ಮೈಗಾಡ್, ಪಿರಿಯಾಪಟ್ಟಣದಲ್ಲಿ ಏಲಿಯನ್ ಮತ್ತೆ ಕಾಣಿಸಿತಾ?
ಪಿರಿಯಾಪಟ್ಟಣ, ಮೇ 03 : ಕಳೆದ ವರ್ಷ ನವೆಂಬರ್ನಲ್ಲಿ ಪಿರಿಯಾಪಟ್ಟಣ ತಾಲೂಕಿನ ಕಣಗಾಲಿನಲ್ಲಿ ಬಾಹ್ಯಾಕಾಶಜೀವಿ(ಏಲಿಯನ್ಸ್) ಕಂಡ ಬಗ್ಗೆ ಸುದ್ದಿಯಾಗಿತ್ತು. ಇದೀಗ ತಾಲೂಕಿನ ಮತ್ತೊಂದು ಗ್ರಾಮವಾದ ಸೂಳೆಕೋಟೆ ಗ್ರಾಮದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ.
ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಯಲ್ಲಿ ಗ್ರಾಮದಲ್ಲಿ ತೀಕ್ಷ್ಣ ಬೆಳಕು ಕಂಡು ಬಂತು ಮತ್ತು ದೊಡ್ಡ ಗಾತ್ರದ ಹಾರುವ ತಟ್ಟೆಯಂತೆ ಕಂಡು, ವಿಚಿತ್ರ ಸದ್ದು ಮಾಡುತ್ತಾ ಹೋಯಿತು. ಇದನ್ನು ನೋಡಿ ಹೆದರಿಯಾಗಿ ಓಡಿ ಬಂದೆವು. ಮತ್ತೆ ನೋಡಿದಾಗ ಅಲ್ಲೇನು ಇರಲಿಲ್ಲ ಎಂದು ಗ್ರಾಮದ ಕೆಲವರು ಬಣ್ಣಿಸುತ್ತಿದ್ದಾರೆ.
ಏಲಿಯನ್ಸ್ ಇದ್ದವೆ? : ಆಸ್ಟ್ರೋಬಯಾಲಜಿ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟವಾದ ಅಧ್ಯಯನವೊಂದು ಏಲಿಯನ್ಸ್ ಇರುವಿಕೆಯ ಬಗ್ಗೆ ಪ್ರಬಂಧವನ್ನು ಪ್ರಕಟಿಸಿದೆ. ಆಡಂ ಫ್ರಾಂಕ್ ಮತ್ತು ವುಡ್ರಫ್ ಎಂಬಿಬ್ಬರು ವಿಜ್ಞಾನಿಗಳು, ಭೂಮಿಯಿಂದ ಬಹುದೂರ ಅತ್ಯಂತ ಬುದ್ಧಿವಂತ ಜೀವಿಗಳು ಇರುವುದರ ಬಗ್ಗೆ ಕುರುಹುಗಳಿವೆ ಎಂದು ಹೇಳಿದ್ದಾರೆ. [ಏಲಿಯನ್ಸ್ ಗೆ ಸಂದೇಶ ಕೊಟ್ಟ ಕನ್ನಡ ದನಿ 'ಪೈ']
ಗ್ರಾಮವೇ ಬೆಳಕಾಯಿತಂತೆ : ಶನಿವಾರ ರಾತ್ರಿ ಜಮೀನಿನಲ್ಲಿ ಶುಂಠಿ ಕೃಷಿಗೆ ನೀರು ಹಾಯಿಸುತ್ತಿದ್ದಾಗ ಏಲಿಯನ್ಸ್ನ್ನು ನೋಡಿದ್ದಾಗಿ ಗ್ರಾಮದ ಭಗವಂತಪ್ಪ, ರಾಜಮ್ಮ, ಶಂಕರಪ್ಪ, ರಾಜು, ಮೋಹನ್ ಹೇಳುತ್ತಿದ್ದಾರೆ. ಇಷ್ಟಕ್ಕೂ ಅವರಿಗೆ ಅದೊಂದು ಏಲಿಯನ್ಸ್ ಎಂಬ ಬಗ್ಗೆ ಗೊತ್ತಿಲ್ಲ. ಆಕಾಶದಲ್ಲಿ ಸಾಗಿದ ಆ ಪ್ರಖರ ಬೆಳಕಿನಿಂದ ಗ್ರಾಮವೇ ಬೆಳಕಾದಂತೆ ಕಂಡು ಬಂದಿತಂತೆ. ಕೆಲವರು ಸೂರ್ಯನ ನೋಡಿದ ಅನುಭವವಾಯಿತು ಎನ್ನುತ್ತಾರೆ. [ಅಬ್ಬಬ್ಬಾ... ಅನ್ಯಗ್ರಹದ ಜೀವಿಗಳಿಗೂ ಬಲೆ ಹಾಕಿದ ಚೀನಾ!]
ಒಟ್ಟಾರೆ ಒಂದು ಅಚ್ಚರಿಯನ್ನು ಕಂಡ ಜನ ಜಮೀನಿನಿಂದ ಓಡಿ ಬಂದು ಮನೆ ಸೇರಿದ್ದಾರೆ. ಕೇವಲ ಐದೇ ನಿಮಿಷದಲ್ಲಿ ನಡೆದ ಘಟನೆಯಿಂದ ಗಾಬರಿಗೊಂಡ ಜನ ನಕ್ಷತ್ರ ಬೀಳಬಹುದೆಂಬ, ಈ ಭೂಮಗೆ ಮತ್ತೇನು ಕಾದಿದೆಯೋ ಎಂಬ ಭಯದಿಂದ ಓಡಿ ಬಂದಿದ್ದಾಗಿ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಏಲಿಯನ್ಸ್ ಕಾಣಿಸಿದೆ ಎಂಬುದಕ್ಕೆ ಯಾವುದೇ ಕುರುಹುಗಳು ಇಲ್ಲ.
ಇಷ್ಟಕ್ಕೂ ಇದೇ ವ್ಯಾಪ್ತಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದೆ ಎಂಬುದು ನಿಜವೇ ಅಥವಾ ಭ್ರಮೆಯೇ ಎಂಬುದು ಮಾತ್ರ ತಿಳಿಯದಾಗಿದೆ.