ಆತ್ಮಹತ್ಯೆ FIR: ಜಿಪಂ ಸಿಇಓ ಮಿಶ್ರಾಗೆ ಶುರುವಾಯ್ತು ಸಂಕಷ್ಟ
ಬೆಂಗಳೂರು, ಆ. 22: ಕೊರೊನಾ ವಾರಿಯರ್, ನಂಜನಗೂಡು ಟಿಎಚ್ಓ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ ಕುರಿತಂತೆ ಮೈಸೂರು ಜಿಲ್ಲಾ ಪಂಚಾಯತಿ ಸಿಇಓ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆಯೆ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಮೃತ ಡಾ. ನಾಗೇಂದ್ರ ತಂದೆ ಟಿ.ಎಸ್. ರಾಮಕೃಷ್ಣ ಅವರು ಮೈಸೂರಿನ ಆಲನಹಳ್ಳಿ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 306 ಅನ್ವಯ ಎಫ್ಐಆರ್ ದಾಖಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆಯ ಆರೋಪದಡಿ ದೂರು ಸಲ್ಲಿಸಲಾಗಿತ್ತು. ಜಾಮೀನು ರಹಿತ ಪ್ರಕರಣ ಇದಾಗಿದ್ದು, ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಸಂಕಷ್ಟ ಎದುರಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪ ಸಾಬೀತಾದಲ್ಲಿ 10 ವರ್ಷಗಳವೆರೆಗೆ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಡಾ. ನಾಗೇಂದ್ರ ಅವರ ತಂದೆ ಕೊಟ್ಟಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದ್ದು. ಎಫ್ಐಆರ್ನಲ್ಲಿ ಏನೇನಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂದುವರಿದ ಮುಷ್ಕರ
ವರ್ಗಾವಣೆಗೊಂಡಿರುವ ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಅಮಾನತಿಗೆ ಆಗ್ರಹಿಸಿ ಮೈಸೂರಿನಲ್ಲಿ ಸರ್ಕಾರಿ ವೈದ್ಯರು ಮುಷ್ಕರ ಮುಂದುವರೆಸಿದ್ದಾರೆ. ಕರ್ತವ್ಯ ಬಹಿಷ್ಕರಿಸಿರುವ ವೈದ್ಯರು ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಹಾಜರಾಗಿಲ್ಲ.
ಮೈಸೂರಿನ ಡಿಎಚ್ಓ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಜಿಪಂ ಸಿಇಓ ಡಾ. ನಾಗೇಂದ್ರ ಮೇಲೆ ಒತ್ತಡ ಹಾಕಿದ್ದ ಸಿಇಓ ಮಿಶ್ರಾರನ್ನು ಅಮಾನತು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಎಫ್ಐಆರ್ನಲ್ಲಿ ಏನಿದೆ?
ಮೈಸೂರಿನಲ್ಲಿ ಡಾ. ನಾಗೇಂದ್ರ ಅವರ ತಂದೆ ಟಿ.ಎಸ್. ರಾಮಕೃಷ್ಣ ಅವರು ಸಲ್ಲಿಸಿರುವ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ. ತಮ್ಮ ಪುತ್ರ ಡಾ. ಎಸ್.ಆರ್. ನಾಗೇಂದ್ರ ಅವರು ನಂಜನಗೂಡು ತಾಲ್ಲೂಕು ಕೊಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಜನವರಿ 2020ರಿಂದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ಜವಾಬ್ದಾರಿ ನಿರ್ವಹಿಸುತ್ತಿದ್ದರು.
ಕೋವಿಡ್-19 ಹಿನ್ನೆಲೆಯಲ್ಲಿ ನಿಗದಿತ ಕೆಲಸಕ್ಕಿಂತ ಹೆಚ್ಚಿನ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ನಿರ್ವಹಿಸಲು ಅನೇಕ ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆಯಿದೆ ಎಂದು ಮೇಲಧಿಕಾರಿಗಳಿಗೆ ತಿಳಿಸಿದ್ದರು.

ಟಾರ್ಗೆಟ್ ನೀಡಿದ್ದ ಮಿಶ್ರಾ
ಸೌಲಭ್ಯ ಹಾಗೂ ಅಗತ್ಯ ಸಿಬ್ಬಂದಿ ಒದಗಿಸುವಂತೆ ಜಿಲ್ಲೆಯ ಜಿಪಂ ಸಿಇಓ, ಜಿಲ್ಲಾಧಿಕಾರಿ ಹಾಗೂ ಡಿಎಚ್ಓ ಅವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಸಂಬಂಧಿಸಿದವರು ಯಾವುದೇ ಸೌಲಭ್ಯ ಕೊಟ್ಟಿರಲಿಲ್ಲ. ತನ್ನನ್ನು ಹೆಚ್ಚುವರಿ ಪ್ರಭಾರ ಕರ್ತವ್ಯದಿಂದ ವಿಮುಕ್ತಿ ಮಾಡುವಂತೆ ಮಾಡಿದ್ದ ಮನವಿಯನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ.
ಬದಲಿಗೆ ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮತ್ತಷ್ಟು ಹೆಚ್ಚುವರಿ ಕೆಲಸ ನೀಡಿ, ಟಾರ್ಗೆಟ್ ಕೊಟ್ಟು ಕೆಲಸ ಮಾಡುವಂತೆ ಆದೇಶ ಮಾಡಿದ್ದರು. ಟಾರ್ಗೆಟ್ ಮುಟ್ಟದೇ ಇದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದರು.

ಕಿರುಕುಳದಿಂದ ಆತ್ಮಹತ್ಯೆ
ಹೀಗಾಗಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಒತ್ತಡದಲ್ಲಿ ಕೆಲಸ ನಿರ್ವಹಿಸಲು ಆಗದೇ 19.08.2020 ರಂದು ರಾತ್ರಿ 10.30ಕ್ಕೆ ತನ್ನ ತಂದೆ-ತಾಯಿ ಮನೆಯಲ್ಲಿ ಊಟ ಮಾಡಿಕೊಂಡು ರಾತ್ರಿ 11 ಗಂಟೆಗೆ ತನ್ನ ಮನೆಗೆ ಹೋಗಿದ್ದರು. ಸಿಇಓ ಅವರ ಒತ್ತಡ ತಾಳಲಾರದೇ ಅಂದು ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಇಓ ಅವರ ಕಿರುಕುಳದಿಂದ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನನ್ನ ಮಗನ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರ ವಿರುದ್ಧ ಕಾನೂನು ಕ್ರಮಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಡಾ. ನಾಗೇಂದ್ರ ಅವರ ತಂದೆ ಟಿ.ಎಸ್. ರಾಮಕೃಷ್ಣ ಅವರು ದೂರಿನಲ್ಲಿ ವಿನಂತಿ ಮಾಡಿಕೊಂಡಿದ್ದರು. ಅದರಂತೆ ಎಫ್ಐಆರ್ ದಾಖಲಾಗಿದೆ.

ಕೇಳಿದ್ದು ಸಸ್ಪೆಂಡ್, ಮಾಡಿದ್ದು ಟ್ರಾನ್ಸ್ಫರ್
ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮರ್ ಮಿಶ್ರಾ ಅಮಾನತು ಮಾಡುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಸಿಇಓ ಅವರನ್ನು ಅಮಾನತು ಮಾಡುವಂತೆ ವೈದ್ಯರು ಪಟ್ಟುಹಿಡಿದಿದ್ದಾರೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಒತ್ತಡಕ್ಕೆ ಮಣಿಯದ ಸರ್ಕಾರ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಕೇವಲ ವರ್ಗಾವಣೆ ಶಿಕ್ಷೆ ಕೊಟ್ಟಿದೆ. ಹುದ್ದೆ ತೋರಿಸದೇ ಮಿಶ್ರಾ ಅವರನ್ನು ಎತ್ತಂಗಡಿ ಮಾಡಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರಿಗೆ ಹೆಚ್ಚುವರಿಯಾಗಿ ಸಿಇಓ ಕರ್ತವ್ಯ ವಹಿಸಲಾಗಿದೆ.












Click it and Unblock the Notifications