ಮೀಸಲಾತಿ ಬೇಡಿಕೆ; ಈಶ್ವರಪ್ಪ ವಿರುದ್ಧ ಸ್ವ ಪಕ್ಷದವರ ಮುನಿಸು!
ಮೈಸೂರು, ಮಾರ್ಚ್ 02: ರಾಜ್ಯದಲ್ಲಿ ಶುರುವಾಗಿರುವ ಮೀಸಲಾತಿ ಹೋರಾಟಗಳ ಬಗ್ಗೆ ಬಿಜೆಪಿ ನಾಯಕ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮದೇ ಪಕ್ಷದ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿ ಕುರುಬರ ಎಸ್ಟಿ ಮೀಸಲಾತಿಗಾಗಿ ಆಗ್ರಹಿಸಿ ಬೃಹತ್ ಸಮಾವೇಶ ನಡೆಯಿತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ್ ಪ್ರಸಾದ್, "ಯಾರು ರೀ ಅದು ಈಶ್ವರಪ್ಪ, ವಿಶ್ವನಾಥ್? ಯಾವುದೋ ವೇದಿಕೆ ಮೇಲೆ ನಿಂತುಕೊಂಡು, ಜನ ಸೇರಿಸಿ ಮೀಸಲಾತಿ ಕೇಳುವುದಕ್ಕೆ ಆಗುತ್ತಾ?. ಬೀದಿಯಲ್ಲಿ ನಿಂತು ಮೀಸಲಾತಿ ಮಾತನಾಡುವುದಲ್ಲ" ಎಂದರು.
"ಮೀಸಲಾತಿ ಬಗ್ಗೆ ನಾನು ಮಾತನಾಡುವಾಗ ಸರಿಯಾಗಿ ಉತ್ತರ ಕೊಡಬೇಕು. ಸುಧೀರ್ಘವಾಗಿ ರಾಜಕಾರಣ ಮಾಡಿರುವವನು ನಾನು. ಮೀಸಲಾತಿ ಪ್ರಶ್ನೆ ಕೇಂದ್ರದ ಮುಂದೆ ಇರುತ್ತದೆ. ಎಸ್ಟಿಗೆ ಕೊಡಬೇಕೋ, ಬೇಡವೋ ಎನ್ನುವುದನ್ನು ಕೇಂದ್ರ ತೀರ್ಮಾನ ಮಾಡುತ್ತದೆ. ರಾಜ್ಯ ಸರ್ಕಾರ ಕೇವಲ ಶಿಫಾರಸ್ಸು ಮಾತ್ರ ಮಾಡಬೇಕು" ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.

"ರಾಜ್ಯ ಸರ್ಕಾರ ಶಿಫಾರಸು ಮಾಡಿದ ಬಳಿಕ ತಜ್ಞರ ಸಮಿತಿ ನೇಮಕ ಮಾಡಬೇಕು. ಇದನ್ನು ಮಾಡಿದವರು ಹಾವನೂರು ಒಬ್ಬರೇ. ನಾಯಕ ಸಮಾಜವನ್ನು ಎಸ್ಟಿಗೆ ಸೇರಿಸಲು ಕಾನೂನು ರೀತಿಯಲ್ಲಿ ಹೋರಾಟ ಮಾಡಿದರು. ಆದರೆ, ಇದೀಗ ಇವರು ಮಾಡುತ್ತಿರುವುದು ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಮೈ ಮೇಲೆ ಬಟ್ಟೆ ಇಲ್ಲದವರು ಮೀಸಲಾತಿ ಕೇಳಲಿ. ಆನೆ ಮೇಯಿಸಿಕೊಂಡು ಕಾಡಲ್ಲಿ ಇರುವವರು ಕೇಳಿದರೆ ಅದನ್ನು ಒಪ್ಪೋಣ. ಆದರೆ, ದೊಡ್ಡ ದೊಡ್ಡ ಉದ್ಯಮಿಗಳು, ಉಪ ಮುಖ್ಯಮಂತ್ರಿಗಳಾಗಿದ್ದವರು. ರಿಯಲ್ ಎಸ್ಟೇಟ್ ಮಾಡುವವರಿಗೆ ಮೀಸಲಾಗಿ ಕೊಡಬೇಕಾ?" ಎಂದು ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದರು.
ಎಂಟಿಬಿ ನಾಗರಾಜ್ ವಿರುದ್ಧ ಗರಂ; ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶ್ರೀನಿವಾಸ ಪ್ರಸಾದ್, "ಆ ಎಂಟಿಬಿ 10 ಕೋಟಿ ಕೊಟ್ಟು ಹೆಲಿಕಾಪ್ಟರ್ ತಗೋಳೋಕೆ ಆಗುತ್ತೆ. ಇಂಥವರೆಲ್ಲ ಮಿಸಲಾತಿ ಕೇಳ್ತಾರೆ?. ಅದ್ಯಾರೋ 2A ಗೆ ಸೇರಿಸಿ ಅಂತಾರೆ, ಕುಳಿತಿರುವ ಜಾಗದಲ್ಲಿ 2Aಗೆ ಸೇರಿಸಲು ಆಗುತ್ತಾ? ಇವೆಲ್ಲದರ ಬಗ್ಗೆ ಸರ್ಕಾರ ಸ್ಪಷ್ಟವಾದ ಹೇಳಿಕೆ ಕೊಡಬೇಕು" ಎಂದು ಒತ್ತಾಯಿಸಿದರು.












Click it and Unblock the Notifications