ಅಮ್ಮನ ಅಸ್ಥಿ ವಿಸರ್ಜಿಸಲು ಮೈಸೂರಿಗೆ ಬಂದ ಕ್ರುಂಬಿಗಲ್ ಮರಿಮಗಳು
ಮೈಸೂರು, ಜುಲೈ 31 : ಕಾವೇರಿ ನದಿ ಕನ್ನಡಿಗರ ಜೀವನಾಡಿ. ವಿದೇಶಿಗರು ಕೂಡ ಈ ಕಾವೇರಿ ನದಿ ಸೊಬಗಿಗೆ, ಪಾವಿತ್ರ್ಯಕ್ಕೆ ಮನಸೋತಿದ್ದಾರೆ. ಅದಕ್ಕಾಗೇ ಕಾವೇರಿ ನದಿ ಅರಸಿಕೊಂಡು ಜರ್ಮನಿಯಿಂದ ಇಲ್ಲಿಯವರೆಗೂ ಬಂದಿದ್ದಾರೆ ಅಲಿಯಾ ಫೆಲ್ಪ್ಸ್ ಗಾರ್ಡಿನರ್ ಕ್ರುಂಬಿಗಲ್.
ಕಾವೇರಿ ನದಿಯಲ್ಲೇ ತನ್ನ ಅಸ್ಥಿ ವಿಸರ್ಜನೆ ಮಾಡಬೇಕೆಂದು ಬ್ರಿಟಿಷ್ ಪ್ರಜೆ ಜೀನ್ ಮೌರಿನ್ ತಾವು ಸಾಯುವ ಕೊನೆಯ ವೇಳೆ ಮಗಳಿಂದ ಭಾಷೆ ತೆಗೆದುಕೊಂಡಿದ್ದು, ಆ ಕೊನೆ ಆಸೆ ತೀರಿಸಲೆಂದೇ ಅವರ ಮಗಳು ಅಲಿಯಾ ಇಲ್ಲಿಗೆ ಬಂದಿದ್ದಾರೆ.
ಜೀನ್ ಮೌರೀನ್ ಬೇರಾರೂ ಅಲ್ಲ, ಕೆಆರ್ ಎಸ್ ವಿನ್ಯಾಸಗೊಳಿಸಿದ ಗುಸ್ತವ್ ಹರ್ಮನ್ ಅವರ ಮೊಮ್ಮಗಳು. ಸದ್ಯ ಗುಸ್ತವ್ ಹರ್ಮನ್ ಅವರ ಮರಿಮಗಳು ಅಲಿಯಾ ಮೈಸೂರಿಗೆ ಆಗಮಿಸಿದ್ದಾರೆ. ಮೌರೀನ್ ಸಾಯುವ ವೇಳೆ "ನನ್ನ ಹೃದಯದ ತುಂಬಾ ಭಾರತವಿದೆ. ನಾನು ಸತ್ತ ನಂತರ ಚಿತಾ ಭಸ್ಮವನ್ನು ನೀನು ಕಾವೇರಿ ನದಿಯಲ್ಲಿ ವಿಸರ್ಜಿಸಬೇಕು. ನಾನು ಅಲ್ಲಿಯೇ ಲೀನವಾಗಬೇಕು" ಎಂದು ತಿಳಿಸಿದ್ದಾರೆ. ಆದ್ದರಿಂದ ಅಲಿಯಾ ಮೈಸೂರು ಹಾದಿ ತುಳಿದಿದ್ದಾರೆ. ಮೌರೀನ್ ಅವರ ಭಾರತದೆಡೆಗಿನ ಈ ಅತೀವ ಪ್ರೀತಿಗೆ ಕಾರಣವಾಗಿದ್ದು ಅವರ ತಾತ ಗುಸ್ತವ್ ಹರ್ಮನ್ ಅವರೊಡನೆ ಭಾರತದಲ್ಲಿ ಕಳೆದ ದಿನಗಳು.

"ಅಮ್ಮ 2018ರಲ್ಲಿ ಲಂಡನ್ ನಲ್ಲಿ ನಿಧನರಾದರು. ಅಮ್ಮನನ್ನು ಭೂಮಿಯಲ್ಲಿ ಹೂಳಲಿಲ್ಲ. ಆದರೆ ದಹಿಸಲು 3 ವಾರ ಕಾಯಬೇಕಾಯಿತು. ಕಡೆಗೆ ಫೆಬ್ರವರಿ 2018ರಂದು ಅಂತ್ಯಕ್ರಿಯೆ ನಡೆದಿತ್ತು. ಹಾಗಾಗಿ ಅವರ ಕೊನೆಯ ಆಸೆಯಂತೆ ಅವರ ಚಿತಾಭಸ್ಮವನ್ನು ಭಾರತದ ನದಿಯಲ್ಲಿ ವಿಸರ್ಜಿಸಲು ಬಂದಿದ್ದೇನೆ. ಅಮ್ಮ ಎಂದಿಗೂ ತಮ್ಮ ಆತ್ಮ ಭಾರತದಲ್ಲಿದೆ ಎನ್ನುತ್ತಿದ್ದರು. ಚಿತಾಭಸ್ಮ ವಿಸರ್ಜಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ. ಮೊದಲಿಗೆ ಕೇರಳದ ವೈನಾಡಿನಲ್ಲಿ ಚಿತಾ ಭಸ್ಮ ವಿಸರ್ಜನೆ ಮಾಡಿದೆ. ನಂತರ ಉಳಿದುದ್ದನ್ನು ಶ್ರೀರಂಗಪಟ್ಟಣ ಬಳಿಯ ಕಾವೇರಿ ನದಿಯಲ್ಲಿ ವಿಸರ್ಜಿಸುತ್ತೇನೆ" ಎಂದರು ಅಲಿಯಾ ಫೆಲ್ಪ್ಸ್ ಗಾರ್ಡಿನರ್ ಕ್ರುಂಬಿಗಲ್.
ಎರಡು ವರ್ಷಗಳ ಹಿಂದೆ ಬೆಂಗಳೂರಿನಿಂದ ಸೈಕಲ್ ನಲ್ಲಿ ಮೈಸೂರಿಗೆ ಬಂದಿದ್ದ ಇವರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಸಂಪರ್ಕಿಸಿದ್ದನ್ನು ನೆನಪಿಸಿಕೊಂಡರು. ಅಲ್ಲದೆ ತಮ್ಮ ಮುತ್ತಾತ ವಿನ್ಯಾಸಗೊಳಿಸಿದ್ದ ಬೃಂದಾವನ್ ಗಾರ್ಡನ್ ಬಗ್ಗೆ ತಿಳಿದು ಅಲ್ಲಿಗೂ ಹೋಗಿ ಗಾರ್ಡನ್ ವೀಕ್ಷಿಸುತ್ತೇನೆ ಎಂದರು.












Click it and Unblock the Notifications