ಹಳೆ ಮೈಸೂರು ಭಾಗದಲ್ಲಿ ನಿಲ್ಲದ ಅನ್ನದಾತನ ಆತ್ಮಹತ್ಯೆ ಸರಣಿ
ಮೈಸೂರು, ಜುಲೈ.27:ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯ ಬಗ್ಗೆ ರೈತರಿಗೆ ಸ್ಪಷ್ಟ ಮಾಹಿತಿ ಇದ್ದಂತಿಲ್ಲ. ಇದರಿಂದ ಹತಾಶಗೊಂಡ ರೈತರು ಆತ್ಮಹತ್ಯೆಯ ಮೊರೆ ಹೋಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಅದರಲ್ಲೂ ಜೆಡಿಎಸ್ ಭದ್ರಕೋಟೆ ಎಂದೇ ಪ್ರಸಿದ್ಧವಾಗಿರುವ ಹಳೆ ಮೈಸೂರು ಭಾಗದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದೆ.
ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಪ್ರತಿನಿಧಿಸುವ ಕೆಆರ್ ನಗರ ಕ್ಷೇತ್ರ ವ್ಯಾಪ್ತಿಯ ಹಾಡ್ಯ ಗ್ರಾಮದ ರೈತ ಸೋಮಶೇಖರ್ (60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2.5 ಎಕರೆ ಜಮೀನು ಹೊಂದಿರುವ ಸೋಮಶೇಖರ್ ಕೆನರಾ ಬ್ಯಾಂಕ್, ಪತ್ತಿನ ಸಹಕಾರಿ ಸಂಘ ಹಾಗೂ ಖಾಸಗಿ ವ್ಯಕ್ತಿಗಳು ಸೇರಿದಂತೆ ಒಟ್ಟಾರೆ ಸುಮಾರು ಐದು ಲಕ್ಷ ಸಾಲ ಮಾಡಿದ್ದರು.
ರೈತ ಹೇಗೆ ಸತ್ತರೂ ಆತ್ಮಹತ್ಯೆ ಎನ್ನಲಾಗುತ್ತಿದೆ: ಡಿಕೆ ಶಿವಕುಮಾರ್
ಎಚ್ಡಿಕೆ ಸಿಎಂ ಆದ ಹಿನ್ನೆಲೆಯಲ್ಲಿ ತನ್ನೆಲ್ಲಾ ಸಾಲ ಮನ್ನಾವಾಗಬಹುದೆಂಬ ನಿರೀಕ್ಷೆ ಅವರಿಗಿತ್ತು. ಆದರೆ ಅಸಮರ್ಪಕ ಸಾಲ ಮನ್ನಾ ಯೋಜನೆ ಘೋಷಣೆ ಬಳಿಕ ಖಿನ್ನತೆಗೆ ಜಾರಿದ್ದ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಅವರ ಮಗ ಹರೀಶ್ ಪೊಲೀಸರಿಗೆ ದೂರು ನೀಡಿದ್ದಾರೆ.