2 ವರ್ಷಗಳ ಬಳಿಕ ಚಾಮುಂಡಿಬೆಟ್ಟಕ್ಕೆ ಆಷಾಢದ ಕಳೆ, ವಿಶೇಷ ವ್ಯವಸ್ಥೆಗಳೇನು?
ಮೈಸೂರು, ಜೂನ್ 28 : ಆಷಾಢದ ಶುಕ್ರವಾರ ಚಾಮುಂಡಿಬೆಟ್ಟದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವುದು ಪರಮ ಪುಣ್ಯವೆಂದು ಮತ್ತು ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಆದ್ದರಿಂದಲೇ ಪ್ರತಿ ವರ್ಷವೂ ಆಷಾಢದಲ್ಲಿ ಅದರಲ್ಲೂ ಶುಕ್ರವಾರ ತಾಯಿಯ ದರ್ಶನ ಪಡೆಯುಲು ಹಾತೊರೆಯುತ್ತಾರೆ. ಆದರೆ ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ತಾಯಿಯ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಈ ಬಾರಿ ಒಂದಷ್ಟು ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಅವಕಾಶ ಮಾಡಿಕೊಡುತ್ತಿರುವುದು ಭಕ್ತರಲ್ಲಿ ಖುಷಿ ತಂದಿದೆ.
ಈ ಬಾರಿ ಜಿಲ್ಲಾಡಳಿತ ಸ್ವಚ್ಛತೆ ಮತ್ತು ಸುರಕ್ಷತೆಯ ಪಾಲನೆಯೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆಯಲು ಅವಕಾಶ ನೀಡಿದ್ದು, ಆದರೆ ಎರಡು ಬಾರಿ ಲಸಿಕೆ ಅಥವಾ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಈ ಬಾರಿ ಜು.1, ಜು.8, ಜು. 15ಜು. 22ರಂದು ರಂದು ಆಷಾಢ ಶುಕ್ರವಾರ ಬರಲಿದ್ದು , ಜು.20ರಂದು ಚಾಮುಂಡೇಶ್ವರಿ ವರ್ಧಂತ್ಯುತ್ಸವ ನಡೆಯಲಿದೆ.
ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಉಚಿತ ಸರ್ಕಾರಿ ಬಸ್ ಸೌಲಭ್ಯ
ಒಂದು ಲಕ್ಷಕ್ಕೂ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, 2019ರ ಅಷಾಢ ಶುಕ್ರವಾರಗಳ ನಿಯಮಗಳಂತೆಯೇ ಆಷಾಢ ಶುಕ್ರವಾರಕ್ಕೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇನ್ನು ಈ ಹಿಂದೆ ಆಷಾಢ ಶುಕ್ರವಾರಗಳಲ್ಲಿ ಇದ್ದಂತೆಯೇ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರನ್ನು ಕೆಎಸ್ಆರ್ಟಿಸಿ ಬಸ್ ಮೂಲಕ ಉಚಿತವಾಗಿ ಕರೆದೊಯ್ಯಲಾಗುವುದು.
ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ
ಹಿಂದೆ ಲಲಿತ ಮಹಲ್ ಹೆಲಿಪ್ಯಾಡ್ ಆವರಣದಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತಾದರೂ ಈ ಬಾರಿ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಸೇರಿದ 18 ಎಕರೆ ಜಾಗದಲ್ಲಿ ವಾಹನ ನಿಲುಗಡೆ ಮತ್ತು ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ಬಸ್ ನಲ್ಲಿಯೇ ತೆರಳುವುದು ಅಗತ್ಯವಾಗಿದೆ. ಚಾಮುಂಡಿಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಅವಕಾಶವಿರುವುದಿಲ್ಲ. ಚಾಮುಂಡಿಬೆಟ್ಟಕ್ಕೆ ತೆರಳಲು 50 ಬಸ್ ನೀಡುವಂತೆ ಕೆಎಸ್ಆರ್ಟಿಸಿ ಡಿಸಿಗೆ ಸೂಚಿಸಲಾಗಿದೆ. ಭಕ್ತರಿಗೆ ಉಚಿತ ಪ್ರಯಾಣ ಇರುತ್ತದೆ. ಈ ಹಣವನ್ನು ದೇವಸ್ಥಾನದ ಆಡಳಿತ ಮಂಡಳಿ ಭರಿಸಲು ಸೂಚಿಸಲಾಗಿದೆ.
ಪ್ರಧಾನಿ ಮೋದಿ ಭೇಟಿ ಬಳಿಕ ಮೈಸೂರು ಅರಮನೆಗೆ ಭಾರೀ ಡಿಮ್ಯಾಂಡ್!
