ಸಚಿವ ಸ್ಥಾನ ಸಿಗದಿದದ್ದಕ್ಕೆ ಅಸಮಾಧಾನವಿಲ್ಲ, ಬೇಸರವಿದೆ: ರಾಮದಾಸ್
ಮೈಸೂರು, ಆಗಸ್ಟ್ 27: "ಸಚಿವ ಸ್ಥಾನ ಸಿಕ್ಕಿಲ್ಲ ಎಂದು ನನಗೆ ಅಸಮಾಧಾನವಾಗಿಲ್ಲ. ಆದರೆ ನೋವಾಗಿರುವುದು ನಿಜ" ಎಂದು ಶಾಸಕ ರಾಮದಾಸ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೈಸೂರು ಭಾಗದ ಯಾರಿಗೂ ಏಕೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ. ಸಚಿವ ಸ್ಥಾನ ನನಗೆ ಸಿಗಲಿಲ್ಲ ಎಂಬ ಬೇಸರ ಇಲ್ಲ, ಆದರೆ ನೋವಾಗಿದೆ" ಎಂದರು.

"ಮಂತ್ರಿಯಾಗಲಿಲ್ಲ ಎಂದು ಅಸಮಾಧಾನ ಪಟ್ಟುಕೊಳ್ಳುವವನು ನಾನಲ್ಲ. ಆದರೆ ಮೈಸೂರು ಭಾಗವನ್ನು ಪರಿಗಣಿಸಿಲ್ಲ ಎಂಬ ಬೇಸರವಿದೆಯಷ್ಟೆ. ಇಂದು ಅನಾರೋಗ್ಯವಿದ್ದರೂ ಪಕ್ಷದ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿದ್ದೆ. ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುವುದು ನನ್ನ ಕರ್ತವ್ಯ" ಎಂದಿದ್ದಾರೆ.

"ದಸರಾ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ನಾನು ಅಸಹಕಾರ ನೀಡುತ್ತಿಲ್ಲ. ಗಜಪಯಣದಲ್ಲಿ ಆನೆಗಳಿಗೆ ಮೊದಲು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದವ ನಾನು. ಅದೇ ದಿನ ನನ್ನ ಸಹೋದರನ ಜೊತೆ ಕಾರಿನಲ್ಲಿ ಪ್ರಯಾಣಿಸುವಾಗ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಅದಕ್ಕಾಗಿಯೇ ದಸರಾ ಪೂರ್ವಭಾವಿ ಸಭೆಯಲ್ಲೂ ನನಗೆ ಭಾಗವಹಿಸಲಾಗಲಿಲ್ಲ. ಅದನ್ನೇ ಕೆಲವರು ತಪ್ಪಾಗಿ ಭಾವಿಸಿದರು. ಅಸಮಾಧಾನ ಎಂದರು" ಎಂದು ಬೇಸರಗೊಂಡರು.
"ನಾನು ಸರ್ಕಾರದಲ್ಲಿ ಇಲ್ಲದಿದ್ದರೂ ಪಕ್ಷದಲ್ಲಿಯೇ ಇದ್ದೇನೆ. ದಸರಾ ನಡೆಸಿಕೊಡುವುದು ಶಾಸಕನಾಗಿ ನನ್ನ ಜವಾಬ್ದಾರಿ" ಎಂದರು.












Click it and Unblock the Notifications