ಕರ್ನಾಟಕ ವಿಧಾನಸಭಾ ಚುನಾವಣೆ: ಮೈಸೂರಿನ ಮೇಲೇ ಎಲ್ಲರ ಕಣ್ಣು!
ಮೈಸೂರು, ಅಕ್ಟೋಬರ್ 31: ಸಾಂಸ್ಕೃತಿಕ ನಗರಿ ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವೂ ಆಗಿರುವುದರಿಂದಾಗಿ ರಾಜಕೀಯ ವಿಚಾರ ಬಂದಾಗ ಒಂದಷ್ಟು ಕುತೂಹಲ ಕೆರಳುವುದು ಸಾಮಾನ್ಯ.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಆರು ತಿಂಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿನ ಚಟುವಟಿಕೆ ಗರಿಗೆದರತೊಡಗಿದೆ. ಒಂದೆಡೆ ಪಕ್ಷಕ್ಕಾಗಿ ದುಡಿದು ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಮುಖಂಡರು ತಾವೊಮ್ಮೆ ಶಾಸಕರಾಗ ಬೇಕೆಂಬ ಉತ್ಸಾಹದಲ್ಲಿದ್ದು ಟಿಕೆಟ್ ನೀಡುವಂತೆ ದುಂಬಾಲು ಬಿದ್ದರೆ, ಮತ್ತೊಂದೆಡೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಗೆಲುವು ಪಡೆಯಬಹುದೆಂಬ ಲೆಕ್ಕಾಚಾರವೂ ನಡೆಯುತ್ತಿದೆ. ಇದೆಲ್ಲದರ ನಡುವೆ ಬೇರೆ ಪಕ್ಷದಿಂದ ಬಂದವರಿಗೆ, ಜನನಾಯಕರೇ ಅಲ್ಲದವರಿಗೆ, ಮೇಲ್ಮಟ್ಟದ ಪ್ರಭಾವ ಪಡೆದು ಬಂದವರಿಗೆ ಟಿಕೇಟ್ ನೀಡುವುದು ಪಕ್ಷದ ನಿಷ್ಠಾವಂತ ನಾಯಕರಿಗೆ ನುಂಗಲಾರದ ತುತ್ತಾಗಿದೆ.
ಕೆಲವು ತಿಂಗಳ ಹಿಂದೆಯಷ್ಟೆ ನಡೆದ ನಂಜನಗೂಡು ಉಪಚುನಾವಣೆಯನ್ನು ಹತ್ತಿರದಿಂದ ನೋಡಿದ ಜನ ಅದರಂತೆ ಈ ಬಾರಿಯೂ ಹಣ, ಹೆಂಡದ ಹೊಳೆಯೇ ಹರಿಯಬಹುದೇನೋ ಎಂದು ಕಾದು ಕುಳಿತಿದ್ದಾರೆ.
ಹಾಗೆನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಮೈಸೂರು ಜಿಲ್ಲೆಯಲ್ಲಿರುವ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಈ ಬಾರಿಯ ಚುನಾವಣೆ ಅಷ್ಟು ಸುಲಭವಾಗಿಲ್ಲ. ಅದಕ್ಕೆ ಕಾರಣಗಳು ಅನೇಕ ಇವೆ. ಕಳೆದ ಬಾರಿ ಬಿಜೆಪಿ ಕೆಜೆಪಿಯಾಗಿ ಒಡೆದ ಪರಿಣಾಮ ಕಾಂಗ್ರೆಸ್ ಗೆ ಲಾಭವಾಗಿತ್ತು. ಅಷ್ಟೇ ಅಲ್ಲದೆ ಬಿಜೆಪಿಯ ಆಡಳಿತ, ನಾಯಕರ ಕಚ್ಚಾಟ, ಹಗರಣಗಳು ಎಲ್ಲವನ್ನೂ ಹತ್ತಿರದಿಂದ ನೋಡಿದವರಿಗೆ ಕಾಂಗ್ರೆಸ್ ಆಯ್ಕೆ ಜನರ ಮುಂದಿತ್ತು. ಆದರೆ ಈ ಸಲ ಜೆಡಿಎಸ್ ಕೂಡ ಪ್ರಬಲ ಪೈಪೋಟಿ ನಡೆಸಲು ಸಿದ್ಧತೆ ನಡೆಸಿದೆ. ಜತೆಗೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಯಾರ ಜತೆಗೂ ಕೈಜೋಡಿಸಲು ಹಿಂಜರಿಯದೇ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಜೆಡಿಎಸ್ ಬಗ್ಗೆ ಭಯ ಇದ್ದೇ ಇದೆ.
ಈ ಬಾರಿ ಜನರಿಗೆ ಗೊಂದಲವಾಗುವುದಂತು ಖಚಿತ. ಜತೆಗೆ ಜಿಲ್ಲಾ ಕಾಂಗ್ರೆಸ್ನಲ್ಲಿಯೇ ಎಲ್ಲವೂ ಸರಿಯಿಲ್ಲ ಎಂಬುದು ಇತ್ತೀಚೆಗಿನ ಕೆಲವೊಂದು ಘಟನೆಗಳಿಂದ ಗೊತ್ತಾಗಿದೆ. ಇದಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರುಗಳು ತಮ್ಮ ಪುತ್ರರನ್ನು ಕಣಕ್ಕಿಳಿಸುತ್ತಿರುವುದು ಒಂದಷ್ಟು ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ.
ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳಿರುವ ಕ್ಷೇತ್ರಗಳಿಗಿಂತ ಕಾಂಗ್ರೆಸ್ಸೇತರ ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದು ಮುಂದಿನ ಚುನಾವಣೆಯಲ್ಲಿ ಅದನ್ನು ಫ್ಲಸ್ ಫಾಯಿಂಟ್ ಆಗಿ ಬಳಸಿಕೊಳ್ಳಬಹುದು ಎಂಬ ಸಿಎಂನ ತಂತ್ರವಾಗಿದ್ದರೂ ಅದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದು ಚುನಾವಣೆ ಸಂದರ್ಭ ಗೊತ್ತಾಗಲಿದೆ.

ಪುತ್ರರು ಸ್ಪರ್ಧಿಸುವ ಕ್ಷೇತ್ರದಲ್ಲಿ ಸಾಕಷ್ಟು ಗುದ್ದಲಿ ಪೂಜೆ!
ಪುತ್ರರು ಸ್ಪರ್ಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ನಂಜನಗೂಡಿನ ವರುಣ ಕ್ಷೇತ್ರ ಮತ್ತು ತಿ.ನರಸೀಪುರದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳಿಗೆ ಭೂಮಿಪೂಜೆ ನಡೆಯುತ್ತಿದೆ. ಉಳಿದಂತೆ ಕಾಂಗ್ರೆಸ್ನವರೇ ಶಾಸಕರಾಗಿರುವ ಸ್ಥಳಗಳಲ್ಲಿ ಅಂತಹ ಯಾವುದೇ ಕಾರ್ಯಕ್ರಮಗಳು ಕಾಣುತ್ತಿಲ್ಲ. ಇದೆಲ್ಲದರ ನಡುವೆ ನಂಜನಗೂಡು ಉಪಚುನಾವಣೆ ಸಂದರ್ಭ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೆಯೇ ಕಡತದಲ್ಲಿ ಉಳಿದು ಹೋಗಿದೆ.

ವಿಶ್ವನಾಥ್ ತೊರೆದಿದ್ದು ಕಾಂಗ್ರೆಸ್ ಗೆ ಮುಳುವಾಯಿತೇ?
ಹೆಚ್.ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸದಾ ಸುದ್ದಿಯಲ್ಲಿರುತ್ತಿದ್ದರು. ಅವರ ಹಿಂದೆ ಮುಂದೆ ಒಂದಷ್ಟು ನಾಯಕರು ಕಾಣಿಸಿಕೊಳ್ಳುತ್ತಿದ್ದರು. ಅವರು ಪಕ್ಷ ಬಿಟ್ಟು ಹೋದ ಬಳಿಕ ಅವರು ಪಕ್ಷದಿಂದ ಹೊರ ಹೋಗಿದ್ದರಿಂದ ತಮಗೇನು ನಷ್ಟವಾಗಿಲ್ಲ ಎಂದು ಹೇಳಿದ ಕಾಂಗ್ರೆಸ್ ನಾಯಕರಿಗೆ ಈಗ ಬಿಸಿ ತಾಕತೊಡಗಿದೆ.

ಸಿಎಂ ರಾಜಕೀಯ ದಾಳವಾಗಿ ಸಿ.ಎಚ್.ವಿಜಯಶಂಕರ್!
ಇದೆಲ್ಲದರ ನಡುವೆ ಮೈಸೂರು ವ್ಯಾಪ್ತಿಯಲ್ಲಿ ಎಚ್.ವಿಶ್ವನಾಥ್ ಅವರಿಗೆ ಪರ್ಯಾಯವಾಗಿ ಕುರುಬ ಸಮುದಾಯದ ನಾಯಕನೊಬ್ಬನ ಅಗತ್ಯತೆಯನ್ನು ಮನಗಂಡ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯಲ್ಲಿದ್ದ ಸಿ.ಎಚ್.ವಿಜಯಶಂಕರ್ ಅವರನ್ನು ಪಕ್ಷಕ್ಕೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರಿಂದ ಕಾಂಗ್ರೆಸ್ ಗೆ ಆಗುವ ಲಾಭ ಅಷ್ಟರಲ್ಲೇ ಇದೆ. ಅವರ ಬೆಂಬಲಿಗರು ಅಂಥ ಹೇಳಿಕೊಳ್ಳುವ ಯಾವ ನಾಯಕರೂ ಕೂಡ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಹೋಗುತ್ತಿದ್ದೇವೆ ಎಂಬ ಹೇಳಿಕೆ ನೀಡುತ್ತಿಲ್ಲ. ಇಷ್ಟಕ್ಕೂ ವಿಜಯ್ಶಂಕರ್ಗೆ ಒಂದಷ್ಟು ಮುಖಂಡರನ್ನು ತನ್ನೊಂದಿಗೆ ಕರೆದೊಯ್ಯುವ ಛಾರ್ಮ್ ಕೂಡ ಇಲ್ಲದಾಗಿದೆ.

ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಯತ್ನ!
ಇದರಿಂದ ಮುಖ್ಯಮಂತ್ರಿಗಳ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ಅದ್ಯಾಕೋ ಹೆಚ್ಚು ಫಲಕೊಡುವಂತೆ ಕಂಡು ಬರುತ್ತಿಲ್ಲ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಮುಖ್ಯಮಂತ್ರಿಗಳು ಒಂದಲ್ಲ ಒಂದು ಕಾರಣವೊಡ್ಡಿ ತವರು ಜಿಲ್ಲೆಗೆ ಮೇಲಿಂದ ಭೇಟಿ ನೀಡುತ್ತಲೇ ಇದ್ದಾರೆ. ಆ ಮೂಲಕ ಒಳಗೊಳಗೆ ರಾಜಕೀಯ ಚಟುವಟಿಕೆಯನ್ನೂ ನಡೆಸುತ್ತಿದ್ದಾರೆ. ಏಕೆಂದರೆ ಅವರಿಗೆ ಗೆಲುವು ಅನಿವಾರ್ಯವಾಗಿದೆ.












Click it and Unblock the Notifications