ರಾಮದಾಸ್ ಧೂರ್ತ, ಕಾಮುಕ, ಭೂ ಬಕಾಸುರ ಎಂದ ಗೋ ಮಧುಸೂದನ್
ಮೈಸೂರು, ಏಪ್ರಿಲ್ 11 : "ಕಳಂಕಿತ ರಾಮದಾಸ್ ಗೆ ಟಿಕೆಟ್ ಕೊಡಬೇಡಿ. ರಾಮದಾಸ್ ಗೆ ಇಡೀ ಕೆ.ಆರ್. ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಂಪೂರ್ಣ ವಿರೋಧವಿದೆ. ಸಾಮಾನ್ಯ ಕಾರ್ಯಕರ್ತ ನಿಂತರೂ ಬಿಜೆಪಿ ಗೆಲ್ಲುವ ಏಕೈಕ ಕ್ಷೇತ್ರ ಕೃಷ್ಣರಾಜ. ಕಳಂಕಿತ ವ್ಯಕ್ತಿಗೆ ಟಿಕೆಟ್ ನೀಡಿ ಕ್ಷೇತ್ರ ಕಳೆದುಕೊಳ್ಳಬೇಡಿ" ಎಂದು ಮೈಸೂರಿನಲ್ಲಿ ಗೋ ಮಧುಸೂದನ್ ಗುಡುಗಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಅವರು, ಒಂದೊಮ್ಮೆ ರಾಮದಾಸ್ ಗೆ ಟಿಕೆಟ್ ನೀಡಿದರೆ ಬಂಡಾಯ ಎದುರಿಸಬೇಕಾಗುತ್ತದೆ. ಪಕ್ಷ ತೆಗೆದುಕೊಳ್ಳುವ ಅಂತಹ ತೀರ್ಮಾನವನ್ನು ನಾನು ವಿರೋಧಿಸುತ್ತೇನೆ. ರಾಮದಾಸ್ ಗೆ ಟಿಕೆಟ್ ಕೊಟ್ಟರೆ ಪಕ್ಷೇತರನಾಗಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಮಧುಸೂದನ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಪಕ್ಷದ ಕಾರ್ಯಕರ್ತರ ನೈತಿಕತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ರಾಮದಾಸ್ ರ ಯಾವ ಒತ್ತಡಕ್ಕೂ ಮಣಿಯದೆ ಟಿಕೆಟ್ ನಿರಾಕರಿಸಬೇಕು. ನಾನು ಹುಟ್ಟು ಹೋರಾಟಗಾರ. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದೆ. ಮೈಸೂರಿನ ಎಲ್ಲಾ ಬೆಳವಣಿಗೆ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಇವತ್ತು ನನ್ನೊಳಗೆ ಪುಟಿದೆದ್ದಿರುವ ಭಾವೋದ್ವೇಗದೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ ಎಂದರು.
ಕಳೆದ ಬಾರಿ ಕ್ಷೇತ್ರ ಕಳೆದುಕೊಂಡಿದ್ದು ನಮ್ಮದೇ ತಪ್ಪಿನಿಂದ
ನಾನು ಹಿಂದೆ ನಡೆಸಿದ ಎಲ್ಲ ಹೋರಾಟಕ್ಕೂ ಜಯ ಸಿಕ್ಕಿದೆ. ಕೆ.ಆರ್. ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಕಳೆದ ಬಾರಿ ಕ್ಷೇತ್ರ ಕಳೆದುಕೊಂಡದ್ದು ನಮ್ಮದೇ ತಪ್ಪಿನಿಂದ. ಚುನಾವಣೆ ನಂತರ ರಾಮದಾಸ್ ಮತ್ತು ಪ್ರೇಮಕುಮಾರಿ ಸಂಬಂಧ ಬಯಲಿಗೆ ಬಂದಿತು. ಆಕೆ ತನ್ನ ಮೇಲಾಗಿರುವ ದೌರ್ಜನ್ಯದ ಬಗ್ಗೆ ಹೋರಾಟ ಮಾಡುತ್ತಿದ್ದು, ಈಗ ಜನತಾ ನ್ಯಾಯಾಲಯದ ಮುಂದೆ ಕೂಡ ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.
ಕಾಮುಕ, ಧೂರ್ತ, ಭೂ ಬಕಾಸುರ ಎಂದು ಗೊತ್ತಿರಲಿಲ್ಲ
ರಾಮದಾಸ್ ಪರ ಮೊದಲ ಬಾರಿ ನಾನು ಕೂಡ ಕೆಲಸ ಮಾಡಿದ್ದೆ. ಹಾಗಾಗಿ ಪಾಪ ಪ್ರಜ್ಞೆ ನನಗೆ ಕಾಡುತ್ತಿದೆ. ಇಂತಹ ಕಾಮುಕ, ಧೂರ್ತ, ಭೂ ಬಕಾಸುರ ಎಂದು ಖಂಡಿತಾ ನಮಗೆ ಗೊತ್ತಿರಲಿಲ್ಲ. ನೈತಿಕತೆ ಚುಚ್ಚುತ್ತಿದೆ. ಯಡಿಯೂರಪ್ಪ ಅವರಿಗೆ ಪತ್ರ ರವಾನೆ ಮಾಡಿದ್ದೇನೆ ಎಂದು ಹೇಳಿದರು.
ವೇಣುಗೋಪಾಲ್, ಮೇಟಿಯನ್ನು ಪ್ರಶ್ನಿಸುವ ನೈತಿಕತೆ ಇರಲ್ಲ
ದೇಶ ಮುಖ್ಯ ಎಂದು ಯೋಚಿಸುವ ಪಕ್ಷ ಬಿಜೆಪಿಯು ಚಾರಿತ್ರ್ಯದ ಬಗ್ಗೆ ಕೂಡ ಚಿಂತಿಸಬೇಕು. ರಾಮದಾಸ್ ಗೆ ಟಿಕೆಟ್ ನೀಡಿದ್ದೇ ಆದರೆ ಬಿಜೆಪಿ ನೈತಿಕತೆ ಕಳೆದುಕೊಳ್ಳುತ್ತದೆ. ಕೇರಳದ ವೇಣುಗೋಪಾಲ್, ಕಾಂಗ್ರೆಸ್ ನ ಮೇಟಿ ಬಗ್ಗೆ ಪ್ರಶ್ನಿಸುವ ನೈತಿಕತೆ ಇರುವುದಿಲ್ಲ ಎಂದು ಗೋ ಮಧುಸೂದನ್ ಹೇಳಿದ್ದಾರೆ.
ಸ್ವಪಕ್ಷದ ಮುಖಂಡರಿಂದಲೇ ಟಿಕೆಟ್ ಗೆ ಆಕ್ಷೇಪ
ಬಿಜೆಪಿಯು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮೈಸೂರು ಜಿಲ್ಲೆಯ ಕ್ಷೇತ್ರಗಳ ಟಿಕೆಟ್ ಯಾರಿಗೆ ಎಂಬುದನ್ನು ತಿಳಿಸಿಲ್ಲ. ಆದರೆ ಮೊದಲ ಪಟ್ಟಿಯ ಬಗ್ಗೆ ವಿವಿಧೆಡೆ ಆಕ್ಷೇಪ ಹಾಗೂ ಅಸಮಾಧಾನ ಕೇಳಿಬಂದಿದ್ದು ಹೌದು. ಇದೀಗ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಅದೇ ಪಕ್ಷದ ಪ್ರಮುಖ ಮುಖಂಡ ಗೋ ಮಧುಸೂದನ್ ಟಿಕೆಟ್ ನೀಡಬಾರದು ಎಂಬ ಆಕ್ಷೇಪ ಮಾಡುತ್ತಿದ್ದಾರೆ. ಅದೂ ಮಾಜಿ ಸಚಿವ, ಮೈಸೂರು ಜಿಲ್ಲೆಯ ನಾಯಕ ಎಸ್.ಎ.ರಾಮದಾಸ್ ವಿರುದ್ಧ. ಮುಂದೇನಾಗುತ್ತದೋ?!