125 ವರ್ಷದಲ್ಲೇ ಮೊದಲ ಸಲ ಮೈಸೂರು ಮೃಗಾಲಯ ಸಿಬ್ಬಂದಿ ಮೇಲೆ ಮೊಸಳೆ ದಾಳಿ
ಮೈಸೂರು, ಮಾರ್ಚ್ 21: 125 ವರ್ಷದ ಇತಿಹಾಸ ಇರುವ ಮೈಸೂರು ಮೃಗಾಲಯದಲ್ಲಿ ಇದೇ ಮೊದಲ ಬಾರಿಗೆ ಮೊಸಳೆಯೊಂದು ಮೃಗಾಲಯದ ಕಾರ್ಮಿಕರೊಬ್ಬರ ಕಾಲು ಕಚ್ಚಿ ತಿಂದ ಘಟನೆ ನಡೆದಿದೆ.
ಮೃಗಾಲಯಕ್ಕೆ ಮಂಗಳವಾರ ವಾರದ ರಜೆ ಇದ್ದ ಕಾರಣ ಮೊಸಳೆ ಮನೆಯ ಕಾರ್ಮಿಕ ಪುಟ್ಟಸ್ವಾಮಿ ಶುಚಿತ್ವದ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ವಾಪಸಾಗುವಾಗ ಎಡವಿ ಬಿದ್ದಿದ್ದಾರೆ ಪುಟ್ಟಸ್ವಾಮಿ. ಆಗ ಗಾಬರಿಗೊಂಡ ಮೊಸಳೆ ದಾಳಿ ನಡೆಸಿದೆ. ಈ ಘಟನೆಯಲ್ಲಿ ಪುಟ್ಟಸ್ವಾಮಿ ಅವರ ಬಲಗಾಲಿನ ಎರಡು ಬೆರಳನ್ನು ಮೊಸಳೆ ಕಚ್ಚಿ ತಿಂದಿದೆ.
ತಕ್ಷಣ ಇತರ ಕಾರ್ಮಿಕರು ಪುಟ್ಟಸ್ವಾಮಿ ಅವರ ರಕ್ಷಣೆ ಮಾಡಿದ್ದು, ಗಾಯಗೊಂಡ ಪುಟ್ಟಸ್ವಾಮಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರ ಎರಡು ಬೆರಳನ್ನು ವೈದ್ಯರು ತೆಗೆದಿದ್ದಾರೆ. ಕಾರ್ಮಿಕ ಪುಟ್ಟಸ್ವಾಮಿ 3 ವರ್ಷದಿಂದ ಮೊಸಳೆ ಮನೆಯಲ್ಲೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಪಕ್ಷಿಗಳು- ಕೋತಿಗಳಿಗೆ ಆಹಾರ ಕೊಡುವಾಗ ತರಚು ಗಾಯದಂಥದ್ದು ಆಗಿದ್ದಿದೆ. ಆದರೆ ಮೊಸಳೆ ದಾಳಿ ಮಾಡಿದಂಥ ಪ್ರಕರಣ ಇದೇ ಮೊದಲು. ಆದರೆ ಇದರಿಂದ ಪ್ರವಾಸಿಗರು ಗಾಬರಿ ಪಡುವಂಥ ಅಗತ್ಯವಿಲ್ಲ. ಆ ಸಿಬ್ಬಂದಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೆ ಹೀಗಾಗುತ್ತಿರಲಿಲ್ಲ್ ಎಂದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇನ್ನು ಸಿಬ್ಬಂದಿಗೆ ಸಮವಸ್ತ್ರ, ಶೂ ಎಲ್ಲ ಕೊಡಲಾಗುತ್ತದೆ. ಆ ಸುರಕ್ಷತಾ ಕ್ರಮ ಅನುಸರಿಸದೆ ಹೋಗಿದ್ದರಿಂದ ಹೀಗೆ ಆಗಿದೆ. ಅವರನ್ನು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದೀವಿ. ಇನ್ನು ಮೃಗಾಲಯದಲ್ಲಿ ಯಾವುದೇ ತೊಂದರೆ ಆಗದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೀವಿ ಎಂದು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.












Click it and Unblock the Notifications