ಎಚ್.ಡಿ.ಕೋಟೆಯಲ್ಲೊಂದು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ
ಮೈಸೂರು, ಜುಲೈ 17 : ಸಾಮಾನ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ದೂರುಗಳೇ ಹೆಚ್ಚು. ಆದರೆ, ಎಚ್.ಡಿ.ಕೋಟೆ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ತನ್ನದೇ ಆದ ಸಾಧನೆಯಿಂದ ಎಲ್ಲರ ಗಮನಸೆಳೆದಿದೆ, ಜನರ ಪ್ರಶಂಸೆಗೂ ಪಾತ್ರವಾಗಿದೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇದೀಗ ಜಿಲ್ಲಾಮಟ್ಟದ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಶಸ್ತಿ ಸಿಕ್ಕಿದೆ. 2017-2018ರ ಸಾಲಿನಲ್ಲಿ ಕಾಯಕಲ್ಪ ಯೋಜನೆಯಡಿಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇಷ್ಟಕ್ಕೂ ಈ ಆರೋಗ್ಯ ಕೇಂದ್ರದ ಸಾಧನೆ ಏನು ಎಂಬುದನ್ನು ನೋಡುವುದಾದರೆ ಸಾಧನೆಯ ಒಂದಷ್ಟು ಪಟ್ಟಿ ದೊರೆಯುತ್ತದೆ.
ಕುಟುಂಬ ಯೋಜನೆಗೆ ಎಷ್ಟೆಲ್ಲಾ ಆಯ್ಕೆಗಳಿವೆ ಆದರೆ ಬಳಸುವರು ಕಡಿಮೆ
ಅಪೌಷ್ಠಿಕ, ಬಲಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತಪಾಸಣೆ ವೇಳೆ ಮಾತೃಪೂರ್ಣ ಯೋಜನೆಯ ಮಹತ್ವದ ಬಗ್ಗೆ ತಿಳಿಸಿ, ನಿರಂತರವಾಗಿ ಅಂಗನವಾಡಿ ಕೇಂದ್ರಕ್ಕೆ ಹಾಜರಾಗುವಂತೆ ಮನವೊಲಿಸಲಾಗುತ್ತದೆ.
ಯಶಸ್ವಿನಿ ಯೋಜನೆ ಕುರಿತು ಸರ್ಕಾರದ ಸ್ಪಷ್ಟನೆಗಳು
ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ 11 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಹಾಯಹಸ್ತದಿಂದ ಮಾತೃಪೂರ್ಣ ಯೋಜನೆಯನ್ನು ನಿರಾಕರಿಸಿದ್ದ 25 ಮಂದಿ ಗರ್ಭಿಣಿಯರು, 40 ಕ್ಕೂ ಹೆಚ್ಚು ಬಾಣಂತಿಯರ ಮನವೊಲಿಸಿ ಈ ಯೋಜನೆಯ ಲಾಭ ಪಡೆಯುವಂತೆ ಮಾಡಿರುವುದು ಈ ಆರೋಗ್ಯ ಕೇಂದ್ರದ ಸಾಧನೆ...
ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು, ಗರ್ಭಿಣಿಯರು ಹಾಗೂ ಬಾಣಂತಿಯರು ತಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ನೂತನವಾಗಿ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ. ಪ್ರತ್ಯೇಕವಾಗಿ ಸ್ತನಪಾನ ಕಾರ್ನರ್ ಸ್ಥಾಪಿಸಿ ಆ ಮೂಲಕ ತಾಯಿ ಹಾಲಿನ ಮಹತ್ವವನ್ನು ತಾಯಿಗೆ ತಿಳಿಸುವಲ್ಲಿಯೂ ಇಲ್ಲಿನ ವೈದ್ಯರು ಮತ್ತು ದಾದಿಗಳು ಸಫಲರಾಗಿದ್ದಾರೆ.
