ರಾಮ್ ದಾಸ್ ಗೆ ಬಿಜೆಪಿ ಟಿಕೆಟ್ ಸಿಗುತ್ತಿದ್ದಂತೆ ಗೋ ಮಧುಸೂದನ್ ಉಲ್ಟಾ
ಮೈಸೂರು, ಏಪ್ರಿಲ್ 21 : ರಾಮ್ ದಾಸ್ ಧೂರ್ತ, ಭೂ ಬಕಾಸುರ, ರಾಕ್ಷಸ ಎಂದು ಕೆಲ ದಿನಗಳ ಹಿಂದೆಯಷ್ಟೇ ವಾಚಾಮ ಗೋಚರವಾಗಿ ಬೈದಿದ್ದರು ಬಿಜೆಪಿ ಮುಖಂಡ ಗೋ ಮಧುಸೂಧನ್. ಆದರೆ ರಾಮ್ ದಾಸ್ ಗೆ ಬಿಜೆಪಿ ಟಿಕೆಟ್ ಸಿಕ್ಕ ಕೂಡಲೇ ಉಲ್ಟಾ ಹೊಡೆದಿದ್ದಾರೆ. ಪಕ್ಷದಿಂದ ಅವರಿಗೆ ಟಿಕೆಟ್ ಕೊಟ್ಟರೆ ಅದೇ ಕ್ಷೇತ್ರದಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದಿದ್ದರು.
ಆದರೆ, ಈಗ ಎಲ್ಲ ತಣ್ಣಗಾಗಿ ಹೋಗಿದೆ. ನಾನು ಹುಟ್ಟಾ ಹೋರಾಟಗಾರ. ಪಕ್ಷದಲ್ಲೇ ನಾನು ಗುರುತಿಸಿಕೊಂಡಿದ್ದು ಹೋರಾಟದ ಮೂಲಕ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕಾಶ- ಭೂಮಿ ಒಂದಾಗುವಂತೆ ಅಬ್ಬರಿಸಿದ್ದ ಗೋ ಮಧುಸೂದನ್ ಅವರು ರಾಮದಾಸ್ ಗೆ ಟಿಕೆಟ್ ಘೋಷಿಸುತ್ತಿದ್ದಂತೆ ತಣ್ಣಗಾಗಿದ್ದಾರೆ. ನಾನು ಪಕ್ಷದ ನಿರ್ಧಾರದ ವಿರುದ್ಧ ಹೋಗುವುದಿಲ್ಲ ಎಂದಿದ್ದಾರೆ.
"ರಾಮ್ ದಾಸ್ ಪರ ನಾನು ಪ್ರಚಾರ ಮಾಡುತ್ತೇನೆ. ನನ್ನ ಮಾತನ್ನು ಪಕ್ಷದ ವರಿಷ್ಠರು ಕೇಳಿಲ್ಲವೆಂಬ ಬೇಸರವಿದೆ. ಆದರೆ ಪಕ್ಷದಿಂದ ಯಾರೇ ಸ್ಫರ್ಧಿಸಿದರೂ ಪ್ರಚಾರ ಮಾಡಬೇಕಿರುವುದು ನಮ್ಮ ಕರ್ತವ್ಯ" ಎಂದಿದ್ದಾರೆ. ಏನಿದು ಗೋ ಮಧುಸೂದನ್ ಎಂದು ಕೇಳುವ ಸಲುವಾಗಿಯೇ ಒನ್ಇಂಡಿಯಾ ಕನ್ನಡವು ಅವರ ಜತೆಗೆ ನಡೆಸಿದ ಸಂದರ್ಶನದ ಭಾಗ ಇಲ್ಲಿದೆ.
ಪ್ರಶ್ನೆ 1. ರಾಮ್ ದಾಸ್ ಗೆ ಈಗ ಬಿಜೆಪಿಯಿಂದ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಅಭಿಪ್ರಾಯ ಏನು?
ಗೋ ಮಧುಸೂದನ್: ಪಕ್ಷದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಮನಸ್ಸಿಗೆ ಎಲ್ಲೋ ಒಂದು ಕಡೆ ಬೇಸರವಿದೆ. ನನ್ನ ಸಲಹೆಯನ್ನು ಪಕ್ಷ ಸ್ವೀಕರಿಸಿಲ್ಲ ಎಂಬ ಬೇಸರವು ಕಾಡುತ್ತಿದೆ. ಆದರೆ ಪಕ್ಷದ ನಿಲವಿಗೆ ನಾನು ಬದ್ಧನಾಗಿದ್ದೇನೆ.
ಪ್ರಶ್ನೆ 2. ರಾಮದಾಸ್ ಅವರನ್ನು ಕಳಂಕಿತ, ಧೂರ್ತ, ಭೂ ಬಕಾಸುರ ಎಂದು ಬೈದಿದ್ದು ನೀವೇ ಅಲ್ಲವಾ?
