ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಎಂದು ನುಡಿದ ಬಿಎಸ್ ವೈ!
ಮೈಸೂರು, ಜೂನ್ 5 : ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸಿದ್ದರಾಮಯ್ಯ ಎಂದು ಎರಡೂ ಬಾರಿ ಸಂಭೋಧಿಸುವ ಮೂಲಕ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿಯನ್ನು ಹಾಲಿಯನ್ನಾಗಿಸಿ ಎಡವಟ್ಟು ಮಾಡಿಕೊಂಡ ಪ್ರಸಂಗ ನಡೆಯಿತು.
ನಗರದ ಕೆ.ಆರ್.ಕ್ಷೇತ್ರದ ಮತದಾರಿಗೆ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಮಾರಂಭ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಎಸ್ವೈ, ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎನ್ನುವ ಮೂಲಕ ಸಿದ್ದರಾಮಯ್ಯ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ.
ಅಷ್ಟೇ ಅಲ್ಲ, ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ಬಾಯ್ತಪ್ಪಿ ಹೇಳಿದರು. ಆಗ ಕಾರ್ಯಕರ್ತರೊಬ್ಬರು ಚೀಟಿಯಲ್ಲಿ ಬರೆದುಕೊಟ್ಟು ಕುಮಾರಸ್ವಾಮಿ ಎನ್ನಿ ಎಂದ ಘಟನೆ ನಡೆಯಿತು.

ಮೊನ್ನೆ ನಡೆದ ಚುನಾವಣೆಯಲ್ಲಿ 130 ಸ್ಥಾನ ಗೆಲುತ್ತೇವೆ ಅಂದುಕೊಂಡಿದ್ದೆವು. ನಂತರದ ಬೆಳವಣಿಗೆಯಲ್ಲಿ 104 ಸ್ಥಾನ ಬಂದಿದೆ. ಕುಮಾರಸ್ವಾಮಿ ಸರ್ಕಾರ ಜನರಿಗೆ ಗೊಂದಲವನ್ನುಂಟು ಮಾಡುತ್ತಿದೆ. ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿಗಾಗಿ ಕಾಯುತ್ತಿರುವ ನೀವು ಮೊದಲು ಸಾಲಮನ್ನಾ ಮಾಡಿ.
ರಾಜ್ಯದ ಜನರಿಗೆ ಅಪಮಾನ ಮಾಡುವುದನ್ನು ನಿಲ್ಲಿಸಿ. ರೈತರ ಸಭೆ ಕರೆದು ದೊಂಬರಾಟ ಶುರು ಮಾಡಿ, ಅವರನ್ನು ಮೋಸ ಮಾಡಿದ್ದೀರಿ. ನಾವು ಬಂದ್ ಮಾಡದೆ ಇದ್ದಿದ್ದರೆ ಅವರು ರೈತರ ಸಭೆ ಕರೆಯುತ್ತಿರಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಕುಮಾರಸ್ವಾಮಿ ಅಂಡ್ ಕಂಪನಿ ಏನಾಗಲಿದೆ ಅಂತ 15-20 ದಿನದಲ್ಲಿ ಗೊತ್ತಾಗಲಿದೆ. ಕುಮಾರಸ್ವಾಮಿ ನಿಮಗೆ ನೇರವಾಗಿ ಸವಾಲು ಹಾಕುತ್ತಿದ್ದೇನೆ. ನಿಮ್ಮ ಸರ್ಕಾರ ವಿಸರ್ಜಿಸಿ ಬನ್ನಿ, ಮತ್ತೇ ಚುನಾವಣೆಗೆ ಹೋಗೋಣ. ಯಾರು ಹೆಚ್ಚು ಸ್ಥಾನ ಬರ್ತಾರೆ ಅಂತ ಗೊತ್ತಾಗಲಿದೆ ಎಂದು ಸವಾಲೆಸೆದರು.












Click it and Unblock the Notifications