ಪ್ರಸಾಧ ವಿತರಣೆಗೆ ಪಾಸ್ ಅಗತ್ಯ
ಕೊರೊನಾ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಭಕ್ತರ ತಪಾಸಣೆಗೆ 20 ತಂಡಗಳಲ್ಲಿ ಆರೋಗ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಬೆಟ್ಟದ ಮಹಿಷಾಸುರ ಎದುರಿನ ಖಾಲಿ ಸ್ಥಳದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಣೆಗೆ ಸಕಲ ಸಿದ್ಧತೆ ಕಲ್ಪಿಸಲಾಗುತ್ತಿದ್ದು, ಮಳೆ ಬಂದಾಗಲೂ ತೊಂದರೆಯಾಗದಂತೆ ಶಾಮಿಯಾನ ಅಳವಡಿಕೆ ಮಾಡಲಾಗಿದೆ. ಪ್ರಸಾದ ವಿತರಿಸುವ ದಾನಿಗಳು ಜಿಲ್ಲಾಧಿಕಾರಿಗಳಿಂದ ಪಾಸ್ ಪಡೆದುಕೊಳ್ಳಬೇಕಾಗುತ್ತದೆ.
ದೇವಾಲಯದ ಸುತ್ತಾ ಮುತ್ತಾ ಕ್ಯಾಮರಾ
ಸುರಕ್ಷತೆಯ ದೃಷ್ಟಿಯಿಂದ ಮೆಟ್ಟಿಲುಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಈಗಾಗಲೇ ದೇವಸ್ಥಾನದ ಸುತ್ತಮುತ್ತ ಕ್ಯಾಮರಾ ಅಳವಡಿಸಲಾಗಿದೆ. ಹಾಗೆಯೇ ಭಕ್ತರಿಗೆ ಚಾಮುಂಡೇಶ್ವರಿ ಭಕ್ತಿ ಪ್ರಧಾನವಾದ ಸಿನಿಮಾ, ಹಾಡುಗಳ ಪ್ರದರ್ಶಿಸಲಾಗುತ್ತದೆ. ದೇವಸ್ಥಾನದ ಆವರಣ, ರಸ್ತೆ ಹಾಗೂ ಚಾಮುಂಡಿಬೆಟ್ಟದ ಗ್ರಾಮದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಿಷ್ಟಾಚಾರದ ಅನ್ವಯಕ್ಕೆ ಒಳಪಡುವ ಗಣ್ಯರಿಗೆ ಅಷಾಢ ಶುಕ್ರವಾರಗಳಂದು ಪ್ರವೇಶ ನೀಡಲಾಗುವುದು. ಉಳಿದ ಯಾರ ವಾಹನಗಳಿಗೂ ಪ್ರವೇಶ ನೀಡದಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ವಿಶೇಷ ಪ್ರಾಧಿಕಾರ ರಚನೆ
ಆಷಾಢ ಶುಕ್ರವಾರದ ಸಿದ್ಧತೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡರು ನಾಡಹಬ್ಬ ದಸರಾ ಮಹೋತ್ಸವದ ಅಭಿವೃದ್ಧಿ ಪ್ರಾಧಿಕಾರ ಮತ್ತು ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಗಮನಹರಿಸುವಂತೆ ಮಾಡಿದರು. ಈ ಮನವಿಗೆ ಸ್ಪಂದಿಸಿದ ಸಚಿವರು, ಜುಲೈ ಮೊದಲ ವಾರದಲ್ಲಿ 2022ರ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದೆ. ಆ ವೇಳೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ಸಭೆಯಲ್ಲಿ ಮೇಯರ್ ಸುನಂದಾ ಫಾಲನೇತ್ರ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಸಿ.ಎನ್.ಮಂಜೇಗೌಡ, ಡಿಸಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಪೂರ್ಣಿಮಾ, ಮುಡಾ ಆಯುಕ್ತ ಜಿ.ಟಿ.ದಿನೇಶ್ಕುಮಾರ್, ಎಡಿಸಿ ಮಂಜುನಾಥಸ್ವಾಮಿ ಮುಂತಾದವರು ಭಾಗವಹಿಸಿ ಹಲವು ಸಲಹೆಗಳನ್ನು ನೀಡಿದ್ದು. ಒಟ್ಟಾರೆಯಾಗಿ ಯಾವುದೇ ತೊಂದರೆಯಾಗದಂತೆ ಆಷಾಢ ಶುಕ್ರವಾರ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಳ್ಳಲಾಗಿದೆ.