ಕಡಿಮೆ ಅವಧಿಯಲ್ಲೇ ಹೆಚ್ಚು ಅಭಿವೃದ್ಧಿ ಕೆಲಸ: ಮೈಸೂರು ಮೇಯರ್ ವಿದಾಯ ಭಾಷಣ
ಮೈಸೂರು, ಫೆಬ್ರವರಿ 24: ನನಗೆ ಸಿಕ್ಕ ಕಡಿಮೆ ಅವಧಿಯಲ್ಲೇ ಹೆಚ್ಚು ಅಬಿವೃದ್ಧಿ ಕೆಲಸ ಮಾಡಲು ಶ್ರಮಿಸಿದ್ದೇನೆ. ಮೇಯರ್ ಹುದ್ದೆ ನಂತರವೂ ನಾನು ಮೈಸೂರಿನ ಪ್ರಗತಿ ಬಗ್ಗೆಯೇ ಕೆಲಸ ಮಾಡುತ್ತೇನೆ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದ ಪಾಲನೇತ್ರ ತಿಳಿಸಿದರು.
ಗುರುವಾರ ಮೈಸೂರು ಮೇಯರ್ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿದಾಯದ ಭಾಷಣ ಮಾಡಿದ ಸುನಂದ ಪಾಲನೇತ್ರ, ಮಹಿಳೆಯರಿಗಾಗಿ ಪಿಂಕ್ ಶೌಚಾಲಯ ನಿರ್ಮಾಣ ಮಾಡುವುದು ನನ್ನ ಕನಸಿನ ಯೋಜನೆ. ಅದಕ್ಕಾಗಿ ಎಲ್ಲಾ ಕೆಲಸಗಳು ಆಗುತ್ತಿದೆ. ಈ ಹಿಂದೆ ಮಳೆಯಿಂದ ಸ್ವಲ್ಪ ಸಮಸ್ಯೆ ಆಗಿತ್ತು. ಆದರೆ ಇದೀಗ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ ಎಂದರು.
ಮೈಸೂರು; ಪಾಲಿಕೆ ಮೇಯರ್ ಪಟ್ಟಕ್ಕೆ ಶುರು ಆಯ್ತು ಲೆಕ್ಕಾಚಾರ!
ಅಲ್ಲದೆ, ಒಳಚರಂಡಿಗಳಿಗೆ ಕೊಳವೆ ಮಾರ್ಗ ಅಳವಡಿಸುವ ಕೆಲಸವನ್ನು ಮಾಡಿದ್ದೇನೆ. ಇದುವರೆಗೆ 58 ಕೋಟಿ ರೂ. ನೀರಿನ ತೆರಿಗೆ ಸಂಗ್ರಹ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ.35ರಷ್ಟು ಹೆಚ್ಚಳ ಆಗಿದೆ ಎಂದು ಸುನಂದ ಪಾಲನೇತ್ರ ತಿಳಿಸಿದರು.
ಮೇಯರ್ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ವರದಿ ಓದಿದ ಸುನಂದ ಪಾಲನೇತ್ರ ಅವರು, ತಮಗೆ ಸಹಕರಿಸಿದ ಎಲ್ಲಾ ಹಾಲಿ, ಮಾಜಿ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಧನ್ಯವಾದಗಳನ್ನು ತಿಳಿಸಿದರು. ತಮ್ಮ ಅವಧಿಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
65 ವಾರ್ಡ್ಗಳಿಗೆ 650 ಲಕ್ಷ ರೂ.ಗಳ ಅನುದಾನ ನೀಡಿದ್ದು, ರಸ್ತೆ ಗುಂಡಿ ಮುಚ್ಚು ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದ ಒಳಗೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳ್ಳಲಿದೆ. 8.72 ಕಿ.ಮೀ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪಬ್ಲಿಕ್ ಬೈಸಿಕಲ್ ಶೇರಿಂಗ್ ಯೋಜನೆ ಆಧುನೀಕರಿಸಲು ಯೋಜನೆ ರೂಪಿಸಲಾಗಿದೆ. ಪುರಭವನ ಬೇಸ್ಮೆಂಟ್ ಪಾರ್ಕಿಂಗ್ ಹೊರಾಂಗಣ ಅಭಿವೃದ್ಧಿ ಕಾಮಗಾರಿ ಉಳಿಕೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಅಜೀಜ್ ಸೇಠ್ ಮುಖ್ಯ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ. ರುದ್ರಭೂಮಿಗಳ ಅಭಿವೃದ್ಧಿ, ಪಾಲಿಕೆ ವಾಹನಗಳ ನಿಲುಗಡೆ ಆವರಣ ಅಭಿವೃದ್ಧಿ, ವಿವಿಧ ವಲಯ ಕಚೇರಿಗಳ ಕಟ್ಟಡ ನಿರ್ಮಾಣ ಕಾಮಗಾರಿ, ಕೆಸರೆ, ರಾಯನಕೆರೆ, ವಿದ್ಯಾರಣ್ಯಪುರಂ ಘನ ತ್ಯಾಜ್ಯ ಸಂಸ್ಕರಾಣಾ ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಡಿಪಿಆರ್ ತಯಾರಿಯಾಗಿದ್ದು, ಕೌನ್ಸಿಲ್ ಅನುಮೋದನೆ ಆಗಿದೆ ಎಂದು ಸುನಂದ ಪಾಲನೇತ್ರ ಮಾಹಿತಿ ನೀಡಿದರು.
ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಮೇಯರ್ ಹುದ್ದೆ ಅಲಂಕರಿಸಿತ್ತು. ಇಂದು ಮೇಯರ್ ಅವಧಿ ಅಂತ್ಯಗೊಂಡಿದ್ದು, ಹೊಸ ಮೇಯರ್ ಆಯ್ಕೆಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಕಸರತ್ತು ಶುರುವಾಗಿದೆ. ರಾಜ್ಯ ಬಜೆಟ್ ಬಳಿಕ ಮೇಯರ್ ಚುನಾವಣೆಗೆ ದಿನಾಂಕ ಫಿಕ್ಸ್ ಆಗಲಿದೆ.