ಗೋ ಮಧುಸೂದನ್: ಇನ್ನು ಆ ವಿಚಾರ ಮಾತನಾಡುವ ಸಂದರ್ಭವಲ್ಲ. ಮಾತನಾಡಲು ಇಷ್ಟವೂ ಇಲ್ಲ. ನಾವೆಲ್ಲರೂ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದೇವೆ. ನಮ್ಮ ನಿಲವು ಮೋದಿಯ ಗೆಲುವಿಗಾಗಿ ಆಗಬೇಕು. ವ್ಯಕ್ತಿಗತವಾದ ಸಂಗತಿ ಬರಬಾರದು. ನಾನು ಮುಂಚೆ ಹೇಳಿದ್ದ ಸಂಗತಿಗಳು ಅಭ್ಯರ್ಥಿಯ ಘೋಷಣೆ ಆಗುವುದಕ್ಕಿಂತ ಮುಂಚಿನದ್ದು. ಆದರೆ ನನ್ನ ನಿಲವು ಅಭ್ಯರ್ಥಿ ಘೋಷಣೆಯಾದ ಬಳಿಕ ಬದಲಾಗಿದೆ. ಹಿಂದಿನದೂ ಅಪ್ರಸ್ತುತ.
ಪ್ರಶ್ನೆ 3. ರಾಮ್ ದಾಸ್ ನಿಜವಾಗಿಯೂ ಗೆಲ್ಲುತ್ತಾರಾ?
ಗೋ ಮಧುಸೂದನ್: ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಖಂಡಿತಾ ಅವರು ಗೆಲುತ್ತಾರೆ. ಅದು ಬಿಜೆಪಿಯ ಗೆಲುವಿನ ಕ್ಷೇತ್ರ. ರಾಮ್ ದಾಸ್ ಗೆದ್ದೇ ಗೆಲ್ಲುತ್ತಾರೆ.
ಪ್ರಶ್ನೆ 4. ಯಾವುದೇ ಕಾರಣಕ್ಕೂ ರಾಮ್ ದಾಸ್ ಗೆಲ್ಲುವುದಿಲ್ಲ ಎಂದು ಈ ಹಿಂದೆ ನೀವೇ ಹೇಳಿದ್ದಿರಿ ಅಲ್ಲವೇ?
ಗೋ ಮಧುಸೂದನ್: ನಾನು ಆ ರೀತಿ ಹೇಳಿಲ್ಲ. ಯಾರು ಬೇಕಾದರೂ ಬಿಜೆಪಿ ಅಭ್ಯರ್ಥಿಯಾಗಿ ನಿಂತರೂ ಗೆಲ್ಲಬಹುದಾದ ಕ್ಷೇತ್ರ ಅದಾಗಿತ್ತು ಎಂದಿದ್ದೆ ಅಷ್ಟೇ. ನಾನು ಅವರು ಸೋಲುತ್ತಾರೆ ಎಂದು ಎಲ್ಲಿಯೂ ಹೇಳಿಲ್ಲ.
ಪ್ರಶ್ನೆ 5. ನಿಮಗೆ ಇದರಿಂದ ಹಿನ್ನಡೆಯಾಯಿತು ಎಂದು ಅನ್ನಿಸಲ್ಲವಾ? ನಿಮಗೇ ಟಿಕೆಟ್ ಸಿಗಬಹುದಿತ್ತಲ್ಲವಾ?
ಗೋ ಮಧುಸೂದನ್ : ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಹೋರಾಡಿದವನು. ಸಂಘ ಪರಿವಾರದಲ್ಲಿ ಅಂದಿನಿಂದಲೂ ಇಂದಿನವರೆಗೂ ಹೋರಾಡಿಕೊಂಡು ಬೆಳೆದಿದ್ದೇನೆ. ಜೀವನ ಮುಡುಪಾಗಿಟ್ಟು ಆರೆಸ್ಸೆಸ್ ಕೆಲಸ ಮಾಡಿದ್ದೇನೆ. ನನಗೆ ಅಧಿಕಾರ ಎಂಬುದು ಮುಖ್ಯವಲ್ಲ. ಸಂಘದ ತತ್ವ- ಸಿದ್ಧಾಂತ, ಹಿಂದುತ್ವದ ಅರಿವು ಮುಖ್ಯವಷ್ಟೇ. ರಾಜಕೀಯವೇ ಸರ್ವಸ್ವವಲ್ಲ. ಇದೇ ಮುಖ್ಯವಲ್ಲ.
ಪ್ರಶ್ನೆ 6. ಹಾಗಾದರೆ ಮುಂದಿನ ದಿನಗಳಲ್ಲಿ ರಾಮ್ ದಾಸ್ ಪರ ಪ್ರಚಾರ ಮಾಡುತ್ತೀರಾ ?
ಗೋ ಮಧುಸೂದನ್: ಖಂಡಿತಾ. ನಾನು ಈ ಹಿಂದೆ ಬಿಜೆಪಿ ವಿರುದ್ಧ ಬಂಡಾಯ ಏಳಬೇಡಿ ಎಂದಿದ್ದೇನೆ. ಈ ಹಿಂದೆ ರಾಮ್ ದಾಸ್ ವಿರುದ್ಧ ಹೇಳಿದ್ದು ನಿಜ. ಆದರೆ ಈಗಿಲ್ಲ. ನಮ್ಮ ನಿಲವು ಸಿದ್ದರಾಮಯ್ಯರನ್ನು ಕಿತ್ತೊಗೆಯುವುದು. ಸಿದ್ದು ಭ್ರಷ್ಟ, ಹಿಂದೂ ವಿರೋಧಿ ಅವರ ಸೋಲು ಬಿಜೆಪಿಯ ಗೆಲುವು.