ಮುಡಾ ಕೇಸ್ ಬಗ್ಗೆ ಸಿಎಂ ಸಹೋದರ ಶಾಕಿಂಗ್ ಹೇಳಿಕೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕೇಸ್ ಸದ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಸುರುಳಿಯಂತೆ ಸುತ್ತಿಕೊಂಡಿದೆ. ಈ ಬಗ್ಗೆ ಮೊದಲ ಬಾರಿಗೆ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ಅಣ್ಣ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ನನ್ನಣ್ಣ ರಾಜಕೀಯದಲ್ಲಿ ಹಲವು ವರ್ಷಗಳನ್ನು ಕಳೆದಿದ್ದಾರೆ. ಇಷ್ಟೂ ವರ್ಷವೂ ಅವರ ಮೇಲೆ ಯಾವುದೇ ಕಳಂಕವಿಲ್ಲ. ಈಗ ಅವರ ಮೇಲೆ ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಮುಡಾ ಕೇಸ್ ಬಗ್ಗೆ ನನಗೆ ಅಷ್ಟೇನೂ ಗೊತ್ತಿಲ್ಲ. ಈ ನಿವೇಶನಗಳ ವಿಚಾರವು ನಮ್ಮ ಅತ್ತಿಗೆಯವರಿಗೆ ಗೊತ್ತಿರಬಹುದು. ಅದೂ ಕೂಡ ಸ್ಪಷ್ಟವಾಗಿ ನನಗೂ ಗೊತ್ತಿಲ್ಲ ಎಂದಿದ್ದಾರೆ.

ಈ ನಿವೇಶನಗಳ ವಿಚಾರವು ನಮ್ಮ ಅಣ್ಣನಿಗೆ ಗೊತ್ತಿರಲಿಲ್ಲ ಅನಿಸುತ್ತೆ. ಈಗೇನೋ ಸೈಟ್ಗಳನ್ನು ವಾಪಸ್ ಕೊಡುತ್ತಿದ್ದಾರಂತೆ. ಸೈಟ್ಗಳನ್ನೇ ವಾಪಸ್ ಕೊಟ್ಟ ಮೇಲೆ ಅವರ ರಾಜೀನಾಮೆ ಕೇಳುವುದರಲ್ಲಿ ಅರ್ಥವೇ ಇಲ್ಲ. ನನ್ನ ಅಣ್ಣನ ರಾಜಕೀಯ ವಿರೋಧಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಂದಲೇ ಈ ಕಳಂಕ ಬಂದಿದೆ. ನನ್ನ ಅಣ್ಣನನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸಂಚು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ನನ್ನಣ್ಣನಿಗೆ ಆಸ್ತಿ ಮೇಲೆ ದುರಾಸೆ ಇಲ್ಲ. ನಮ್ಮ ತಂದೆಯವರೇ ನಮಗೆಲ್ಲ ಬೇಕಾದಷ್ಟು ಜಮೀನು ಮಾಡಿಟ್ಟಿದ್ದಾರೆ. ಅಪ್ಪನ ಸಂಪಾದಿಸಿದ್ದ ಜಮೀನನ್ನೇ ನಾವೆಲ್ಲ ಹಂಚಿಕೊಂಡು ಜೀವನ ಮಾಡುತ್ತಿದ್ದೇವೆ. ಅದನ್ನು ಬಿಟ್ಟರೆ ನಮಗೆ ಅಂತ ಬೇರೆ ಯಾವುದೇ ಆಸ್ತಿ ಇಲ್ಲ. ಮುಡಾದಿಂದ ನಮ್ಮ ಅತ್ತಿಗೆಯವರಿಗೆ ಸೈಟ್ ಬಂದಿರುವ ವಿಚಾರವೂ ನಮಗೆ ಇಲ್ಲಿವರೆಗೆ ಗೊತ್ತಿರಲೇ ಇಲ್ಲ. ಯಾವುದೇ ತಪ್ಪು ಮಾಡದ ನನ್ನ ಸಿದ್ದರಾಮಣ್ಣ ಯಾವ ಕಾರಣಕ್ಕೂ ರಾಜೀನಾಮೆ ಕೊಡಬಾರದು ಎಂದು ಸಹೋದರ ಸಿದ್ದೇಗೌಡ ಅಭಿಪ್ರಾಯ ತಿಳಿಸಿದ್ದಾರೆ.
ಕಳೆದ 40 ವರ್ಷಗಳಿಂದಲೂ ನಮ್ಮಣ್ಣನ ಮೇಲೆ ಒಂದೂ ಕಪ್ಪುಚುಕ್ಕೆ ಇಲ್ಲ. ಸೈಟ್ ಅನ್ನೇ ಹಿಂತಿರುಗಿಸಿದ ಮೇಲೆ ರಾಜೀನಾಮೆ ಯಾಕೆ ಕೊಡಬೇಕು ಸಿದ್ದರಾಮಯ್ಯ ಯಾವ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನಗಳ ಹಂಚಿಕೆ ಪ್ರಕರಣವು ಸಿಎಂ ಸಿದ್ದರಾಮಯ್ಯ ಅವರಿಗೆ ಪಾಶದಂತೆ ಸುತ್ತಿಕೊಳ್ಳುತ್ತಿದೆ. ಕೋರ್ಟ್ ನಿರ್ದೇಶನದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಎ1 ಆರೋಪಿ ಮಾಡಿದ್ದಾರೆ.
ಮತ್ತೊಂದೆಡೆ ಸಿಎಂ ಅವರ ಚಲನವಲನಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ಹದ್ದಿನಕಣ್ಣಿಟ್ಟಿದ್ದು, ಶೀಘ್ರದಲ್ಲೇ ಸಿಎಂ ಆಪ್ತರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಿದೆ ಎಂದು ವರದಿಯಾಗಿದೆ. ಮುಡಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿರುವ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ಕೂಡ ಇಸಿಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿ, ತನಿಖೆ ಕೂಡ ಆರಂಭವಾಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಇಡಿಯಿಂದಲೂ ಸಂಕಷ್ಟ ಎದುರಾಗಿದೆ. ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿಕೊಂಡಿದೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹವೂ ಜೋರಾಗಿ ಕೇಳಿಬಂದಿದೆ.












Click it and Unblock the Notifications