ಮೈಸೂರು ರೈತ ಸಾವು, ಸಿದ್ದರಾಮಯ್ಯ ಸುಮ್ಮನಿರುವುದೇಕೆ?
ಮೈಸೂರು, ನವೆಂಬರ್, 25 : ಸದ್ಯಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಲ್ಲೇ ರೈತರು ಆತ್ಮಹತ್ಯೆ ಸರಣಿ ಮುಂದುವರೆಯುತ್ತಿದ್ದರೂ ಸುಮ್ಮನಿರುವುದೇಕೆ? ಎಂದು ಜನರ ಪ್ರಶ್ನೆಯಾಗಿದೆ
ಕೆಲ ದಿನಗಳ ಹಿಂದೆಯಷ್ಟೇ ಕೆ.ಆರ್.ನಗರದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಹಸಿಯಾಗಿರುವಾಗಲೇ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಉಂಡುವಾಡಿ ಗ್ರಾಮದ ಯುವ ರೈತ ಚಂದ್ರು (36) ಸಾಲಬಾಧೆ ತಾಳಲಾರದೆ ಮಂಗಳವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ರೈತ ಚಂದ್ರು ಈತನಿಗೆ ಒಂದೂವರೆ ಎಕರೆ ಖುಷ್ಕಿ ಜಮೀನಿದ್ದು, ಜಮೀನಿನ ಹೆಸರಲ್ಲಿ ವಿಜಯ ಬ್ಯಾಂಕ್ ಮತ್ತು ಮಹಿಳಾ ಸ್ವ ಸಹಾಯ ಸಂಘಗಳು ಸೇರಿದಂತೆ ಒಟ್ಟು 4 ಲಕ್ಷ ರೂ ಸಾಲ ಮಾಡಿದ್ದನು. ಇದರೊಂದಿಗೆ ಕೈಸಾಲವೂ ಇದ್ದಿದ್ದರಿಂದ ಸಾಲ ತೀರಿಸುವ ದಾರಿಕಾಣದೆ ಆತಂಕಕ್ಕೀಡಾಗಿದ್ದನು.[ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಕೃಷಿ ಭಾಗ್ಯ]
ಈ ನಡುವೆ ಸಾಲಗಾರರು ಸಾಲ ಮರುಪಾವತಿಸುವಂತೆ ಕಾಟ ಹೆಚ್ಚಾಗಿದ್ದರಿಂದ, ಕೃಷಿ ಭೂಮಿ ಕೈಕೊಟ್ಟಿದ್ದರಿಂದ ಅನ್ಯ ಮಾರ್ಗ ಕಾಣದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.