ಹುಣಸೂರು ಚುನಾವಣೆ: ಬಿಜೆಪಿಯ ಈ 'ನಾಯಕ'ರಿಗೆ ಪ್ರತಿಷ್ಠೆಯ ಪ್ರಶ್ನೆ
ಮಂಡ್ಯ, ನವೆಂಬರ್ 28: ಈ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದ ಅಭ್ಯರ್ಥಿ ಹೆಚ್.ವಿಶ್ವನಾಥ್ ಅವರ ಮುಂದಿನ ರಾಜಕೀಯ ಭವಿಷ್ಯ ಅಡಗಿದೆ, ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಅವರಿಗೆ ರಾಜಕೀಯ ಮರುಜನ್ಮದ ಪ್ರಶ್ನೆಯಾಗಿದೆ.
ಆದರೆ ನಿಜವಾದ ರಾಜಕೀಯ ಪ್ರತಿಷ್ಠೆ ಅಡಗಿರುವುದು ಇನ್ನಿಬ್ಬರು ಬಿಜೆಪಿ ನಾಯಕರಿಗೆ. ಅವರ ರಾಜಕೀಯ ಭವಿಷ್ಯವೂ ಈ ಕ್ಷೇತ್ರದ ಫಲಿತಾಂಶದಲ್ಲಿದೆ. ಹುಣಸೂರು ವಿಧಾನಸಭೆ ಉಪ ಚುನಾವಣಾ ಕಣ ಭಾರೀ ಕುತೂಹಲ ಪಡೆದಿದೆ. ಹಲವು ರಾಜಕೀಯ ಮುಖಂಡರ ವರ್ಚಸ್ಸು ಈ ಕ್ಷೇತ್ರ ಅಳೆಯಲಿದೆ.
ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಅವರನ್ನು ಗೆಲ್ಲಿಸಲು ಈ ಇಬ್ಬರು ನಾಯಕರು ಪಣತೊಟ್ಟಿದ್ದಾರೆ. ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದಾರೆ. ಅವರೇ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್. ಈ ಇಬ್ಬರು ನಾಯಕರು ಹುಣಸೂರು ಕ್ಷೇತ್ರವನ್ನು ಬಹಳ ಪ್ರತಿಷ್ಠೆಯ ಕಣವನ್ನಾಗಿ ತೆಗೆದುಕೊಂಡಿದ್ದಾರೆ.

ಸಚಿವ ಶ್ರೀರಾಮುಲು ಅವರು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಸೊಕ್ಕನ್ನು ಮುರಿಯಬೇಕು ಎಂದು ಹಠ ತೊಟ್ಟಿದ್ದಾರಂತೆ. ಅದೇ ರೀತಿ ಸಿ.ಪಿ,ಯೋಗೇಶ್ವರ್ ಗೆ ತನ್ನ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲು ಮತ್ತು ಈ ಕ್ಷೇತ್ರವನ್ನು ಬಿಜೆಪಿ ವಶ ಮಾಡಿಕೊಡಿಸಲು ಯತ್ನಿಸುತ್ತಿದ್ದಾರೆ.
ಸಚಿವ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯುತ್ತದೆ ಎಂದು ಭಾವಿಸಿದ್ದರು, ಆದರೆ ಹೈಕಮಾಂಡ್ ನ ಆದೇಶವೇ ಬೇರೆಯಾಗಿತ್ತು. ಹೀಗಾಗಿ ಮತ್ತೆ ಪಕ್ಷದಲ್ಲಿ ತಮ್ಮ ಹಿಡಿತ ಮತ್ತು ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯನವರನ್ನು ಸ್ವಂತ ಜಿಲ್ಲೆಯಲ್ಲಿಯೇ ಕುಗ್ಗಿಸಿ, ಬಾದಾಮಿಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಹುಣಸೂರಿನ ಫಲಿತಾಂಶ ತುಂಬಾ ಮುಖ್ಯ.
ಹುಣಸೂರು ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಹೆಚ್ಚಾಗಿವೆ, ಫಲಿತಾಂಶವನ್ನೇ ಬದಲಿಸಬಲ್ಲ ಸಮುದಯವಾಗಿದೆ. ಸದ್ಯ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಾಗಿ ಈಗಾಗಲೇ ರಾಮುಲು ಗುರುತಿಸಿಕೊಂಡಿದ್ದು, ಆ ಸಮುದಾಯ ಸದಾ ಬಿಜೆಪಿ ಜೊತೆ ಇರಲು ಶ್ರೀರಾಮುಲುಗೆ ನಾಯಕತ್ವ ಕಟ್ಟಿದೆ. ಬಿಜೆಪಿ ಅಭ್ಯರ್ಥಿ ಗೆಲ್ಲದಿದ್ದರೆ ರಾಮುಲುಗೆ ಸಮುದಾಯದ ಹಿಡಿತ ತಪ್ಪಿದೆ ಎಂಬ ಮಾಹಿತಿ ರವಾನೆಯಾಗುತ್ತದೆ. ಬಿಜೆಪಿಗೆ ರಮೇಶ್ ಜಾರಕಿಹೊಳಿ ಸೇರಿರುವುದು ಶ್ರೀರಾಮುಲುಗೆ ಸೈಡ್ ಲೈನ್ ಆಗುವ ಭೀತಿ ಎದುರಿಸುತ್ತಿದ್ದಾರೆ.
ಅದೇ ರೀತಿ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದ ಸಿ.ಪಿ.ಯೋಗೇಶ್ವರ್, ಟಿಕೆಟ್ ಸಿಗದೇ ನಿರಾಶೆ ಅನುಭವಿಸಿದ್ದರು. ಆದರೆ ಎಂಎಲ್ಸಿ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಶ್ವನಾಥ್ ಗೆಲ್ಲಿಸಲು ಮುಂದಾಗಿದ್ದಾರೆ.












Click it and Unblock the Notifications