ಚಾಮುಂಡೇಶ್ವರಿ ಕ್ಷೇತ್ರದಿಂದ ಏ.23ರಂದು ನಾಮಪತ್ರ ಸಲ್ಲಿಸಲಿರುವ ಸಿಎಂ
ಮೈಸೂರು, ಏಪ್ರಿಲ್ 3 : ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಏ. 23ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಈ ಕುರಿತಾಗಿ ಸ್ವತಃ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, "ಈ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧೆ ಮಾಡಿ ಐದು ಬಾರಿ ಗೆಲುವು ಸಾಧಿಸಿದ್ದೇನೆ. ಮುಖ್ಯಮಂತ್ರಿಯಾಗಿ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದೇನೆ. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನನ್ನ ಕೊನೆಯ ಚುನಾವಣೆಯನ್ನು ಈ ಕ್ಷೇತ್ರದಿಂದಲೇ ಎದುರಿಸಲು ತೀರ್ಮಾನಿಸಿದ್ದೇನೆ. ಆದ್ದರಿಂದ ಅಪಪ್ರಚಾರಕ್ಕೆ ಕಿವಿಗೊಡಬೇಡಿ" ಎಂದು ಟೀಕಿಸಿದರು.
ಕೆಲವರಿಗೆ ಸೋಲಿನ ಭಯ ಈಗಲೇ ಶುರುವಾಗಿದೆ ಹಾಗಾಗಿ ನಾನು ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದಿಲ್ಲ ಎಂದು ಅಪಪ್ರಚಾರ ಮಾಡಿ, ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದ್ದಾರೆ. ನನ್ನ ನಾಮಪತ್ರ ಸಲ್ಲಿಕೆಯಾದ ನಂತರ ಅವರೇ ಭಯದಿಂದ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸದೆ ಇದ್ದರೂ ಇರಬಹುದು ಎಂಬ ಅನುಮಾನ ನನಗೆ ಕಾಡಲು ಶುರುವಾಗಿದೆ.
— Siddaramaiah (@siddaramaiah) April 2, 2018
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಾ.ದಳ 25 ಸ್ಥಾನಗಳನ್ನು ಗೆಲ್ಲುವುದೇ ಹೆಚ್ಚು ಎಂದು ಒಂದೆಡೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅನುದಾನ ನೀಡಿ ಯೋಜನೆಗಳನ್ನು ನಾನು ಜಾರಿಗೊಳಿಸಿದರೆ, ಯಾರೋ ಗುದ್ದಲಿ ಪೂಜೆ ಮಾಡುತ್ತಾರೆಂದು ಹೆಸರು ಹೇಳದೇ ಜಿ.ಟಿ.ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications