ಭಾರಿ ಮಳೆ: ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡ ಕುಸಿತ
ಮೈಸೂರು, ಅಕ್ಟೋಬರ್, 21: ಭಾರಿ ಮಳೆ ಸುರಿದ ಪರಿಣಾಮ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ಕುಸಿದು ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಇಬ್ಬರು ಅಧ್ಯಾಪಕರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಣಿ ಪದವಿ ಕಾಲೇಜಿನ ಕಟ್ಟಡ ಕುಸಿದು ಬಿದ್ದಿದ್ದು, ಕಟ್ಟಡದ ಕುಸಿದ ಭಾಗವು ರಸಾಯನ ವಿಜ್ಞಾನದ ಪ್ರಯೋಗಾಲಯದ ಕೊಠಡಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿಗಳು 10:30ರ ವೇಳೆಗೆ ಕಾಲೇಜಿಗೆ ಬರುವರಿದ್ದರು. ಈ ವೇಳೆ ಬಿರುಕು ಮೂಡಿದ್ದನ್ನು ಗಮನಿಸಿದ ವಿಭಾಗದ ಮುಖ್ಯಸ್ಥ ಕೆ.ಕೆ.ಪದ್ಮನಾಭ ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ ಡಾ.ಡಿ.ರವಿ ಅವರು ಕೊಠಡಿಗೆ ಬೀಗ ಹಾಕಿಸಿದ್ದಾರೆ. ಅಲ್ಲದೆ ಎಲೆಕ್ಟ್ರಿಕ್ ಸಂಪರ್ಕವನ್ನು ಕಡಿತಗೊಳಿಸಿ ಕಟ್ಟಡದ ಒಳಗೆ ಯಾರೂ ಪ್ರವೇಶಿಸದಂತೆ ಸೂಚನೆ ನೀಡಿದ್ದಾರೆ.
ತಪ್ಪಿದ ಭಾರಿ ಅನಾಹುತ
ನಂತರ ಎಲ್ಲರೂ ಕಟ್ಟಡದ ಮೊದಲ ಮಹಡಿಯ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಪ್ರಯೋಗಾಲಯದ ಭಾಗವು ಕೂಡ ಕುಸಿದಿದೆ. ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರು ಭಾರಿ ಅನಾಹುತ ತಪ್ಪಿಸಿಕೊಂಡಿದ್ದಾರೆ. ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ ಹಾಗೂ ಮೇಯರ್ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ. ಕುಸಿದು ಬಿದ್ದ ಕಟ್ಟಡದ ಕೆಳಗೆ ಯಾರೂ ಇಲ್ಲ ಎಂದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಖಚಿತಪಡಿಸಿಕೊಂಡಿದ್ದಾರೆ. ಈ ನಡುವೆ ಕಾಲೇಜಿನ ಇತರೆ ಕಟ್ಟಡಗಳು ಕೂಡ ಇದೇ ಪರಿಸ್ಥಿತಿ ತಲುಪಿದ್ದು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.

ಅರಮನೆ ತಡೆಗೋಡೆ ಕುಸಿತ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇತ್ತೀಚಿಗೆ ಶಿಥಿಲಗೊಂಡಿರುವ ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಇರುವ ತಡೆಗೋಡೆಯ ಸ್ವಲ್ಪ ಭಾಗ ಕುಸಿದಿದೆ. ಭಾರಿ ಮಳೆಯಿಂದಾಗಿ ಸುಮಾರು 50 ಮೀಟರ್ ಉದ್ದದ ಕಾಂಪೌಂಡ್ ಕುಸಿದಿತ್ತು. ಈ ಭಾಗದ ಗೋಡೆಯ ದುರಸ್ತಿ ಕಾರ್ಯಕ್ಕೆ ಕಳೆದ ತಿಂಗಳು 39.06 ಲಕ್ಷ ರೂಪಾಯಿ ವೆಚ್ಚದ ಟೆಂಡರ್ ಕರೆದು ದುರಸ್ತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಅಲ್ಲದೇ ಸಂಬಂಧಿಸಿದವರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ ದಸರಾ ಮಹೋತ್ಸವ ಇದ್ದ ಕಾರಣ ಅವರು ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.











Click it and Unblock the Notifications