ಮಹಿಳೆಯರಿಂದ, ಮಹಿಳೆಯರಿಗಾಗಿ ರಾಯಲ್ ಮೈಸೂರು ವಾಕ್
ಮೈಸೂರು, ಮಾ. 8 : ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಬರೀ ಪುರುಷರ ಗುಣಗಾನವೇ ಕಾಣುತ್ತದೆ. ಏಕೆ, ಸ್ತ್ರೀಯರು ಏನನ್ನೂ ಸಾಧಿಸಿಲ್ಲವೆ? ಸಮಾಜಕ್ಕೆ ಏನೂ ಕಾಣಿಕೆ ನೀಡಿಲ್ಲವೆ? ಕಣ್ತೆರೆದು ನೋಡಿದರೆ ನಿಮಗೇ ಎಲ್ಲವೂ ದಿಟವಾಗಿ ಕಾಣಿಸುತ್ತದೆ! ಮೈಸೂರಿನ ಮಹಿಳೆಯರು ಅಸಾಧ್ಯ ಸಾಧನೆಯನ್ನು ಮೆರೆದಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮೇಲಿನ ಸಂದೇಶದೊಂದಿಗೆ 'ರಾಯಲ್ ಮೈಸೂರು ವಾಕ್ಸ್' ಸಂಸ್ಥೆ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಮೈಸೂರು ಸಹಯೋಗದೊಂದಿಗೆ ಮಾರ್ಚ್ 8ರಂದು ಮಹಿಳೆಯರಿಂದ ಮೈಸೂರಿನಲ್ಲಿ ನಡಿಗೆಯನ್ನು ಆಯೋಜಿಸಿತ್ತು.
ಮಹಿಳೆಯರಿಗಾಗಿ, ಮಹಿಳೆಯರಿಂದ ಮತ್ತು ಮಹಿಳೆಯರ ಕುರಿತು ರಾಯಲ್ ಮೈಸೂರು ವಾಕ್ಸ್ ಆಯೋಜಿಸಲಾಗಿದೆ. ಮನಸ್ಸು ಮಾಡಿದರೆ ಮತ್ತು ಅವಕಾಶ ದೊರೆತರೆ ಮಹಿಳೆಯರು ಕೂಡ ಪುರುಷರಿಗೆ ಸಮಾನವಾಗಿ ಮತ್ತು ಅವರಿಗಿಂತಲೂ ಹೆಚ್ಚು ಸಾಧನೆ ಮಾಡಿ ತೋರಿಸಬಲ್ಲರು ಎಂಬುದನ್ನು ಸಾರುವುದು ಅವರ ಉದ್ದೇಶವಾಗಿದೆ.
ಮೈಸೂರಿನ ಮಹಿಳೆ ಯಾರಿಗೇನು ಕಮ್ಮಿ?
ಯುನೈಟೆಡ್ ಕಿಂಗಡಂನ ಅತ್ಯುನ್ನತ ಪ್ರಶಸ್ತಿಯಾದ ಜಾರ್ಜ್ ಕ್ರಾಸ್ ಪ್ರಶಸ್ತಿಯನ್ನು ಪಡೆದ ಮಹಿಳೆ ಮೈಸೂರಿನವರು, ಇಡೀ ದಕ್ಷಿಣ ಭಾರತದಲ್ಲಿ ಮೊದಲ ಪದವಿ ಗಳಿಸಿದ ಮಹಿಳೆ ಮೈಸೂರಿನವರು, ಅಷ್ಟೇ ಏಕೆ ಮೈಸೂರಿನ ಅರಸೊತ್ತಿಗೆಯ ಮಹಿಳೆಯರು ಕೂಡ ಸಮಾಜಕ್ಕೆ ಸಾಕಷ್ಟು ಕಾಣಿಕೆ ನೀಡಿದ್ದಾರೆ ಎನ್ನುತ್ತದೆ ರಾಯಲ್ ಮೈಸೂರು ವಾಕ್ಸ್.
ಮೈಸೂರಿನ ಬಗ್ಗೆ ನಿಮಗೆಷ್ಟು ಗೊತ್ತು ಮಹಿಳೆಯರೆ?
ರಾಯಲ್ ಮೈಸೂರು ವಾಕ್ಸ್ ಸಂಸ್ಥೆಯ ವಿದ್ಯಾಶ್ರೀ ನಾಗರಾಜು, ಪ್ರೀತಿ ಅನಂತನರಸಿಂಹನ್ ಈ ನಡಿಗೆಯ ನೇತೃತ್ವ ವಹಿಸಿದ್ದರು. ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳು, ಮೈಸೂರಿನ ಸುತ್ತ ಹೆಣೆದಿರುವ ಕಥೆಗಳು, ಅಲ್ಲಿನ ಜನಜೀವನ, ಶ್ರೀಮಂತ ಸಂಸ್ಕೃತಿಯನ್ನು ಮಹಿಳೆಯರಿಗೆ ತಿಳಿಯಪಡಿಸುವ ಉದ್ದೇಶ ಈ ಮಹಿಳೆಯರದಾಗಿದೆ.
ಮೈಸೂರೆಂದರೆ ಬರೀ ಅರಮನೆ ಅಷ್ಟೇ ಅಲ್ಲ
ಮೈಸೂರೆಂದರೆ ಉತ್ತಮ ಹವಾಮಾನ, ದಟ್ಟ ಹಸಿರು, ಅರಮನೆಗಳು, ಪಾರಂಪರಿಕ ಕಟ್ಟಡಗಳು, ಚಾಮುಂಡಿ ಬೆಟ್ಟ, ಕನ್ನಡಮಯ ಸಂಸ್ಕೃತಿಯ ಹೊರತಾಗಿಯೂ ಇನ್ನೂ ಹೇಳಲು ಸಾಕಷ್ಟಿದೆ. ಅದು ಜನರಿಗೆ, ಅದರಲ್ಲೂ ಮಹಿಳೆಯರಿಗೆ ತಲುಪಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೈಸೂರಿನ ಮಹಿಳೆಯರು ಸಮಾಜದ ಉನ್ನತಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ.
ಇಂಥ ಹಲವಾರು ಕಥೆಗಳು ನಮ್ಮ ಬಳಿ ಇವೆ
ಇಂಥ ಹಲವಾರು ಕಥೆಗಳು ನಮ್ಮ ಬಳಿ ಇವೆ. ಅವನ್ನು ಕೇಳಲು ಮಹಿಳೆಯರು ಮುಂದೆ ಬರಬೇಕು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗಿಂತ ಉತ್ತಮವಾದ ದಿನ ಮತ್ತೊಂದಿಲ್ಲ ಎಂದಿರುವ ಈ ರಾಯಲ್ ಮೈಸೂರು ವಾಕ್ಸ್ ಮಹಿಳೆಯರು ಅಭಿಯಾನ ಆರಂಭಿಸಿದ್ದಾರೆ. ಇದಕ್ಕಾಗಿ ಉತ್ಸಾಹಿ ಯುವಕ, ಯುವತಿಯರ ಒಂದು ತಂಡವನ್ನೇ ರಾಯಲ್ ಮೈಸೂರು ವಾಕ್ ಸಂಸ್ಥೆ ಕಟ್ಟಿದೆ. ಅವರೆಲ್ಲರಿಗೆ ಶುಭಾಶಯಗಳು.