ಸರ್ಕಾರದಿಂದ ನೀಡಲಾಗುವ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಹಲವಾರು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಆರೋಗ್ಯ ಕೇಂದ್ರದಲ್ಲಿ ಗಿಡಮೂಲಿಕೆಗಳು
ಆಸ್ಪತ್ರೆಯಲ್ಲಿ ಔಷಧಿಗಳ ಜೊತೆಗೆ ಆಯುರ್ವೇದ ಚಿಕಿತ್ಸೆಯ ಬಗ್ಗೆ ರೋಗಿಗಳಿಗೆ ಸಲಹೆ ನೀಡಲಾಗುತ್ತದೆ. ಕೇಂದ್ರದ ಒಳ-ಹೊರ ಆವರಣದಲ್ಲಿ ಡಯಾಬಿಟಿಸ್, ಮೂಳೆ ರೋಗಗಳಂಥ ಕಾಯಿಲೆಗಳಿಗೆ ಮಧುನಾಸೀನಿ, ನಿಂಬೆಗಿಡ, ತುಳಸಿ, ಬೆಟ್ಟದ ನೆಲ್ಲಿಕಾಯಿ, ನೆಲನೆಲ್ಲಿ, ಪಪ್ಪಾಯಿ, ದೊಡ್ಡ ಪತ್ರೆ, ಲೆಮನ್ಗ್ರಾಸ್, ಮುಂಗಾರು ಬಳ್ಳಿ, ನೀರು ಬ್ರಾಹ್ಮಿ, ನುಗ್ಗೆ ಹೀಗೆ ಸುಮಾರು 45ಕ್ಕೂ ಹೆಚ್ಚು ಗಿಡಮೂಲಿಕೆ ಔಷಧಿಗಳ ಗಿಡ ನೆಟ್ಟು ಆಯುರ್ವೇದ ಔಷಧಿಯ ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಆರೋಗ್ಯ ಕೇಂದ್ರ
6 ಹಾಸಿಗೆಯುಳ್ಳ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 11 ಗ್ರಾಮಗಳು ಒಳಪಡುತ್ತವೆ. ಈ ಭಾಗದಲ್ಲಿ ಶಿಶು, ಗರ್ಭಿಣಿಯರ ಮರಣ ಕಡಿಮೆಯಾಗಿರುವುದು ಆರೋಗ್ಯ ಕೇಂದ್ರದ ಅಧಿಕಾರಿಗಳ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ.
ಇಲ್ಲಿನ ವೈದ್ಯರು ಸಿಬ್ಬಂದಿಗಳೊಂದಿಗೆ ಮೂರು ತಿಂಗಳಿಗೊಮ್ಮೆ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ, ನೀರಿನ ಟ್ಯಾಂಕ್ ಸ್ವಚ್ಛತೆ, ಡೆಂಗ್ಯೂ, ಚಿಕೂನ್ ಗುನ್ಯಾ, ಕ್ಷಯ, ತಂಬಾಕು ಮತ್ತು ಮದ್ಯಪಾನದಂತಹ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಡಾ.ಚಂದ್ರಕಲಾ ಅವರ ಕಾರ್ಯ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಪುಟ್ಟ ಮಕ್ಕಳು ಕೂರಲು ಚಿಕ್ಕದಾದ ಪ್ಲಾಸ್ಟಿಕ್ ಕುರ್ಚಿಗಳನ್ನು ಇಡಲಾಗಿದೆ.
ಈ ಕೇಂದ್ರ ಮಾದರಿಯಾಗಲು ಡಾ. ಚಂದ್ರಕಲಾ ಅವರು ಮುಖ್ಯ ಕಾರಣ. 2009ರಿಂದ ಅವರು ಇಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಾಣಂತಿ, ಗರ್ಭಿಣಿ ಮತ್ತು ಮಕ್ಕಳ ಆರೋಗ್ಯದ ಕಾಳಜಿ ವಹಿಸುತ್ತಿದ್ದಾರೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಚಂದ್ರಕಲಾ ಅವರು ಮೂಲತಃ ತುಮಕೂರಿನ ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದವರು. ಪ್ರಾಥಮಿಕ ಹಂತದಿಂದ ಪ್ರೌಢಶಾಲೆವರೆಗೂ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ಅವರು ಚಿಕ್ಕಂದಿನಿಂದಲೇ ತಂದೆಯವರು ಮಾಡುತ್ತಿದ್ದ ಸಮಾಜ ಸೇವೆಯನ್ನು ಆದರ್ಶವಾಗಿಟ್ಟುಕೊಂಡವರು.
ಎಂಬಿಬಿಎಸ್ ಓದಿ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕನಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕಾರ್ಯ ಆರಂಭಿಸಿದ್ದು, ವೈದ್ಯಕೀಯ ವೃತ್ತಿಯೊಂದಿಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.