ಅಂದಿನ ಬಾಂಬೆ ಡಿಟೇಲ್ಸ್ ಹೇಳುವ ಶಕ್ತಿ ನನಗೂ ಇದೆ: ಸಿದ್ದರಾಮಯ್ಯಗೆ ತಿರುಗೇಟು
ಮೈಸೂರು, ಜನವರಿ 9: ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಖರೀದಿಸಿತು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪ ವಿಚಾರವಾಗಿ
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ನಮ್ಮನ್ನು ಯಾರಿಂದಲೂ ಖರೀದಿ ಮಾಡೋಕೆ ಸಾಧ್ಯವಿಲ್ಲ. ಚೆಲುವರಾಯಸ್ವಾಮಿ ಅ್ಯಂಡ್ ಟೀಂ ಕಾಂಗ್ರೆಸ್ಗೆ ಬಂದಾಗ, ಅವರನ್ನೆಲ್ಲಾ ಬಾಂಬೆಯಲ್ಲಿ ಇಟ್ಟಿದ್ದು ನಾನು ಹಾಗೂ ಭೈರತಿ ಬಸವರಾಜ್ ಎಂದು ಸ್ಪೋಟಕ ಮಾಹಿತಿ ನೀಡಿದರು.
ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಕೆ.ಎಸ್ ಭಗವಾನ್
ಅವತ್ತಿನ ಬಾಂಬೆಯ ಡಿಟೆಲ್ಸ್ ಜಾಸ್ತಿ ಹೇಳುವ ಶಕ್ತಿ ನನಗೂ ಇದೆ. ಅವರು ನಮ್ಮ ಬಗ್ಗೆ ಹೆಚ್ಚು ಹೇಳಿದರೆ ನಾನೂ ಹಳೆಯದೆಲ್ಲವನ್ನೂ ಹೇಳಬೇಕಾಗುತ್ತದೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಹದಿನೇಳು ಜನ ಶಾಸಕರು ಕಾಂಗ್ರೆಸ್ ಪಕ್ಷ ಬಿಟ್ಟೆವು. ಸಿದ್ದರಾಮಯ್ಯ ಈ ವಿಚಾರದಲ್ಲಿ ಆರೋಪ ಮಾಡಬಾರದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ನಾನು ಡಿಟೈಲ್ ಆಗಿ ಹೇಳಬೇಕಾಗುತ್ತದೆ
ಇನ್ನು ಇದು ಕಮೀಷನ್ ಸರ್ಕಾರ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಶೇಖರ್, ಸಮ್ಮಿಶ್ರ ಸರ್ಕಾರ ಇದ್ದಾಗ ನೀವು ಎಷ್ಟು ಕಮೀಷನ್ ತೆಗೆದುಕೊಳ್ಳುತ್ತಿದ್ದಿರಿ ಎಂಬುದು ನನಗೆ ಗೊತ್ತಿದೆ. ಅದನ್ನೂ ನಾನು ಡಿಟೈಲ್ ಆಗಿ ಹೇಳಬೇಕಾಗುತ್ತದೆ, ಆದರೆ ಇದೀಗ ಅದೆಲ್ಲಾ ಬೇಡ ಎಂದರು.
ನಾನು ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದೆ
ನಾನು ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದೆ ಎಂಬುದನ್ನು ಮರೆಯಬೇಡಿ. ಡಿ.ಕೆ.ಶಿವಕುಮಾರ್ ಅವರು ಸುಮ್ನೆ ಇದ್ದರೆ ಚೆಂದ. ಕಮೀಷನ್ ಸರ್ಕಾರ ಎನ್ನುವುದು ಶೋಭೆ ತರುವ ಮಾತಲ್ಲ. ವಿರೋಧ ಪಕ್ಷದವರು ಇಷ್ಟು ದಿನ ಮಲಗಿದ್ರು. ಈಗ ಏನೋ ಮಾಡೋದಕ್ಕೆ ಹೊರಟ್ಟಿದ್ದಾರೆ ಎಂದು ಸಚಿವ ಸಚಿವ ಸೋಮಶೇಖರ್ ಮೈಸೂರಿನಲ್ಲಿ ಡಿಕೆಶಿಗೆ ತಿರುಗೇಟು ನೀಡಿದರು.
ಹೆಚ್ಚಿನ ಸ್ಥಾನಗಳಲ್ಲಿ ಜಯ
ಮೈಸೂರು ಜಿಲ್ಲೆಯ 80 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿಗರು ಅಧಿಕಾರ ಹಿಡಿಯುವ ವಿಶ್ವಾಸವಿದೆ ಎಂದು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟರು. ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದ ಬಳಿಕ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಗೆಲುವಿಗಾಗಿ ಜನ ಸೇವಕ್ ಸಮಾವೇಶ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಜನ ಸೇವಕ್ ಸಮಾವೇಶ ನಡೆಸಲಾಗುವುದು. ಇದಕ್ಕಾಗಿ ಒಟ್ಟು ಐದು ತಂಡಗಳನ್ನು ರಚನೆ ಮಾಡಲಾಗುತ್ತಿದೆ ಎಂದು ಎಂಎಲ್ಸಿ ಅಶ್ವಥ್ ನಾರಾಯಣ್ ಹೇಳಿದರು.
ಪ್ರತಿದಿನ ಎರಡು ಜಿಲ್ಲೆಗಳಲ್ಲಿ ಸಮಾವೇಶ
ಸಂಸದರು, ಶಾಸಕರನ್ನು ಒಳಗೊಂಡಂತೆ ಬಿಜೆಪಿಯ ಜನಪ್ರತಿನಿಧಿಗಳು, ಪರಾಜಿತ ಅಭ್ಯರ್ಥಿಗಳು, ನಿಗಮ ಮಂಡಳಿಗಳ ಅಧ್ಯಕ್ಷರು ಈ ಐದು ತಂಡಗಳಲ್ಲಿ ಇರಲಿದ್ದಾರೆ. ಎಲ್ಲ 30 ಜಿಲ್ಲೆಗಳಲ್ಲಿ ಗ್ರಾಮ ಸೇವಕ್ ಸಮಾವೇಶ ನಡೆಯಲಿದೆ. ಪ್ರತಿದಿನ ಎರಡು ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಜ.11 ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಆರಂಭವಾಗಲಿ ಎಂದರು. ಜನ ಸೇವಕ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಚಾಲನೆ ಸಿಗಲಿದ್ದು, ಸೋಮವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ ಎಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಗ್ರಾಮ ಸೇವಕ್ ಸಮಾವೇಶದ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದರು.