ಮೈಸೂರು ದಸರಾಕ್ಕೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ
Recommended Video

ಮೈಸೂರು, ಅಕ್ಟೋಬರ್. 8: ಚುನಾವಣಾ ಮಾದರಿ ನೀತಿ ಸಂಹಿತೆ ದಸರಾ ಮೇಲೂ ಪರಿಣಾಮ ಬೀರಿದ್ದು, ಜನಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳುವ ಬಗ್ಗೆ ಜಿಜ್ಞಾಸೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಮೂರು ಪ್ರಮುಖ ಕಾರ್ಯಕ್ರಮಗಳಿಂದ ಸಚಿವರು, ಶಾಸಕರು ದೂರ ಉಳಿದರು.
ಪ್ರವಾಸೋದ್ಯಮ ಇಲಾಖೆ ಸರಸ್ವತಿಪುರಂ ಈಜುಕೊಳದಲ್ಲಿ ಆಯೋಜಿಸಿದ್ದ ಟ್ರಯ್ಲಾಥಾನ್ , ಹಾಪ್ ಆನ್ ಹಾಪ್ ಆಫ್, ಲಲಿತಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ ನಡೆದ ಗ್ರಾವೆಲ್ ಫೆಸ್ಟ್ ಗೆ ಚಾಲನೆ ಕೊಡಬೇಕಿತ್ತು.
ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಪಾಲ್ಗೊಳ್ಳಲಿಲ್ಲ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕೆ.ಆರ್. ನಗರ ವಿಧಾನಸಭಾಕ್ಷೇತ್ರ ಸೇರಿದ್ದರೂ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.
ಹಾಗಾಗಿ ಮೈಸೂರು, ಶಿವಮೊಗ್ಗ, ಮಂಡ್ಯ ಜಿಲ್ಲೆಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆದರೆ ಇಲ್ಲಿ ಪೂರ್ವ ನಿಗದಿಯಂತೆ ನಾಡಹಬ್ಬ ದಸರಾ ನಡೆಯುತ್ತಿರುವುದರಿಂದ ಹಾಗೂ ಇದು ಸಾಂಸ್ಕೃತಿಕ ಹಬ್ಬವಾಗಿರುವುದರಿಂದ ಕೆಲವು ಸ್ಪಷ್ಟನೆ ಕೋರಿ ಆಯೋಗಕ್ಕೆ ಪತ್ರ ಬರೆಯಲಾಗುತ್ತದೆ ಎಂದರು.
ಈಗ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಚಿವರು ದಸರಾ ಕಾರ್ಯಕ್ರಮಗಳಲ್ಲಿ ಸದ್ಯಕ್ಕೆ ಭಾಗಿಯಾಗಲು ಸಾಧ್ಯವಿಲ್ಲವೆಂದು ಮನವರಿಕೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಹೊತ್ತಿಗೆ ಆಯೋಗದಿಂದ ನಮಗೆ ಉತ್ತರ ಬಂದ ಬಳಿಕ ಮುಂದೇನು ಮಾಡಬಹುದು ಎಂಬುದು ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.












Click it and Unblock the Notifications