ಗಾಂಜಾ, ಮಾದಕ ವಸ್ತು ವಿರುದ್ಧ ಮೈಸೂರು ಪೊಲೀಸ್ ಕಾರ್ಯಾಚರಣೆ
ಮೈಸೂರು, ಸೆಪ್ಟೆಂಬರ್ 7: ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಮಾರಾಟ ಹಾಗೂ ಸಂಗ್ರಹದ ವಿರುದ್ಧ ಮೈಸೂರು ನಗರ ಪೊಲೀಸರು ಸಮರ ಸಾರಿದ್ದಾರೆ.
ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರ ಸೂಚನೆ ಮೇರೆಗೆ, ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಅವರ ಮಾರ್ಗದರ್ಶನದಲ್ಲಿ, ಸಿಸಿಬಿ ಘಟಕದ ಎಸಿಪಿ ಮರಿಯಪ್ಪರವರ ನೇತೃತ್ವದಲ್ಲಿ 90 ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ನಗರ ಪೊಲೀಸರ ವಿಶೇಷ ತಂಡವು ನಗರದ ನರಸಿಂಹರಾಜ, ಮಂಡಿ, ಉದಯಗಿರಿ ಹಾಗೂ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಳಿ ಮಾಡಿದರು.
ಉಡುಪಿ: ಗಾಂಜಾ ಸೇವನೆ, ಮಾರಾಟ ಮಾಡುತ್ತಿದ್ದ ಐವರ ಬಂಧನ
ಮಾದಕ ವಸ್ತುಗಳು ಮಾರಾಟವಾಗುವ, ಅನುಮಾನವಿರುವ ಸ್ಥಳಗಳು ಹಾಗೂ ಈ ಹಿಂದೆ ಗಾಂಜಾ/ಮಾದಕ ವಸ್ತುಗಳನ್ನು ಮಾರಾಟ ಮಾಡಿ ದಸ್ತಗಿರಿಯಾಗಿರುವ ವೃತ್ತಿಪರ ಆರೋಪಿಗಳ ಮನೆಗಳ ಮೇಲೆ ಭಾನುವಾರ ದಿಢೀರ್ ದಾಳಿ ಮಾಡಿ ಗಾಂಜಾ/ ಮಾದಕ ವಸ್ತುಗಳ ಮಾರಾಟ/ಸಂಗ್ರಹ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಈ ದಾಳಿಯ ಸಮಯದಲ್ಲಿ ಯಾವುದೇ ರೀತಿಯ ಗಾಂಜಾ ಅಥವಾ ಮಾದಕ ವಸ್ತುಗಳು ದೊರೆತಿಲ್ಲ. ಆದರೆ ಮಾಧ್ಯಮಗಳಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಗಾಂಜಾ/ಮಾದಕ ವಸ್ತುಗಳ ಪ್ರಕರಣಗಳ ಬಗ್ಗೆ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ವೃತ್ತಿಪರ ಆರೋಪಿಗಳು ತಮ್ಮ ಮನೆಗಳಿಗೆ ಬೀಗ ಹಾಕಿ, ಮನೆ ಖಾಲಿ ಮಾಡಿರುವುದು ಕಂಡು ಬಂದಿದೆ.
ಮೈಸೂರು ನಗರದಲ್ಲಿ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಮಾರಾಟ, ಸಂಗ್ರಹ ಮತ್ತು ಸಾಗಾಣಿಕೆ ನಿಷೇಧ ಸಂಬಂಧ ಮೈಸೂರು ನಗರದ ಪೊಲೀಸರಿಂದ ಇದೇ ರೀತಿಯಾಗಿ ವಿಶೇಷ ಕಾರ್ಯಾಚರಣೆಗಳು ಮುಂದುವರೆಯಲಿದೆ.
ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಮಾರಾಟ, ಸಂಗ್ರಹ ಮತ್ತು ಸಾಗಾಣೆ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 100, 2418339 ಗೆ ಮಾಹಿತಿ ನೀಡುವ ಮೂಲಕ ಈ ಕಾರ್ಯದಲ್ಲಿ ಪೊಲೀಸರೊಂದಿಗೆ ಕೈಜೋಡಿಸಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.