'ನನ್ನ ಹೆಸರು ಸಿದ್ದರಾಮ, ನಾನು ಕೂಡ ಹಿಂದೂ'
ಮೈಸೂರು, ಜುಲೈ 15: "ನನ್ನ ಹೆಸರು ಸಿದ್ದರಾಮ. ನಾನು ಕೂಡ ಹಿಂದೂ. ಅದೇನು ಬಿಜೆಪಿಯವರು ಮಾತ್ರ ಹಿಂದೂಗಳಾ?" ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರಿಗೆ ಒಂದೇ ವಾರದ ಫಾಸಲೆಯಲ್ಲಿ ಎರಡನೇ ಬಾರಿಗೆ ನಾನು ಕೂಡ ಹಿಂದೂ ಎಂಬ ಮಾತನ್ನು ಹೇಳಿದ್ದಾರೆ.
ಮೈಸೂರಿಗೆ ಭೇಟಿ ನೀಡಿದ್ದ ಅವರಿಗೆ ಮಾಧ್ಯಮದವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾಡಿದ ಆರೋಪದ ಬಗ್ಗೆ ಗಮನ ಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿಯವರು ಮಾತ್ರ ಹಿಂದೂವಲ್ಲ, ಯಡಿಯೂರಪ್ಪ ಒಬ್ಬನೇ ಹಿಂದುನಾ, ನಾನು ಕೂಡಾ ಹಿಂದೂ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಆಯೋಜಿಸುತ್ತಿರುವ ವಿಸ್ತಾರಕ್ ಬಗ್ಗೆ ಕೇಳಿದ ಪ್ರಶ್ನೆಗೆ, ವಿಸ್ತಾರಕ್ ಅಂದರೆ ಹಿಂದುತ್ವದ ವಿಸ್ತರಣೆ. ಬಿಜೆಪಿಯವರು ಈಗಲೂ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ. ನಾವು ಅದನ್ನು ಆರಿಸುತ್ತೇವೆ ಎಂದು ಉತ್ತರ ನೀಡಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಗಲಭೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.












Click it and Unblock the Notifications