ಮತ ಪರಿವರ್ತನೆಗೆ ಕಾಂಗ್ರೆಸ್ ಕೈಯಲ್ಲಿ ಒಕ್ಕಲಿಗ ಅಸ್ತ್ರ: ಎಲ್ಲೆಲ್ಲಿ ಇದರ ಪ್ರಯೋಗ..?
ಮೈಸೂರು, ಏಪ್ರಿಲ್ 06: ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವ ಕಾರಣ ಮತ್ತು ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಒಕ್ಕಲಿಗರನ್ನು ತಮ್ಮೆಡೆಗೆ ಸೆಳೆದು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಎತ್ತಿಕಟ್ಟುವ ಸಲುವಾಗಿ ಕಾಂಗ್ರೆಸ್ ಇದೀಗ ಹೊಸ ಒಕ್ಕಲಿಗ ಅಸ್ತ್ರವನ್ನು ಬಳಸುತ್ತಿದ್ದು, ಇದು ಮತವಾಗಿ ಪರಿವರ್ತನೆಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ನ ಈ ತಂತ್ರ ಮೈತ್ರಿ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಂತು ನಿಜ.
ಇದುವರೆಗೆ ನಡೆದ ಲೋಕಸಭಾ ಚುನಾವಣೆಗೂ ಈ ಬಾರಿಯ ಲೋಕಸಭಾ ಚುನಾವಣೆಗೂ ಹತ್ತು ಹಲವು ವ್ಯತ್ಯಾಸಗಳಿವೆ. ಇದು ರಾಜ್ಯದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯಾದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಸದ್ಯ ಜೆಡಿಎಸ್ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದರೂ ಪ್ರಾದೇಶಿಕ ಪಕ್ಷವಾಗಿ ಅದು ರಾಜ್ಯದಲ್ಲಿ ಗಟ್ಟಿಯಾಗಿ ಉಳಿಯುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಗಟ್ಟಿಯಾಗಿ ಇರಬೇಕಾದರೆ ಅಧಿಕಾರದ ಅಗತ್ಯತೆ ಇಲ್ಲದಿಲ್ಲ. ಹೀಗಾಗಿ ಅವರು ಕೂಡ ಮೂರಕ್ಕೆ ಮೂರು ಸ್ಥಾನವನ್ನು ಗೆಲ್ಲಲೇ ಬೇಕಾಗಿದೆ.

ಇದೆಲ್ಲದರ ನಡುವೆ ಕರ್ನಾಟಕದಿಂದ ಅತಿಹೆಚ್ಚು ಸಂಸದರನ್ನು ಗೆಲ್ಲಿಸಿ ಹೈಕಮಾಂಡ್ ಕೃಪೆಗೆ ಪಾತ್ರರಾಗಲು ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನ ರಾಜ್ಯ ನಾಯಕರು ಹಠಕ್ಕೆ ಬಿದ್ದಿದ್ದು, ಹತ್ತು ಹಲವು ರಣತಂತ್ರಗಳನ್ನು ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ.
ಮುಂದೆ ಪ್ರಚಾರದ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಪಕ್ಷಗಳ ನಡುವೆ, ನಾಯಕರ ಮಧ್ಯೆ ಆರೋಪ- ಪ್ರತ್ಯಾರೋಪಗಳು, ಏಟಿಗೆ ಎದಿರೇಟುಗಳು ಶುರುವಾಗಲಿದೆ. ಈ ನಡುವೆ ಕಾಂಗ್ರೆಸ್ ಈಗಾಗಲೇ ಒಕ್ಕಲಿಗ ಅಸ್ತ್ರವನ್ನು ಹಳೆಮೈಸೂರು ಭಾಗದಲ್ಲಿ ತೇಲಿ ಬಿಟ್ಟಿದ್ದು ಇದು ಎಷ್ಟರ ಮಟ್ಟಿಗೆ ಲಾಭ ತಂದುಕೊಡುತ್ತೋ ಗೊತ್ತಿಲ್ಲ. ಆದರೂ ಅದು ಸದ್ಯದ ಮಟ್ಟಿಗೆ ಜಟಾಪಟಿಗೆ ದಾರಿಯನ್ನಂತು ಮಾಡಿಕೊಟ್ಟಿದೆ.
