ಎಲೆಕ್ಷನ್ ಎಫೆಕ್ಟ್ : ಸರಕಾರಿ ಕಚೇರಿ ಖಾಲಿ, ಜುಟ್ಟಿಗೂ ಸಿಗುತ್ತಿಲ್ಲ ಹೂವಿನ ಮಾಲಿ
ಮೈಸೂರು, ಮೇ 2 : ಚುನಾವಣೆ ದಿನಾಂಕ ಘೋಷಣೆ ಆದ ದಿನದಿಂದ ಸರಕಾರಿ ಕಚೇರಿ, ಜನಪ್ರತಿನಿಧಿಗಳ ಕಚೇರಿಗಳು ಖಾಲಿ ಖಾಲಿ. ಇನ್ನು ಪಾಲಿಕೆ ಸದಸ್ಯರು ಚುನಾವಣೆ ಪ್ರಚಾರದಲ್ಲಿ ಬಿಜಿ. ಹೀಗಾಗಿ ಸಾರ್ವಜನಿಕರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಆಗದೆ ಹೈರಾಣಾಗಿದ್ದಾರೆ.
ಜಿಲ್ಲಾಡಳಿತ ಸೇರಿದಂತೆ ಬಹುತೇಕ ಸಾರ್ವಜನಿಕ ಕಚೇರಿಗಳು ಬಿಕೋ ಎನ್ನುತ್ತಿವೆ. ಎಲ್ಲ ಹಿರಿಯ- ಕಿರಿಯ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿರುವ ಜತೆಗೆ ಬಹುತೇಕ ಸಿಬ್ಬಂದಿಯನ್ನು ಚುನಾವಣೆ ಕೆಲಸಗಳಿಗೆ ನಿಯೋಜನೆ ಮಾಡಿರುವುದರಿಂದ ಸಾರ್ವಜನಿಕರ ಬಹುತೇಕ ಕೆಲಸಗಳು ನನೆಗುದಿಗೆ ಬಿದ್ದಿವೆ.
2018 ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಪಟ್ಟಿ
ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಮಹಾನಗರಪಾಲಿಕೆ, ಮುಡಾ ಸೇರಿದಂತೆ ನಾನಾ ಕಚೇರಿಗಳಲ್ಲಿ ಸಾರ್ವಜನಿಕರು ತಮ್ಮ ಕೆಲಸಗಳ ಅನುಮೋದನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವುಗಳ ವಿಲೇವಾರಿ, ಸಂಬಂಧಪಟ್ಟ ಅಧಿಕಾರಿಗಳ ಸಹಿ ವಿಳಂಬವಾಗುತ್ತಿದೆ. ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣೆ ಕೆಲಸಗಳಿಗೆ ನಿಯೋಜನೆ ಆಗಿರುವುದೇ ಇದಕ್ಕೆ ಕಾರಣ ಎಂಬುದು ರೆಡಿಮೇಡ್ ಉತ್ತರ.
ಪಾಲಿಕೆಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ, ಕಂದಾಯ ಪರಿಷ್ಕರಣೆ, ಮನೆಗಳ ನಿರ್ಮಾಣಕ್ಕೆ ನಕ್ಷೆಗಳ ಅನುಮೋದನೆ ಸೇರಿದಂತೆ ಬಹುತೇಕ ಕಡತಗಳು ಹದಿನೈದು ದಿನಗಳಿಂದ ವಿಳಂಬವಾಗುತ್ತಿವೆ. ಇಂತಹ ಕೆಲಸಗಳಿಗೆ ಇಂತಿಷ್ಟು ದಿನ ಎಂದು ನಿಗದಿಯಾಗಿದ್ದರೂ ಆ ಸಮಯದೊಳಗೆ ವಿಲೇವಾರಿಯಾಗುತ್ತಿಲ್ಲ.
ಪೊಲೀಸ್ ಠಾಣೆಗಳಲ್ಲೂ ಇದೇ ಕಥೆ
ಚುನಾವಣೆ ಸಿಬ್ಬಂದಿಯನ್ನು ಹೊರತು ಪಡಿಸಿ ಉಳಿದ ಸಿಬ್ಬಂದಿ ಈ ಎಲ್ಲ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಎಲ್ಲ ಕಡತಗಳ ಸಮರ್ಪಕ ವಿಲೇವಾರಿಗೆ ಚುನಾವಣೆ ಮುಗಿಯುವವರೆಗೂ ಕಾಯಲೇಬೇಕಾದ ಅನಿವಾರ್ಯ ಸಾರ್ವಜನಿಕರದ್ದಾಗಿದೆ. ಪೊಲೀಸ್ ಠಾಣೆಯೊಂದರಲ್ಲಿ ದೂರು ಸಲ್ಲಿಸಿ 7 ದಿನಗಳಾಗಿವೆ. ಅದಕ್ಕಿನ್ನೂ ಪರಿಹಾರ ಸಿಕ್ಕಿಲ್ಲ. ಠಾಣಾಧಿಕಾರಿಯನ್ನು ಕೇಳಿದರೆ, ಸರ್ ನಿಮಗೇ ಗೊತ್ತಲ್ಲ, ಎಲ್ಲರೂ ಚುನಾವಣಾ ಸಂಬಂಧ ನಡೆಯುವ ಮೆರವಣಿಗೆ, ಸಭೆಗಳಿಗೆ ತೆರಳಿದ್ದಾರೆ. ಅಲ್ಲದೇ ಪ್ರಚಾರಕ್ಕಾಗಿ ನಗರಕ್ಕೆ ಬರುವ ಗಣ್ಯರಿಗೆ ಭದ್ರತೆಯ ಜತೆಗೆ ಶಿಷ್ಟಾಚಾರಕ್ಕೂ ಸಿಬ್ಬಂದಿ ನೇಮಿಸಿರುವುದರಿಂದ ವಿಳಂಬವಾಗಿದೆ ಎಂಬ ಉತ್ತರ ಬರುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಕ್ಷವೊಂದರ ಪ್ರತಿನಿಧಿ.
ಹೂವು ಮಾರುಕಟ್ಟೆಗೆ ಬರ್ತಿಲ್ಲ, ಬೆಲೆ ಆಕಾಶಕ್ಕೆ
ಇನ್ನು ವಿಧಾನಸಭಾ ಚುನಾವಣೆ, ಮದುವೆ ಸೀಜನ್ ಹಾಗೂ ಬೇಸಿಗೆಯಲ್ಲಿ ಇಳುವರಿ ಕುಸಿತದ ಪರಿಣಾಮ ಈ ವಾರ ಹೂವುಗಳ ಧಾರಣೆ ಏರಿಕೆ ಕಂಡಿದೆ. ಕಳೆದ ವಾರ ಒಂದು ಕೆ.ಜಿ ಚೆಂಡುಹೂವಿನ ದರ ₹ 40 ಇತ್ತು. ಈ ವಾರ ₹ 100-130ಕ್ಕೆ ಏರಿದೆ. ಮಲ್ಲಿಗೆ, ಗುಲಾಬಿ ಹೂವಿನ ಧಾರಣೆಯಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ಹಾರಗಳ ದರವೂ ದುಪ್ಪಟ್ಟಾಗಿದೆ. 20 ಗುಲಾಬಿ ಇರುವ ಒಂದು ಬಂಚ್ ಗೆ ₹ 60-70 ಇತ್ತು. ಈ ವಾರ ₹ 120ರಿಂದ 140 ಆಗಿದೆ. ಮದುವೆಯಿಂದ ಹಿಡಿದು ಎಲ್ಲ ಶುಭ ಕಾರ್ಯಗಳಿಗೆ ಹೂವು ಬೇಕು. ಆದರೆ ಬೇಡಿಕೆ ತಕ್ಕಷ್ಟು ಹೂವು ಬರುತ್ತಿಲ್ಲ. ಮಾಲು ಕಡಿಮೆ, ದರ ಜಾಸ್ತಿ ಎನ್ನುತ್ತಾರೆ ದೇವರಾಜ ಮಾರುಕಟ್ಟೆಯಲ್ಲಿ ಸಗಟು ಹೂವು ವ್ಯಾಪಾರಿ ಇಕ್ಬಾಲ್ ಅಹಮ್ಮದ್.
