ತಪ್ಪದೇ ಮತಚಲಾಯಿಸಿ: ಮೈಸೂರು ಮಹಾರಾಜ ಯದುವೀರ ಮನವಿ
ಮೈಸೂರು, ಮೇ 10 : ವಿಧಾನಸಭಾ ಚುನವಾಣೆಗೆ ಇನ್ನೇನು 2 ದಿನ ಬಾಕಿ ಇರುವಂತೆ ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಭಿವೃದ್ಧಿಗೆ ಪ್ರಜಾಪ್ರಭುತ್ವದ ಮತದಾನವೇ ಮಾರ್ಗವಾಗಿದ್ದು ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಸಾಮಾಜಿಕ ಜಾಲತಾಣ ಫೇಸ್ಬುಕ್, ಇನ್ಸ್ಟಾಗ್ರಾಂ ಮೂಲಕ ಮನವಿ ಮಾಡಿದ್ದಾರೆ.
ಯದುವೀರ್ ಬಿಜೆಪಿಗೆ ಸೇರುತ್ತಾರಾ? ಇಲ್ಲಿದೆ ಅವರ ಉತ್ತರ
'ನಮ್ಮ ಪೂರ್ವಜರ ಮಹೋನ್ನತ ಆದರ್ಶಗಳನ್ನು ಒಳಗೂಡಿಸಿಕೊಂಡು ನಮ್ಮ ನಾಡನ್ನು ಸ್ಥಾಪಿಸಿದ್ದಾರೆ. ಅವರ ಆಕಾಂಕ್ಷೆಗಳಂತೆ ನಮ್ಮ ರಾಜ್ಯ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ವಿಜ್ಞಾನ, ಪ್ರಕೃತಿಯ ಸಂರಕ್ಷಣೆ ಹಾಗು ಸ್ವಚ್ಛತೆಯ ಯೋಜನೆಗಳು ಇವುಗಳೆಲ್ಲ ನಮ್ಮ ಅಭಿವೃದ್ಧಿ ಬಿಂದು. ಸಂಸ್ಕೃತಿ ರಾಜ್ಯದ ರಾಯಭಾರಿಗಳಾಗಿ ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಅವುಗಳನ್ನು ರಕ್ಷಿಸಬೇಕು. ನಮ್ಮ ಹಿರಿಯರ ಆಕಾಂಕ್ಷೆಗಳನ್ನು ಎತ್ತಿ ಹಿಡಿಯಬೇಕು. ನಮ್ಮ ಊರಿನ ಅನನ್ಯತೆ ಹಾಗೂ ಅಭಿವೃದ್ಧಿಗೆ ಪ್ರಜಾಪ್ರಭುತ್ವ ನೀಡಿರುವ ಮಾರ್ಗವೇ ಮತದಾನ.
ಹೀಗಾಗಿ ಇದೇ ಮೇ 12ರಂದು ತಪ್ಪದೇ ಮತ ಚಲಾಯಿಸಿ ನಮ್ಮ ಪೂರ್ವಜರ ಆಕಾಂಕ್ಷೆಗಳನ್ನು ಎತ್ತಿಹಿಡಿಯಬೇಕೆಂದು ಹಾರೈಸುತ್ತೇನೆ' ಎಂದು ಯದುವೀರ್ ಒಡೆಯರ್ ಮನವಿ ಮಾಡಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದ ಯದುವೀರ್, ತ್ರಿಷಿಕಾ ಈ ಬಾರಿ ಮೈಸೂರಿನಲ್ಲಿ ಮತದಾನ ಮಾಡಲಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಮತದಾನ ಮಾಡಲಿದ್ದಾರೆ.