ಮೈಸೂರು ಅಖಾಡದಲ್ಲಿ ಒಕ್ಕಲಿಗ ಮತ ನಿರ್ಣಾಯಕ
ಲೋಕಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿವೆ. ಈಗಾಗಲೇ ಮುಸ್ಲಿಂ, ದಲಿತ ಮತ್ತು ಮಹಿಳೆಯರ ಮತಗಳು ಕಾಂಗ್ರೆಸ್ ನ ಪರವಾಗಿವೆ. ಇದರ ಜತೆಗೆ ಒಕ್ಕಲಿಗ ಮತಗಳನ್ನು ಸೆಳೆದುಕೊಂಡರೆ ಸುಲಭವಾಗಿ ಗೆಲ್ಲಬಹುದು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಲೋಚನೆಯಾಗಿದೆ. ಆದರೆ ಒಕ್ಕಲಿಗರನ್ನು ಸೆಳೆಯುವುದು ಅಷ್ಟು ಸುಲಭವಲ್ಲ. ಕಾರಣ ಜೆಡಿಎಸ್ ಈಗ ಬಿಜೆಪಿಯೊಂದಿಗೆ ಮೈತ್ರಿಯಾಗಿದ್ದಾರೆ.

ಮೊದಲಿನಿಂದಲೂ ಒಕ್ಕಲಿಗ ಸಮಾಜದ ಬಹುತೇಕರು ಜೆಡಿಎಸ್ ನೊಂದಿಗೆ ಗುರುತಿಸಿಕೊಂಡು ಬಂದಿದ್ದಾರೆ. ಜತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ನಮ್ಮ ನಾಯಕರೆಂದು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಬಿಜೆಪಿಗೆ ಅನುಕೂಲವಾಗಲಿದ್ದು, ಅದನ್ನು ತಡೆದು ಒಕ್ಕಲಿಗರು ಬಿಜೆಪಿಯತ್ತ ಮುನಿಸು ತೋರುವಂತೆ ಮಾಡುವುದೇ ಕಾಂಗ್ರೆಸ್ ನ ರಣತಂತ್ರವಾಗಿದೆ.
ಯದುವೀರ್ ವಿರುದ್ಧ ಮಾತಾಡುತ್ತಿಲ್ಲ ಏಕೆ?
ಇದುವರೆಗೆ ಜಾತ್ಯಾತೀತ ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಬಹಿರಂಗವಾಗಿ ಜಾತಿಯ ವಿಚಾರದ ಬಗ್ಗೆ ಮಾತನಾಡುತ್ತಾ ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಮಾತುಗಳನ್ನು ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಕಾರಣ ಅವರು ಒಕ್ಕಲಿಗರು ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗ ನಾಯಕನಾಗಿ ಬೆಳೆಯುತ್ತಿದ್ದಾರೆ. ಆದರೆ ಸಮಾಜವಾದಿ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗಿದೆ ಎಂದು ಕಣ್ಣೀರು ಸುರಿಸುವುದೆಷ್ಟು ಸರಿ? ಇದೆಲ್ಲವೂ ರಾಜಕೀಯ ಗಿಮಿಕ್ ಅಲ್ಲದೆ ಮತ್ತೇನು?
ಮೈಸೂರು ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಿಗೆ ಸಂದಿಗ್ಧ ಪರಿಸ್ಥಿತಿ ಎದುರಾಗಿರುವುದು ಮೈಸೂರು ಮಹಾರಾಜನರ ಮನೆತನದ ಯದುವೀರ್ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ. ಒಂದು ವೇಳೆ ಯದುವೀರ್ ಅವರ ಬದಲಿಗೆ ಬೇರೆ ಯಾರೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಮನಬಂದಂತೆ ಆರೋಪಗಳನ್ನು ಮಾಡಬಹುದಿತ್ತು. ಆದರೆ ಅರಸುಮನೆತನದ ಬಗ್ಗೆ ಮಾತನಾಡುವುದು ಸಮಾಜಕ್ಕೆ ಬೇರೆಯದ್ದೇ ಆದ ಸಂದೇಶ ರವಾನೆಯಾಗಿ ಇನ್ನಷ್ಟು ಇಕ್ಕಟ್ಟಿಗೆ ಸಿಲುಕುವ ಸ್ಥಿತಿಗೆ ಹೋಗಬಹುದು.

ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ
ಇದನ್ನು ಅರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿ ಯದುವೀರ್ ವಿರುದ್ಧ ಯಾವುದೇ ರೀತಿಯ ಮಾತುಗಳನ್ನಾಡಬೇಡಿ ಎಂಬ ಸೂಚನೆಯನ್ನು ಕೈ ನಾಯಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕರು ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ನಾವು ಒಕ್ಕಲಿಗೆ ಅಭ್ಯರ್ಥಿಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದ್ದೇವೆ ಎಂದು ಒಕ್ಕಲಿಗರ ಸಿಂಪಥಿ ಪಡೆಯುವುದು, ಬಿಜೆಪಿ ಪಕ್ಷ ಒಕ್ಕಲಿಗರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ ಎಂಬುದನ್ನು ಬಿಂಬಿಸುವುದು. ಜತೆಗೆ ಸಂಸದ, ಹಿಂದೂ ಫೈರ್ ಬ್ರಾಂಡ್ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಲು ಮಾಜಿ ಪ್ರಧಾನಿ ದೇವೇಗೌಡರೇ ಕಾರಣ ಎಂದು ಪ್ರಚಾರ ಮಾಡುವುದು. ಕಾಂಗ್ರೆಸ್ ನ ತಂತ್ರವಾಗಿದ್ದು, ಆ ಮೂಲಕ ಒಕ್ಕಲಿಗರ ನಡುವೆ ಅಸಮಾಧಾನಗಳನ್ನು ಸೃಷ್ಟಿಸಿದರೆ ಅಸಮಾಧಾನಿತ ಒಕ್ಕಲಿಗರು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ತಿರುಗಿ ಬೀಳುವುದಲ್ಲದೆ, ಕಾಂಗ್ರೆಸ್ ನತ್ತ ಒಲವು ತೋರಬಹುದು ಎಂಬುದು ಕಾಂಗ್ರೆಸ್ ನ ಲೆಕ್ಕಾಚಾರವಾಗಿದೆ.
ಒಕ್ಕಲಿಗ ಅಸ್ತ್ರ ಮತ ತಂದು ಕೊಡುತ್ತಾ?
ಇನ್ನು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ನಾನು ಒಕ್ಕಲಿಗ ಎಂಬುದನ್ನು ಜನರಿಗೆ ಮನದಟ್ಟು ಮಾಡಲು ಜಾತ್ರಿ ಪ್ರಮಾಣ ಪತ್ರವನ್ನೇ ಪ್ರದರ್ಶಿಸಿರುವುದನ್ನು ನೋಡಿದರೆ ಅಚ್ಚರಿ ಮತ್ತು ಬೇಸರ ಆಗುತ್ತದೆ. ಯಾವುದೇ ಅಭ್ಯರ್ಥಿ ಗೆಲ್ಲಬೇಕಾದರೆ ಒಂದು ಜಾತಿ ಅಥವಾ ಸಮುದಾಯದ ಮತವಷ್ಟೇ ಸಾಲುವುದಿಲ್ಲ. ಎಲ್ಲ ಸಮುದಾಯದವರು ಮತನೀಡಿದರೆ ಮಾತ್ರ ಗೆಲುವು ಸಾಧ್ಯ ಎಂಬುದು ಗೊತ್ತಿದೆ. ಅದು ಏನೇ ಇರಲಿ ರಾಜಕೀಯದಲ್ಲಿ ಗೆಲುವಿಗೆ ಎಲ್ಲ ತರಹದ ತಂತ್ರಗಳನ್ನು ಮಾಡಬೇಕಾಗುತ್ತದೆ. ಆದರೆ ಕಾಂಗ್ರೆಸ್ ಒಕ್ಕಲಿಗ ತಂತ್ರ ಕ್ಷೇತ್ರದಲ್ಲಿ ಮತ ತಂದುಕೊಡುತ್ತಾ? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications