Get Updates
Get notified of breaking news, exclusive insights, and must-see stories!

ರಾಜಕೀಯ ತಿರುವು ಪಡೆದ ಮೈಸೂರಿನ ಭೂ ಒತ್ತುವರಿ ವಿವಾದ

ಮೈಸೂರು, ಜೂನ್ 12: ಮೈಸೂರಿನಲ್ಲಿ ನಡೆದಿರುವ ಭೂ ಒತ್ತುವರಿ ವಿವಾದ ಇದೀಗ ರಾಜಕೀಯ ತಿರುವು ಪಡೆಯುತ್ತಿದೆ. ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಬೆನ್ನಿಗಂಟಿರುವ ಭೂ ಒತ್ತುವರಿ ವಿವಾದದ ಕುರಿತು ದನಿ ಎತ್ತಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಆ ಮೂಲಕ ಉಭಯ ನಾಯಕರ ನಡುವಿನ ರಾಜಕೀಯ ದ್ವೇಷ ಹೊಸ ಸ್ವರೂಪ ಪಡೆದುಕೊಂಡಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ ಮಹೇಶ್ ನಡುವೆ ಉಂಟಾಗಿರುವ ಭೂ ವಿವಾದ ಆರೋಪ- ಪ್ರತ್ಯಾರೋಪ ಈಗಾಗಲೇ ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ವಿರುದ್ಧ ರೋಹಿಣಿ ಸಿಂಧೂರಿ ಮಾಡಿರುವ ಭೂ ಒತ್ತುವರಿ ಆರೋಪವನ್ನು ತಳ್ಳಿಹಾಕಿದ ಶಾಸಕ ಸಾ.ರಾ ಮಹೇಶ್, ನಿರ್ಗಮಿತ ಮೈಸೂರಿನ ಜಿಲ್ಲಾಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ತಮ್ಮ ಮೇಲಿನ ಆರೋಪ ಸಾಬೀತಾದಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆಯುವ ಸವಾಲು ಹಾಕಿ ಪ್ರತಿಭಟನೆ ಸಹ ನಡೆಸಿದ್ದರು.

ತನಿಖೆಗೆ ಎಚ್.ವಿಶ್ವನಾಥ್ ಆಗ್ರಹ

ತನಿಖೆಗೆ ಎಚ್.ವಿಶ್ವನಾಥ್ ಆಗ್ರಹ

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಚಕಾರವೆತ್ತಿದ ಎಂಎಲ್‌ಸಿ ಎಚ್.ವಿಶ್ವನಾಥ್, ಶಾಸಕ ಸಾ.ರಾ ಮಹೇಶ್ ವಿರುದ್ಧ ರೋಹಿಣಿ ಸಿಂಧೂರಿ ಮಾಡಿರುವ ಭೂ ಒತ್ತುವರಿ ಆರೋಪದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಅಲ್ಲದೇ ಈ ಪ್ರಕರಣದ ತನಿಖೆಗೆ ರೋಹಿಣಿ ಸಿಂಧೂರಿ ಅವರನ್ನೇ ವಿಶೇಷ ತನಿಖಾಧಿಕಾರಿಯನ್ನಾಗಿ ನೇಮಿಸುವಂತೆ ಆಗ್ರಹಿಸಿದ್ದ ಅವರು, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ನೀಡುವುದಾಗಿ ತಿಳಿಸಿದ ವಿಶ್ವನಾಥ್, ನೇರವಾಗಿ ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿದ್ದರು. ಅಲ್ಲದೇ ತಮ್ಮ ಮೇಲಿನ ಆರೋಪ ಸಾಬೀತಾದಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯುವ ಸಾ.ರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ್ದ ವಿಶ್ವನಾಥ್, ಶಾಸಕರ ಈ ಹೇಳಿಕೆ ಜನರ ದಿಕ್ಕುತಪ್ಪಿಸುವ ಪ್ರಯತ್ನ ಎಂದು ಟೀಕಿಸಿದ್ದರು.

ಹಳ್ಳಿಹಕ್ಕಿಗೆ ಸಾರಾ ತಿರುಗೇಟು

ಹಳ್ಳಿಹಕ್ಕಿಗೆ ಸಾರಾ ತಿರುಗೇಟು

ಎಂಎಲ್‌ಸಿ ಎಚ್.ವಿಶ್ವನಾಥ್ ಅವರ ಈ ಹೇಳಿಕೆ ಸಾ.ರಾ ಮಹೇಶ್ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಬಿಜೆಪಿ ಎಂಎಲ್‌ಸಿ ಹಾಕಿದ ಸವಾಲು ಸ್ವೀಕರಿಸಿದ ಸಾ.ರಾ ಮಹೇಶ್, ತಮ್ಮ ಮೇಲಿನ ಭೂ ಒತ್ತುವರಿ ತನಿಖೆಯನ್ನು ರೋಹಿಣಿ ಸಿಂಧೂರಿ ಅವರಿಂದಲೇ ಮಾಡಿಸಿ ಎನ್ನುವ ಮೂಲಕ ಹಳ್ಳಿಹಕ್ಕಿ ಒತ್ತಾಯಕ್ಕೆ ತಿರುಗೇಟು ನೀಡಿದ್ದಾರೆ.

ಎಚ್‌.ವಿ ಪುತ್ರನಿಂದ ಭೂ ಒತ್ತುವರಿ

ಎಚ್‌.ವಿ ಪುತ್ರನಿಂದ ಭೂ ಒತ್ತುವರಿ

ಒಂದೆಡೆ ಸಾ.ರಾ ಮಹೇಶ್ ವಿರುದ್ಧ ಕೇಳಿಬಂದಿರುವ ಭೂ ಒತ್ತುವರಿ ವಿವಾದದ ಕುರಿತು ತನಿಖೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಎಂಎಲ್ಸಿ ವಿಶ್ವನಾಥ್ ಪುತ್ರನ ವಿರುದ್ಧವೂ ಭೂ ಒತ್ತುವರಿ ಆರೋಪ ಕೇಳಿಬಂದಿದೆ. ಮೈಸೂರಿನ ದೀಪ ಗೃಹ ನಿರ್ಮಾಣ ಸಹಕಾರ ಸಂಘದಿಂದ ರಾಜಕಾಲುವೆ ಒತ್ತುವರಿ ಮಾಡಿರುವ ಕುರಿತು ವಿಶ್ವನಾಥ್ ಪುತ್ರನ ವಿರುದ್ಧ ಆರೋಪ ಕೇಳಿಬಂದಿದ್ದು, ಆ ಮೂಲಕ ಮೈಸೂರಿನ ಭೂ ಒತ್ತುವರಿ ವಿವಾದ ಇನ್ನಷ್ಟು ಗಂಭೀರ ಸ್ವರೂಪ ಪಡೆಯುತ್ತಿದೆ.

ಇಂದು ದಾಖಲೆಗಳ ಬಿಡುಗಡೆ

ಇಂದು ದಾಖಲೆಗಳ ಬಿಡುಗಡೆ

ಎಂಎಲ್ಸಿ ವಿಶ್ವನಾಥ್ ಪುತ್ರನ ವಿರುದ್ಧ ಕೇಳಿಬಂದಿರುವ ಭೂ ಅಕ್ರಮದ ಕುರಿತು ಇಂದು ದಾಖಲೆ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಗಂಭೀರ ಆರೋಪ ಮಾಡಿರುವ ನ್ಯಾಯವಾದಿ, ಕರ್ನಾಟಕ ಪ್ರಜಾಪಾರ್ಟಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ, ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ, ವಿಶ್ವನಾಥ್ ಪುತ್ರ ದೀಪ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಲಿದ್ದಾರೆ.

ರಣತಂತ್ರ ರೂಪಿಸಿದ್ರಾ ಸಾರಾ?

ರಣತಂತ್ರ ರೂಪಿಸಿದ್ರಾ ಸಾರಾ?

ಭೂ ಒತ್ತುವರಿ ವಿವಾದಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ವಿಶ್ವನಾಥ್ ನೀಡುತ್ತಿರುವ ಹೇಳಿಕೆಗಳು ಸಾ.ರಾ ಮಹೇಶ್ ಕಣ್ಣು ಕೆಂಪಾಗಿಸಿದೆ. ಹೀಗಾಗಿ ವಿಶ್ವನಾಥ್ ವಿರುದ್ಧ ರಣತಂತ್ರ ರೂಪಿಸಿದ ಸಾ.ರಾ ಮಹೇಶ್, ತಮ್ಮ ವಿರುದ್ಧ ದನಿ ಎತ್ತಿರುವ ವಿಶ್ವನಾಥ್ ಪುತ್ರನ ಭೂ ಅಕ್ರಮದ ದಾಖಲೆ ಬಿಡುಗಡೆ ಮಾಡಿಸುವ ಮೂಲಕ, ಹಳ್ಳಿಹಕ್ಕಿಯ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಕೈಹಾಕಿದ್ರಾ? ಎಂಬ ಅನುಮಾನ ಮೂಡಿದೆ.

Recommended Video

    Rohini Sindhuri ಪರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕೂಗು | Oneindia Kannada
    ಇತರೆ ನಾಯಕರು ಸೈಲೆಂಟ್

    ಇತರೆ ನಾಯಕರು ಸೈಲೆಂಟ್

    ಸಾ.ರಾ ಮಹೇಶ್ ವಿರುದ್ಧ ಕೇಳಿ ಬಂದಿರುವ ಭೂ ಒತ್ತುವರಿ ವಿವಾದದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದರು, ಎಚ್.ವಿಶ್ವನಾಥ್ ಅವರನ್ನು ಹೊರತುಪಡಿಸಿ ಮೈಸೂರಿನ ಯಾವುದೇ ಜನಪ್ರತಿನಿಧಿಗಳು ಸಹ ಈ ಬಗ್ಗೆ ಚಕಾರವೆತ್ತಿಲ್ಲ. ಜನಪ್ರತಿನಿಧಿಗಳ ಈ ಮೌನ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಈಗಾಗಲೇ ಕೇಳಿಬಂದಿರುವಂತೆ ಬಿಜೆಪಿ ಶಾಸಕ ಎಸ್.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ ರಾಜೀವ್ ಸಹ ಭೂ ಒತ್ತುವರಿಯಲ್ಲಿ ಶಾಮೀಲಾಗಿರುವ ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಾಗುತ್ತಿದೆ.

    ಒಟ್ಟಾರೆ ಮೈಸೂರಿನಲ್ಲಿ ನಡೆದಿರುವ ಭೂ ಒತ್ತುವರಿ ವಿವಾದ ದಿನಕ್ಕೊಂದು ದಿಕ್ಕು ಪಡೆಯುತ್ತಿದ್ದು, ಅಂತಿಮವಾಗಿ ಯಾರ ಆರೋಪ ನಿಜವಾಗುತ್ತದೆ? ಯಾರ ತಲೆದಂಡವಾಗುತ್ತದೆ? ಅನ್ನುವ ಅನುಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+