ಸಿದ್ದರಾಮಯ್ಯ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದ ಎಚ್.ಸಿ.ಮಹದೇವಪ್ಪ
Recommended Video

ಮೈಸೂರು, ನವೆಂಬರ್. 14: ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರು ಯಾವಾಗಲೂ ಸ್ನೇಹಿತರು ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಮುನಿಸು ಇಲ್ಲ. ಇಬ್ಬರೂ ಚುನಾವಣೆಯಲ್ಲಿ ಸೋತಿದ್ದೀವಿ. ಇಬ್ಬರಿಗೂ ಬೇಸರ ಇತ್ತು. ಹೀಗಾಗಿ ಮೂರು ತಿಂಗಳು ಪ್ರತ್ಯೇಕವಾಗಿದ್ದು ನಿಜ. ಈಗಲೂ ನಾವು ಜೊತೆಯಾಗಿದ್ದೀವಿ. ನಮ್ಮದು 35 ವರ್ಷದ ಸ್ನೇಹ ಎಂದು ತಮ್ಮ ಹಾಗೂ ಸಿದ್ದರಾಮಯ್ಯರ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮೀಸಲಾತಿ ದುರ್ಬಲವಾಗಿದೆ. ಬ್ಯಾಕ್ ಲಾಗ್ ಹುದ್ದೆಗಳು ಹೆಚ್ಚಿವೆ. ಪ್ರಧಾನಿ ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಕೊಟ್ಟಿರುವ ಭರವಸೆಯನ್ನು ಚುನಾವಣೆಗೆ ಹೋಗುವ ಮುನ್ನ ಈಡೇರಿಸಬೇಕು ಎಂದು ಆಗ್ರಹಿಸಿದರು.

ಅಸ್ಸಾಂ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡು ಮಕ್ಕಳಿದ್ದವರಿಗೆ ಸ್ಪರ್ಧೆಗೆ ಅವಕಾಶ ಇಲ್ಲ ಎಂದಿದೆ. ಇದು ಸಂವಿಧಾನ ಬಾಹಿರ. ಕಲ್ಯಾಣದ ಹೆಸರಲ್ಲಿ ದಲಿತ, ಬುಡಕಟ್ಟು, ಹಿಂದುಳಿದವರನ್ನು ಅವಕಾಶ ವಂಚಿತರಾಗಿ ಮಾಡುತ್ತಿರುವುದು ಸಲ್ಲದು ಎಂದು ಕಿಡಿಕಾರಿದರು.
ಟಿಪ್ಪು ಜಯಂತಿಗೆ ಸಿಎಂ, ಡಿಸಿಎಂ ಗೈರು ವಿಚಾರ ಕುರಿತು ಮಾತನಾಡಿದ ಅವರು, ಇದು ಅವರ ವ್ಯಕ್ತಿಗತವಾದದು. ಅದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಬಿಜೆಪಿಯಾಗಲೀ, ಇನ್ಯಾರೇ ಆದರೂ ಟಿಪ್ಪು ಆಡಳಿತದ ಬಗ್ಗೆ ಪ್ರಶ್ನೆ ಮಾಡುವುದು ಇತಿಹಾಸದಲ್ಲಿ ಕಪ್ಪು ಚುಕ್ಕೆ ಆಗಲಿದೆ. ಯಾರೇ ಆದರೂ ಸಂವಿಧಾನ ಹೊರತಾಗಿ ನಡೆದುಕೊಳ್ಳಲಾಗದು ಎಂದರು.












Click it and Unblock the Notifications