ಪಟ್ಟು ಹಾಕಿ ತೋರಿಸ್ತೀನಿ ಬನ್ನಿ ಎಂದು ಸಿಟ್ಟಿನಲ್ಲಿ ಸಿದ್ದುಗೆ ಗೌಡರ ಸವಾಲು
Recommended Video

ಮೈಸೂರು, ಮಾರ್ಚ್ 23 : "ನನ್ನ 80ನೇ ವಯಸ್ಸಿನಲ್ಲಿ ಮತ್ತೆ ರಾಜಕೀಯ ಅಖಾಡಕ್ಕಿಳಿದಿದ್ದೇನೆ. ಬನ್ನಿ, ನೀವಾ ಅಥವಾ ನಾನಾ ನೋಡೋಣ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೆಸೆದಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ದಿನಗಣನೆ ಆರಂಭ ಆಗಿರುವ ಹೊತ್ತಿಗೆ ಪರಸ್ಪರ ಪಂಥಾಹ್ವಾನ ಹೆಚ್ಚಾಗುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ನಗರದಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ನಿಂತು ದೇವೇಗೌಡರಿಗೆ ವಯಸ್ಸಾಗಿದೆ ಎಂದು ಹೇಳಿದ್ದೀರಿ. ಬನ್ನಿ ಮೈಸೂರಿನಿಂದಲೇ ರಾಜಕೀಯ ಅಖಾಡ ಶುರು ಮಾಡೋಣ. ನಾನು ಗರಡಿ ಪೂಜೆ ಮಾಡಿದ ನಂತರವೇ ಚುನಾವಣೆಗೆ ಸ್ಪರ್ಧೆ ಮಾಡಿದ್ದು. ಇದೀಗ ಮತ್ತೆ ಗರಡಿ ಉದ್ಘಾಟನೆ ಮೂಲಕ ರಾಜಕೀಯ ಅಖಾಡ ಆರಂಭವಾಗಿದೆ. ಬನ್ನಿ ಇಲ್ಲಿಂದಲ್ಲೇ ರಾಜಕೀಯ ಅಖಾಡ ಶುರು ಮಾಡೋಣ ಎಂದು ಪಂಥಾಹ್ವಾನ ನೀಡಿದರು.
ಟೀಕೆ ಮಾಡುವ ಬದಲು ಹತ್ತು ಸಾರಿ ಯೋಚಿಸಬೇಕು. ಸಕಾರಾತ್ಮಕ ಟೀಕೆಗೆ ಸ್ವಾಗತವಿದೆ. ಟೀಕಿಸದೆ ಹೇಳುವವರಿಗೆ ಸಕಾಲದಲ್ಲಿ ಉತ್ತರಿಸುತ್ತೇನೆ. ರಾಜಕೀಯದಲ್ಲಿ ಇವೆಲ್ಲ ಮಾಮೂಲು. ನಾನು ಹೇಳಿಕೆ ನೀಡುವಾಗ ವಸ್ತುಸ್ಥಿತಿಯನ್ನು ಅರಿತು ಮಾತನಾಡುತ್ತೇನೆ ವಿನಾ ಇನ್ನೊಬ್ಬರಿಗೆ ನೋವು ತರುವಂತಹ ವಿಚಾರಗಳನ್ನು ಹೇಳುವುದಿಲ್ಲ ಎಂದರು.

ಎಚ್.ಡಿ. ರೇವಣ್ಣರನ್ನು ಸೋಲಿಸಲು ನಿಮ್ಮ ಕೈಯಲ್ಲಿ ಸಾಧ್ಯವಿಲ್ಲ
ನೀವು ಎಲ್ಲಿದ್ದಿರಿ, ಎಲ್ಲಿಂದ ಬಂದಿದ್ದೀರಿ ಅಂತ ನೆನಪು ಮಾಡಿಕೊಳ್ಳಿ. ದುರಹಂಕಾರ, ಅಧಿಕಾರದ ಮದದಲ್ಲಿ ಮಾತಾಡಬೇಡಿ. ಎಚ್.ಡಿ. ರೇವಣ್ಣರನ್ನು ಸೋಲಿಸಲು ನಿಮ್ಮ ಕೈಯಲ್ಲಿ ಸಾಧ್ಯವಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಲು ಕುಮಾರಸ್ವಾಮಿ ಕಾರಣವಾಗಿದ್ದಾರೆ. ಅವರ ಹಗರಣವನ್ನು ಬಯಲು ಮಾಡಲು ಹಗಲು- ರಾತ್ರಿ ಕಷ್ಟ ಪಟ್ಟಿದ್ದಾರೆ. ನೀವು ವಿಪಕ್ಷ ನಾಯಕರಾಗಿ ಅರಾಮಾಗಿ ಕೂತಿದ್ದಿರಿ. ಈಗ ನಮ್ಮನ್ನು ಬಿಜೆಪಿ ಬಿ ಟೀಮ್ ಅನ್ನುತ್ತೀರಾ ಎಂದು ವಾಗ್ದಾಳಿ ಮಾಡಿದರು.

ಒಗ್ಗಟ್ಟು ಪ್ರದರ್ಶನ ಮಾಡಿದರೆ ಜಿಲ್ಲೆಯ ಎಲ್ಲ ಸ್ಥಾನಗಳು ಜೆಡಿಎಸ್ ಪಾಲು
ಇನ್ನು ಮೈಸೂರಿನಲ್ಲಿ ಜೆಡಿಎಸ್ ಬೃಹತ್ ಸಭೆ ನಡೆಸಿ, ನಿಮ್ಮ ಸೊಕ್ಕನ್ನು ಮುರಿಯುತ್ತೇನೆ. ಕನಿಷ್ಠ ಪಕ್ಷ ಉಪಕಾರ ಸ್ಮರಣೆ ಇರಬೇಕು. ಮಾಡಿದ್ದನ್ನು ನೆನಪಿಸಿಕೊಳ್ಳಬೇಕು. ಅಹಂಕಾರ ಹೆಚ್ಚಾಗಿ ಹೋಗಿದೆ. ಮುಖ್ಯಮಂತ್ರಿ ಆಗಿ ಬಹಳ ದಿನ ನೀವು ಉಳಿಯುವುದಿಲ್ಲ. ಮೈಸೂರಿನಲ್ಲಿ ನಮ್ಮ ಜೆಡಿಎಸ್ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದರೆ ಜಿಲ್ಲೆಯ ಎಲ್ಲ ಸ್ಥಾನಗಳು ಜೆಡಿಎಸ್ ಪಾಲಾಗಲಿವೆ ಎಂದರು.

ರಂಗಪ್ಪ ನಮ್ಮ ನೆಂಟ ಅಂತ ಪ್ರಚಾರಕ್ಕೆ ಬಂದಿಲ್ಲ
ಮೈಸೂರಿನಲ್ಲಿ ಬೃಹತ್ ಸಭೆ ನಡೆಸಿ ನಿಮ್ಮ ಸೊಕ್ಕನ್ನು ಮುರಿಯುತ್ತೇನೆ. ರಂಗಪ್ಪ ನಮ್ಮ ನೆಂಟ ಅಂತ ಪ್ರಚಾರಕ್ಕೆ ಬಂದಿಲ್ಲ. ಅವರೊಬ್ಬ ವಿಜ್ಞಾನಿ. ಚೀನಾದಲ್ಲಿ ಅವರಿಗೆ ಒಳ್ಳೆಯ ಸ್ಥಾನಮಾನ ಇತ್ತು. ಆದರೂ ಅವರನ್ನು ರಾಜಕೀಯಕ್ಕೆ ತಂದಿದ್ದೇನೆ. ಮೋದಿ ಅವರು ಗೊತ್ತಿಲ್ಲದೇ ಟೆನ್ ಪರ್ಸೆಂಟ್ ಸರಕಾರ ಅಂದಿದ್ದಾರೆ. ಆದರೆ ಅದು ಬೇರೆಯೇ ಇದೆ. ಮುಂದಿನ ದಿನಗಳಲ್ಲಿ ಸರಕಾರದ ಭ್ರಷ್ಟಾಚಾರ ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಹರಿಹಾಯ್ದರು.

ಮುಖ್ಯಮಂತ್ರಿ ಫೋನ್ ಸಂಭಾಷಣೆಗೆ ಸಮರ್ಥನೆ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯದ ಫೋನ್ ಸಂಭಾಷಣೆ ಈಚೆಗೆ ಬಯಲಾಯಿತು. ಅದರಲ್ಲಿ ಸಿದ್ದರಾಮಯ್ಯ, ಹೊಳೆನರಸೀಪುರದಲ್ಲಿ ದೇವೇಗೌಡರ ಮಕ್ಕಳೇ ಗೆಲ್ಲಬೇಕಾ ಎಂದು ಮಾತನಾಡಿದ್ದರು. ಈ ಮಾತುಕತೆಯನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ. ನಾನು ಕಾಂಗ್ರೆಸ್ ಮುಖ್ಯಮಂತ್ರಿ. ಜೆಡಿಎಸ್ ಸೋಲಿಸಿ ಅಂತ ಹೇಳುವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications