ಬೆಂಗಳೂರು ಮೆಟ್ರೋ ಕಾಮಗಾರಿಗಳು ಸ್ಥಗಿತ: 'ನೀಲಿ, ಗುಲಾಬಿ' ಲೈನ್ ಗಡುವಿನೊಳಗೆ ಓಪನ್ ಆಗೋದು ಡೌಟು
ಬೆಂಗಳೂರು: ಬೆಂಗಳೂರಿನ ಪ್ರಯಾಣಿಕರ ನಿರೀಕ್ಷೆಯಂತೆ ನಮ್ಮ ಮೆಟ್ರೋ 2 ಹೊಸ ಮಾರ್ಗಗಳ ಲೋಕಾರ್ಪಣೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ. ಏಕೆಂದರೆ ಅಂತಿಮ ಹಂತದ ಕೆಲಸದಲ್ಲಿದ್ದ ನಮ್ಮ ಮೆಟ್ರೋ ನೀಲಿ ಮಾರ್ಗ ಮತ್ತು ಗುಲಾಬಿ ಮಾರ್ಗದ ಗುತ್ತಿಗೆದಾರರು ಕಾರ್ಮಿಕರು ಇಲ್ಲದೇ ಪರದಾಡುವಂತಾಗಿದೆ. ಈಗಾಗಲೇ ಗಡುವು ಮೀರಿದ ಹೊಸ ಮಾರ್ಗಗಳು ನಿಗದಿತ ಗಡುವಿನೊಳಗೆ ತೆರೆಯುವುದು ಅನುಮಾನ ಎನ್ನಲಾಗುತ್ತಿದೆ.
ಹೌದು, 2026 ಮೇ ತಿಂಗಳಿನಲ್ಲಿ ಗುಲಾಬಿ ಮಾರ್ಗ ತೆರೆಯಲು ಹಾಗೂ 2026ರ ಡಿಸೆಂಬರ್ ಅಂತ್ಯಕ್ಕೆ ನೀಲಿ ಮಾರ್ಗ ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಆದರೆ ವಿವಿಧ ಕಾರಣಗಳಿಂದಾಗಿ ಕಾಳೇನ ಅಗ್ರಹಾರ ಮತ್ತು ತಾವರೆಕೆರೆವರೆಗಿನ ಸುಮಾರು 7.5ಕಿಲೋ ಮೀಟರ್ ಗುಲಾಬಿ ಮಾರ್ಗ ಮೇ ತಿಂಗಳ ಬದಲಾಗಿ ಜೂನ್ ಅಂತ್ಯದೊತ್ತಿಗೆ ತೆರೆಯಲು ಚಿಂತನೆ ಮಾಡಲಾಗಿತ್ತು. ಮೆಟ್ರೋ ಮಾರ್ಗದ ಅಂತಿಮ ಕೆಲಸಗಳು ದಿಢೀರ್ ನಿಲ್ಲಲು ಕಾರಣವೇನು?

ಬೆಂಗಳೂರಿನತ್ತ ಮರಳಿ ಬಾರದ ಕಾರ್ಮಿಕರು
ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಮೂಲಗಳ ಪ್ರಕಾರ, ನಮ್ಮ ಮೆಟ್ರೋ ಗುಲಾಬಿ ಮಾರ್ಗ (ಕಾಳೇನ ಅಗ್ರಹಾರ-ತಾವರೆಕೆರೆ) ಮತ್ತು ನೀಲಿ ಮಾರ್ಗವು (ಸಿಲ್ಕ್ ಬೋರ್ಡ್-ಕೆ.ಆರ್.ಪುರಂ 2A) ಅಂತಿಮ ಹಂತಕ್ಕೆ ಬಂದಿವೆ. ಆದರೆ ಇಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಕಾರ್ಮಿಕರು ಕಳೆದ ತಿಂಗಳು ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮತದಾನಕ್ಕೆಂದು ತೆರಳಿದ್ದರು. ಆದರೆ ಅವರು ವಾರಗಳು ಕಳೆದು ಮರಳಿ ಬಂದಿಲ್ಲ.
ಏಪ್ರಿಲ್ 29ರಂದು ಮತದಾನಗಳು ಮುಗಿದಿದ್ದು, ಇದೇ ತಿಂಗಳ ಮೇ 4ರಂದು ಫಲಿತಾಂಶ ಸಹ ಪ್ರಕಟವಾಗಿತ್ತು. ಅದಾಗಿ ವಾರಗಳ ಬಳಿಕವು ಕಾರ್ಮಿಕರು ಬೆಂಗಳೂರಿನತ್ತ ಮುಖ ಮಾಡಿಲ್ಲ. ಇದು ಗುತ್ತಿಗೆದಾರರನ್ನು ಚಿಂತೆಗೀಡು ಮಾಡಿದೆ. ಮೆಟ್ರೋ ಅಂತಿಮ ಹಂತದ ಟ್ರ್ಯಾಕಿಂಗ್, ಸಿವಿಲ್, ಎಲೆಕ್ಟ್ರಿಕಲ್ ಸೇರಿದಂತೆ ಇನ್ನಿತರ ಕೆಲಸಗಳು ನಿಂತಿವೆ. ಅಂತಿಮ ಹಂತದಲ್ಲಿ ಕೆಲಸಗಳನ್ನು ಮುಗಿಸಲು ಗುತ್ತಿಗೆದಾರರ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇದು ಗುಣಮಟ್ಟದ ಮೇಲೂ ಪರಿಣಾಮ ಉಂಟು ಮಾಡಲೂ ಬಹುದು. ನಿಗದಿತ ಸಮಯದಲ್ಲಿ ಎರಡು ಮಾರ್ಗ ತೆರೆಯುವುದು ಮತ್ತಷ್ಟು ವಿಳಂಬವಾಗಬಹುದೆಂದು ಹೇಳಲಾಗುತ್ತಿದೆ.
ಡೆಡ್ಲೈನ್ ಮತ್ತೆ ವಿಸ್ತರಣೆ ನಿರೀಕ್ಷೆ?
ಬರದಿಂದ ಸಾಗಿದ್ದ ನೀಲಿ ಮಾರ್ಗದ ವಯಡಕ್ಟ್, ಮೆಟ್ರೋ ನಿಲ್ದಾಣ ನಿರ್ಮಾಣ, ಟ್ರ್ಯಾಕ್ ಕಾಮಗಾರಿ ಪೂರ್ಣಗೊಂಡಿವೆ. ಕೆಲವೇ ವಾರಗಳ ಕೆಲಸ ಬಾಕಿ ಇತ್ತು. ಬಳಿಕ ರೈಲಿನ ಪ್ರಾಯೋಗಿಕ ಪರೀಕ್ಷೆ ಬಳಿಕ ಅನುಮೋದನೆ ದೊರೆಯುತ್ತಿದ್ದಂತೆ (ಡಿಸೆಂಬರ್ಗೆ) ಲೋಕಾರ್ಪಣೆಗೆ ಪ್ಲ್ಯಾನ್ ಮಾಡಲಾಗಿತ್ತು. ಮೊದಲಿನಿಂದಲೂ ವಿಳಂಬವಾಗುತ್ತಾ ಬಂದಿದ್ದ ಮೆಟ್ರೋ ಕಾಮಗಾರಿಗೆ ಅಂತಿಮ ಹಂತದಲ್ಲೂ ತಡವಾಗಿ, ಉದ್ಘಾಟನೆಯ ಡೆಡ್ಲೈನ್ ವಿಸ್ತರಣೆ ಆಗುವ ಲಕ್ಷಣಗಳು ಕಾಣುತ್ತಿವೆ.
ಬೆಂಗಳೂರಿನಲ್ಲಿ ಸರ್ಕಾರಿ ಹಾಗೂ ಇನ್ನಿತರ ಕಾಮಗಾರಿಗಳಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತೀಯ ಕಾರ್ಮಿಕರು ಕೆಲಸಕ್ಕೆಂದು ವಲಸೆ ಬರುತ್ತಾರೆ. ಒಂದೊಮ್ಮೆ ಕೆಲಸಕ್ಕೆ ಬಂದರೆ ಸುಮಾರು ಆರು ತಿಂಗಳು, ವರ್ಷಗಳ ಕಾಲ ಇಲ್ಲೇ ಇದ್ದು ದುಡಿಯುತ್ತಾರೆ. ಕುಟುಂಬ, ಆರೋಗ್ಯ, ಮತದಾನದಂತಹ ಇನ್ನಿತರ ಕಾರಣಗಳಿಗೆ ತೆರಳಿದರೆ ಬರುವುದು ತಿಂಗಳುಗಟ್ಟಲೇ ಹಿಡಿಯುತ್ತದೆ. ಮೆಟ್ರೋ ಕಾರ್ಮಿಕರು ಇದೇ ರೀತಿ ದೂರದ ತಮ್ಮ ಊರುಗಳಿಗೆ ಹೋಗಿದ್ದಾರೆ. ಗುತ್ತಿಗೆದಾರರು ಅವರನ್ನು ಸಂಪರ್ಕಿಸಿದ್ದು, ಆದಷ್ಟು ಶೀಘ್ರವೇ ಕಾರ್ಮಿಕರ ಗುಂಪನ್ನು ಕರೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಗುಲಾಬಿ ಮಾರ್ಗದ ಡ್ರೈವರ್ಲೈಸ್ ರೈಲುಗಳ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ. ಅಂತಿಮ ಹಂತದ ಪರೀಕ್ಷೆಗಳು ನಡೆದಿದ್ದು, ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಅಂತಿಮ ಅನುಮೋದನೆ ನೀಡುತ್ತಿದ್ದಂತೆ ಉದ್ಘಾಟನೆಯ ದಿನಾಂಕ ಫಿಕ್ಸ್ ಆಗಲಿದೆ. ಈ ಬಗ್ಗೆ ಜೂನ್ ಮಧ್ಯ ಭಾಗಕ್ಕೆ ಶೀಘ್ರವೇ ಅಧಿಕೃತ ಮಾಹಿತಿ ಸಿಗಲಿದೆ.













Click it and Unblock the Notifications