ಸೇವಂತಿಗೆ ಹೂವಿನ ಬೆಲೆ 500 ರುಪಾಯಿ ಗಡಿ ದಾಟಿದೆ
ಮೈಸೂರು ಮಲ್ಲಿಗೆ ಹಾರ ₹ 60 ಇತ್ತು. ಈ ವಾರ ₹ 120 ಆಗಿದೆ. ಸುಗಂಧ ಹಾರ ₹ 80-100, ರೆಡ್ ಗುಲಾಬಿ ಹಾರ ₹ 300- 400, ರೂಬಿ ಗುಲಾಬಿ ಹಾರ ₹ 150-180ಕ್ಕೆ ಏರಿಕೆ ಕಂಡಿದೆ. ಚುನಾವಣೆಯ ಕಾವು ಹೆಚ್ಚಿದಂತೆ ಈ ವಾರ ಇನ್ನೂ ಜಾಸ್ತಿ ಆಗಬಹುದು' ಎನ್ನುತ್ತಾರೆ ಹೂವಿನ ವ್ಯಾಪಾರಿ. ಎಲೆಕ್ಷನ್ ಹೊಸ್ತಿಲಿನಲ್ಲಿ ಪ್ರಚಾರದ ಭರಾಟೆಯಲ್ಲಿರುವ ನಾಯಕರಿಗೆ ಹಾರ ಹಾಕಿ ಅಭಿಮಾನ ಮೆರೆಯಬೇಕೆಂಬ ಕಾರ್ಯಕರ್ತರ ಹಂಬಲದಿಂದಾಗಿ ಹೂವಿನ ಬೆಲೆ ಗಗನಕ್ಕೇರಿದೆ. 15 ದಿನದ ಹಿಂದೆ 150 ರುಪಾಯಿ ಇದ್ದ ಸೇವಂತಿಗೆ ಹೂವಿನ ಬೆಲೆ 500 ರುಪಾಯಿ ಗಡಿ ದಾಟಿದೆ.
ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ
ಚುನಾವಣೆ ಸಂದರ್ಭದಲ್ಲಿ ಪಕ್ಷ, ವ್ಯಕ್ತಿ ಮೇಲಿನ ಅಭಿಮಾನಕ್ಕೆ ಹಾರ ಹಾಕಿ ನಾಯಕರನ್ನು ಗೌರವಿಸುವುದು ಸಾಮಾನ್ಯ. ಇದನ್ನು ಅವರು ಸಾಲ ಮಾಡಿ, ಸ್ನೇಹಿತರೆಲ್ಲಾ ಸೇರಿ ಹಣ ಸಂಗ್ರಹಿಸಿ, ಇನ್ನಾವುದೋ ವಿಧದಲ್ಲಿ ಪ್ರಯತ್ನ ಮಾಡಿ ನಾಯಕರನ್ನು ಸತ್ಕರಿಸುವ ಕೆಲಸ ಮಾಡುತ್ತಾರೆ. ಹೂವಿನ ಬೆಲೆ ಎಷ್ಟೇ ಹೆಚ್ಚಾದರೂ ಇದಕ್ಕೆ ತಲೆ ಕೆಡಿಸಿಕೊಳ್ಳಲ್ಲ ಅನ್ನುತ್ತಾರೆ ಸ್ಥಳೀಯ ರಾಜಕಾರಣಿಗಳು.