್ತಾಹಿಕ ಒಂದು ವಾರವೂ ಬಿಡದೆ ನಿರಂತರವಾಗಿ ನಡೆದು (ಕೊವಿಡ್ ವೇಳೆಯನ್ನು ಹೊರತುಪಡಿಸಿ) ಇದೇ ಅಕ್ಟೋಬರ್ 19, ಶನಿವಾರ ಕ್ಕೆ 850 ರ ಸಂಚಿಕೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾಡಿನ ಖ್ಯಾತ ಸಾಹಿತಿ, ವಾಗ್ಮಿ, ಚಿಂತಕ ಮತ್ತು ಶಿಕ್ಷಣ ತಜ್ಞ ಡಾ. ಕೆ ಪಿ ಪುತ್ತೂರಾಯ ಅವರು ಕಥೆ ಹೇಳಲಿದ್ದಾರೆ.
ಪ್ರತಿವಾರ ಕಥಾ ಕಾರ್ಯಕ್ರಮದ ಅಂತ್ಯದಲ್ಲಿ ಸುಮಾರು 10 ನಿಮಿಷಗಳು 'ಪದಕೋಶ ಸಮಯ' ವಾಗಿದ್ದು, ಈ ಅವಧಿಯಲ್ಲಿ ಮಕ್ಕಳಿಗೆ ಭಾಷಾ ಕಲಿಕೆ, ಶಬ್ದ ಭಂಡಾರ, ಸ್ಪಷ್ಟ ಉಚ್ಚಾರಣೆ, ವ್ಯಾಕರಣ ಇವುಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಇದನ್ನು ಬಿ. ಬಾಲಕೃಷ್ಣಯ್ಯ ಅವರು ನಡೆಸಿಕೊಡುತ್ತಾರೆ. ಇಂತಹದೊಂದು ವಿಶಿಷ್ಟ ಕಾರ್ಯಕ್ರಮವನ್ನು ಕೆ ನಾಗರಾಜ್ ಮತ್ತು ಬಿ. ಬಾಲಕೃಷ್ಣಯ್ಯ. ಮೈಸೂರಿನ ಖ್ಯಾತ ರಂಗಕರ್ಮಿ ಡಾ. ಎಚ್ ಕೆ ರಾಮನಾಥ್ ಅವರು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಈ ಬಾರಿಯ ಅತಿಥಿ ಡಾ.ಕೆ.ಪಿ.ಪುತ್ತೂರಾಯ
ಇನ್ನು ಈ ಬಾರಿಯ ಅಂದರೆ 850ರ ಕಾರ್ಯಕ್ರಮದ ಅತಿಥಿ ಡಾ.ಕೆ.ಪಿ.ಪುತ್ತೂರಾಯ ಅವರಾಗಿದ್ದಾರೆ. ಇವರು ಶರೀರ ಕ್ರಿಯಾ ಶಾಸ್ತ್ರದಲ್ಲಿ ಉಚ್ಚ ಶಿಕ್ಷಣ ಪಡೆದು ಪಿ. ಎಚ್. ಡಿ ಪದವಿಯನ್ನೂ ಗಳಿಸಿದ್ದಾರೆ. ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸಿದ್ದು ಸದ್ಯ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರವೃತ್ತಿಯಿಂದ ಭಾಷಣ ಮತ್ತು ಬರಹಗಾರ ರಾಗಿರುವ ಡಾ. ಪುತ್ತೂರಾಯರು ತಮ್ಮ ತಿಳಿಹಾಸ್ಯ ಬೆರೆತ ಭಾಷಣ ಮತ್ತು ಉಪನ್ಯಾಸಗಳಿಗೆ ಪ್ರಸಿದ್ಧರಾಗಿದ್ದಾರೆ. ಅಂಕಣಕಾರರಾಗಿ 500 ಕ್ಕೂ ಹೆಚ್ಚಿನ ಅಂಕಣಗಳನ್ನು ಪ್ರಕಟಿಸಿರುವುದು ವಿಶೇಷವಾಗಿದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications