ವಿಷ ಪ್ರಸಾದ ಸೇವನೆ: ಡಿಸ್ಚಾರ್ಜ್ ಆದವರ ಮನೆಗೆ ತೆರಳಿ ವೈದ್ಯರ ಚಿಕಿತ್ಸೆ
ಮೈಸೂರು, ಡಿಸೆಂಬರ್ 22 : ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಬಳಿಕ ಚಿಕಿತ್ಸೆ ಪಡೆದು ಮನೆಗೆ ಮರಳಿರುವವರಿಗೆ ಸೂಕ್ತ ಔಷಧೋಪಚಾರ ಮತ್ತು ಅವರ ಆರೋಗ್ಯದ ಮೇಲೆ ನಿಗಾ ಇಡಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ.
ಪ್ರಸಾದ ಸೇವನೆಯಿಂದ ಅಸ್ವಸ್ಥರಾಗಿದ್ದವರನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ 53 ಮಂದಿ ಅಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇವರ ಆರೋಗ್ಯದ ಮೇಲೆ ನಿಗಾ ಇಡುವುದಕ್ಕಾಗಿ ಮತ್ತು ಅಗತ್ಯ ಬಿದ್ದರೆ ಸೂಕ್ತ ಚಿಕಿತ್ಸೆ ನೀಡುವುದಕ್ಕಾಗಿ ವೈದ್ಯರ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.
ಕೊಳ್ಳೇಗಾಲ, ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮಾರ್ಟಳ್ಳಿ, ರಾಮಾಪುರ, ಮಹದೇಶ್ವರ ಬೆಟ್ಟ, ಕೌದಳ್ಳಿ, ಪೊನ್ನಾಚಿ, ಹನೂರು, ಲೊಕ್ಕನಹಳ್ಳಿ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ.

ಮಾರ್ಟಳ್ಳಿ ಆರೋಗ್ಯ ಕೇಂದ್ರದಲ್ಲೂ ಚಿಕಿತ್ಸೆ
ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೆಂಟಿಲೇಟರ್ ಹೊಂದಿರುವ ಎರಡು ಆಂಬುಲೆನ್ಸ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲು ಸೂಚಿಸಲಾಗಿದೆ.
ಕೊಳ್ಳೇಗಾಲ ತಾಲ್ಲೂಕಿನ ಎಲ್ಲ ಆಸ್ಪತ್ರೆಗಳಿಗೆ ವೈದ್ಯಕೀಯ ಕಾಲೇಜಿನ 8 ವೈದ್ಯರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಮನ್ವಯದೊಂದಿಗೆ ನಿಯೋಜಿಸಲಾಗುತ್ತಿದೆ. ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ವೈದ್ಯಾಧಿಕಾರಿಗಳ ತಂಡವನ್ನು 24x7 ಅವಧಿಯಲ್ಲಿಯೂ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಅಲ್ಲದೇ, ತಾಲ್ಲೂಕು ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು 24x7 ಅವಧಿಯಲ್ಲಿಯೂ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.ನಿಯೋಜನೆಗೊಂಡ ವೈದ್ಯಾಧಿಕಾರಿ, ಸಿಬ್ಬಂದಿಗೆ ಪಾಳಿಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಬೇಕು.
ಪ್ರತ್ಯೇಕ ಹಾಸಿಗೆ ವ್ಯವಸ್ಥೆ
ಕೊಳ್ಳೇಗಾಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತ್ರಸ್ತರಿಗೆ ಪ್ರತ್ಯೇಕವಾಗಿ ಹಾಸಿಗೆ ವ್ಯವಸ್ಥೆ ಮತ್ತು ಔಷಧಿಗಳನ್ನು ಕಾಯ್ದಿರಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವ ಸಂತ್ರಸ್ತರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಮಾಲೋಚನಾ ತಂಡಗಳು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ಮಾಡಲಿದ್ದಾರೆ. ತಾಲ್ಲೂಕು ನೋಡೆಲ್ ಅಧಿಕಾರಿಗಳು, ಸಮಾಲೋಚನಾ ತಂಡವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲವನ್ನೂ ನೋಡಿಕೊಳ್ಳಲಿದ್ದಾರೆ.

ಖಿನ್ನತೆಗೆ ಒಳಗಾಗದಂತೆ ಆಪ್ತ ಸಮಾಲೋಚನೆ
ಸಂತ್ರಸ್ತರು ಯಾವುದೇ ಖಿನ್ನತೆ ಹಾಗೂ ಆತಂಕಕ್ಕೆ ಒಳಗಾಗದಂತೆ ಮಾನಸಿಕ ತಜ್ಞರಿಂದ ಅಪ್ತ ಸಮಾಲೋಚನೆ ಸಹ ನಡೆಸಲಾಗುತ್ತಿದೆ. ದುರಂತದಲ್ಲಿ ಅಸ್ವಸ್ಥರಾಗಿರುವ ಎಲ್ಲಾ ಕುಟುಂಬ ವರ್ಗದವರಿಗೆ ದೈನಂದಿನ ಬದುಕಿಗೆ ತೊಂದರೆಯಾಗದಂತೆ ನೋಡಿಕೊಳ್ಳಲುಪಡಿತರ ಪದಾರ್ಥಗಳನ್ನುಸಂತ್ರಸ್ತರ ಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಮೃತರ ಕುಟುಂಬಕ್ಕೆ 25 ಕೆಜಿ ಅಕ್ಕಿ
ಮೃತಪಟ್ಟವರ ಕುಟುಂಬಗಳಿಗೆ 25 ಕೆಜಿ ಅಕ್ಕಿ, 5 ಕೆಜಿ ಬೇಳೆ, 3 ಕೆಜಿ ಸಕ್ಕರೆ, 2 ಲೀಟರ್ ಅಡುಗೆ ಎಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ. ಅಸ್ವಸ್ಥರಾಗಿದ್ದವರ ಕುಟುಂಬಗಳಿಗೂ ಆಹಾರ ಪದಾರ್ಥಗಳನ್ನು ತಲುಪಿಸಲಾಗುತ್ತಿದೆ. 3 ಕೆಜಿ ರಾಗಿಯನ್ನೂ ವಿತರಣೆ ಮಾಡಲಾಗುತ್ತಿದೆ.












Click it and Unblock the Notifications