ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜ ಒಡೆಯರ್ ಹೆಸರಿಡುವಂತೆ ಸಚಿವರ ಮನವಿ
ಮೈಸೂರು, ಮಾರ್ಚ್ 4: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಜಯಚಾಮರಾಜ ಒಡೆಯರ್ ಅವರ ಹೆಸರು ನಾಮಕರಣ ಮಾಡುವಂತೆ ಹಾಗೂ ವಿಧಾನಸಭೆಯಲ್ಲಿ ಜಯಚಾಮರಾಜ ಒಡೆಯರ್ ಅವರ ಭಾವಚಿತ್ರ ಅಳವಡಿಸಿ ಗೌರವ ಸೂಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪತ್ರ ಬರೆದು ಮನವಿ ಮಾಡಿದ್ದಾರೆ.
ಮೈಸೂರಿನ ಅಭಿವೃದ್ಧಿಗೆ ನಮ್ಮ ರಾಜಮನೆತನದ ಕೊಡುಗೆ ಅಪಾರ. ನಮ್ಮ ಆಗಿನ ಮೈಸೂರು ರಾಜ್ಯವನ್ನು ಒಂದು ಮಾದರಿಯನ್ನಾಗಿ ರೂಪಿಸುವಲ್ಲಿ ಆಳಿದಂತಹ ಅನೇಕ ರಾಜ ಮಹಾರಾಜರ ಕೊಡುಗೆಗಳಿವೆ. ಈ ಸಾಲಿನಲ್ಲಿ ಜಯಚಾಮರಾಜ ಒಡೆಯರ್ ಅವರ ಕಾಣಿಕೆ ಸಹ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡುವುದು ಸೂಕ್ತ. ಜತೆಗೆ ವಿಧಾನಸಭೆಯಲ್ಲಿ ಅವರ ಭಾವಚಿತ್ರ ಅಳವಡಿಸಿ ಗೌರವ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೇ, ಕರ್ನಾಟಕಕ್ಕೆ ಮೈಸೂರು ಹಾಗೂ ಮೈಸೂರು ಮಹಾರಾಜರ ಕೊಡುಗೆ ಅಪಾರವಾಗಿದೆ. ಜೊತೆಗೆ ಸ್ವತಃ ರಾಜವಂಶಸ್ಥರೇ ಪತ್ರ ಬರೆದು ಕೋರಿದ್ದು, ಅವರಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ವಿಧಾನಸೌಧದಲ್ಲಿ ಜಯಚಾಮರಾಜ ಒಡೆಯರ್ ಭಾವಚಿತ್ರವನ್ನು ಅಳವಡಿಸುವಂತೆಯೂ ಸಹ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಚಿವ ಎಸ್.ಟಿ ಸೋಮಶೇಖರ್ ಪತ್ರ ಬರೆದಿದ್ದಾರೆ.

ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಪ್ರಶಂಸೆ
ಈ ಹಿಂದೆ 10ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವನ್ನು ವಿಧಾನಸಭೆಯಲ್ಲಿ ಅಳವಡಿಸುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಕೋರಿರುವುದು ಪ್ರಶಂಸನೀಯ ಕ್ರಮವಾಗಿದೆ. ಇಂತಹ ಕಾರ್ಯಕ್ಕೆ ಅವರು ಮುಂದಾಳತ್ವ ವಹಿಸಿರುವುದು ಸಹ ಹೆಮ್ಮೆಯ ವಿಷಯವಾಗಿದೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಪತ್ರದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications