ನರೇಂದ್ರ ಮೋದಿಯನ್ನು ವಿಶ್ವನಾಥ್ ಹಾಡಿ ಹೊಗಳಿದ್ದು ಹೀಗೆ
ಮಡಿಕೇರಿ, ಮೇ 22: ನಿಯೋಜಿತ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಸರದಿ ಈಗ ಕಾಂಗ್ರೆಸ್ ಪಕ್ಷದ್ದು. ಗುಜರಾತ್ ಕಾಂಗ್ರೆಸ್ ಮುಖಂಡ ವಾಘೇಲಾ ನಂತರ ಈಗ ಮೈಸೂರಿನ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್ ವಿಶ್ವನಾಥ್, ಮೋದಿ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದಾರೆ.
ದೇಶದ ಎಲ್ಲಾ ರಾಜಕಾರಣಿಗಳಿಗೆ ಮೋದಿ ಒಂದು ನಿದರ್ಶನ. ಹಿಡಿದ ಕೆಲಸವನ್ನು ತಪಸ್ಸಿನಂತೆ ನಿರ್ವಹಿಸಿ ಹೇಗೆ ಗೆಲುವು ಸಾಧಿಸಬೇಕು ಎನ್ನುವುದಕ್ಕೆ ದೇಶದ ಎಲ್ಲಾ ರಾಜಕಾರಣಿಗಳಿಗೆ ಮೋದಿ ಮಾದರಿಯಾಗಿದ್ದಾರೆ.
ಪಕ್ಷಭೇಧ ಮರೆತು ದೇಶದ ಪ್ರತಿಯೊಬ್ಬ ರಾಜಕಾರಣಿಗಳು ಮೋದಿಯವರ ಈ ಕಾರ್ಯವೈಖರಿಯನ್ನು ಮೆಚ್ಚಲೇಬೇಕೆಂದು ವಿಶ್ವನಾಥ್ ಶಹಬ್ಬಾಸ್ ಗಿರಿ ನೀಡಿದ್ದಾರೆ. (ನಮೋ ಅಂದ್ರೆ ನನಗೆ ಮೋಸ ಹೊಸ ವ್ಯಾಖ್ಯಾನ)
ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ವಿಶ್ವನಾಥ್, ನಮ್ಮವರಿಂದಲೇ ನಾನು ಸೋಲು ಅನುಭವಿಸಬೇಕಾಯಿತು. ನನ್ನ ಸೋಲು ನಮ್ಮವರಿಗೆ ಸಂತಸ ತಂದಿದ್ದರೆ ನನಗೆ ಅಷ್ಟೇ ಸಾಕು ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನ ವಿಜೇತ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಅಭಿವೃದ್ದಿ ಕೆಲಸಗಳಿಗೆ ನನ್ನ ಬಳಿ ಚರ್ಚಿಸಲು ಬಂದರೆ ಮುಕ್ತ ಮನಸ್ಸಿನಿಂದ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ.
ಹಾಗೆಯೇ, ಕಾಂಗ್ರೆಸ್ ಕಾರ್ಯಕರ್ತರ ಮತ್ತು ಅಧಿಕಾರಿಗಳ ಜೊತೆ ಬಿಜೆಪಿ ದಬ್ಬಾಳಿಕೆ ನಡೆಸಲು ಬಂದರೆ ಸಮರ್ಥವಾಗಿ ಎದುರಿಸುವ ಶಕ್ತಿ ಕಾಂಗ್ರೆಸ್ಸಿಗಿದೆ ಎಂದು ವಿಶ್ವನಾಥ್ ಹೇಳಲು ಮರೆಯಲಿಲ್ಲ.
ವಾಘೇಲಾ : ಈ ಬಾರಿ ನರೇಂದ್ರ ಮೋದಿಯವರಿಂದಾಗಿ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿದೆ. ಸಂವಿಧಾನದ ಚೌಕಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮೋದಿ ಕಾರ್ಯಪ್ರವತ್ತರಾಗಲಿ. ಗೋಧ್ರೋತ್ತರ ಗಲಭೆಯಲ್ಲಿ ಮೋದಿ ಪಾತ್ರ ಏನೂ ಇಲ್ಲ ಎಂದು ಗುಜರಾತ್ ಪ್ರತಿಪಕ್ಷದ ನಾಯಕ ಶಂಕರ್ ಸಿಂಗ್ ವಾಘೇಲಾ ಬುಧವಾರ (ಮೇ 22) ಗುಜರಾತ್ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಹೇಳಿದ್ದರು.